ಹಣದಾಸೆಗೆ ವಿದೇಶಕ್ಕೆ ಹಾರಿ ಪೋಷಕರ ಮರೆಯಬೇಡಿ: ಮಾಜಿ ಶಾಸಕ ತಿಪ್ಪಾರೆಡ್ಡಿ ಕಿವಿಮಾತು

KannadaprabhaNewsNetwork |  
Published : Aug 04, 2024, 01:24 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗದ ರೆಡ್ಡಿ ಜನಸಂಘದಿಂದ ಕಮ್ಮ ರೆಡ್ಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕ ಪಡೆದ ರೆಡ್ಡಿ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಣ ದುಡಿಯುವ ಆಸೆಗೆ ವಿದೇಶಗಳಿಗೆ ಹೋಗಿ ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುವ ಕೆಲಸ ಮಾಡಬಾರದೆಂದು ಮಾಜಿ ಶಾಸಕ ಹಾಗೂ ರೆಡ್ಡಿ ಜನಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ರೆಡ್ಡಿ ಜನಸಂಘದಿಂದ ಏರ್ಪಡಿಸಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರು ಹಾಗೂ ರಾಷ್ಟ್ರಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಯಸ್ಸಾದವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಮಕ್ಕಳಾದವರ ಕರ್ತವ್ಯವೆಂದರು.

ಇಂದಿನ ದಿನಮಾನದಲ್ಲಿನ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಿದೆ. ಇದು ಮನಸ್ಸಿಗೆ ನೋವು ತರುವ ವಿಷಯವಾಗಿದೆ. ಪೋಷಕರು ನೀವು ಚಿಕ್ಕವರಿದ್ದಾಗ ಚನ್ನಾಗಿ ನೋಡಿಕೊಂಡಿದ್ದಾರೆ. ಅದೇ ರೀತಿ ಅವರು ವಯಸ್ಸಾದಾಗ ಮಕ್ಕಳಾದವರು ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ. ವೃದ್ಧಾಶ್ರಮಗಳ ಹೆಚ್ಚಳ ನಮ್ಮ ದೇಶದ ಪರಂಪರೆ, ಸಂಸ್ಕೃತಿಗೆ ವಿರುದ್ಧವಾದದ್ದಾಗಿದೆ. ಬೆಳೆಸಿದ, ಕಲಿಸಿದ ಪಾಲಕರನ್ನು ನಡೆದು ಬಂದ ದಾರಿ ಹಾಗೂ ಸಾಮಾಜಿಕ ಬದ್ಧತೆ ಎಂದಿಗೂ ಮರೆಯ ಬಾರದು ಎಂದರು.

ನಾವಿಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇಶ ಕಾಯುವ ಸೈನಿಕರ ಕೊಡುಗೆ ಅಪಾರ. ಪ್ರತಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಸೈನಿಕರನ್ನು, ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುತ್ತಿದೆ. ರೆಡ್ಡಿ ಜನಸಂಘ ರಾಜ್ಯದಲ್ಲೇ ಆರ್ಥಿಕವಾಗಿ ಸದೃಢವಾಗಿರುವ ಸಂಘಟನೆಯಾಗಿದೆ. ಇದಕ್ಕೆ ಸಮುದಾಯದ ಹಿರಿಯರ ಕೊಡುಗೆ ಆಪಾರವಾಗಿದೆ ಎಂದರು.

ಸಂಘದ ದಾವಣಗೆರೆ ನಿರ್ದೇಶಕ ಮೆ.ಕಾ.ಮುರುಳಿಕೃಷ್ಣ ಮಾತನಾಡಿ, ತಿಪ್ಪಾರೆಡ್ಡಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಬಿಜೆಪಿ ಸಮುದಾಯದವರೆಲ್ಲರೂ ಪಕ್ಷಾತೀತವಾಗಿ ಒತ್ತಾಯಿಸಬೇಕಿದೆ ಎಂದರು. ಸಂಘದ ಕಾರ್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ, ಸಮುದಾಯದ ಹಿರಿಯರ ನಿಸ್ವಾರ್ಥ ಸೇವೆ, ಬದ್ಧತೆ, ಶ್ರಮದ ಫಲವಾಗಿ 1916ರಲ್ಲಿ ಆರಂಭವಾದ ಸಂಘವಿಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಂಘ ಇನ್ನಷ್ಟು ಸದೃಢಗೊಳಿಸಲು ನಮ್ಮಲ್ಲಿರುವ ಸ್ವಾರ್ಥ ಮನೋಭಾವ ತೊರೆಯಬೇಕಿದೆ ಎಂದರು.

ಸಂಘದ ಕಾರ್ಯದರ್ಶಿ ಕೆ.ಪರಶುರಾಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಖಜಾಂಚಿ ಜಿ.ವೈ ಸುರೇಶ್‍ಕುಮಾರ್ ಹಾಗೂ ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ವ್ಯಾಪ್ತಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ತಾಲೂಕು ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು. ನೈಟಿಂಗೇಲ್‍ ಪ್ರಶಸ್ತಿಗೆ ಭಾಜನರಾದ ಹೊನ್ನಾಳಿ ತಾಲೂಕು ಬಾಗತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆ ನರ್ಸ್ ನಾಗರತ್ನ, 45 ಮಾಜಿ ಸೈನಿಕರು, 42 ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. 110 ಎಸ್ಸೆಸ್ಸೆಲ್ಸಿ ಹಾಗೂ 170 ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ