ಚಿಕ್ಕಅಂಕನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮೆರವಣಿಗೆ

KannadaprabhaNewsNetwork |  
Published : May 01, 2024, 01:16 AM IST
30ಕೆಎಂಎನ್ ಡಿ21 | Kannada Prabha

ಸಾರಾಂಶ

ಬಸವನ ಉತ್ಸವ ಮೂರ್ತಿ ಹೊತ್ತ ಹಾಗೂ ಮೆರವಣಿಗೆಯ ಜೊತೆ ಸಾಗಿದ ಯುವಕರಿಗೆ ಪ್ರತಿ ಮನೆಯಿಂದ ಒಂದೊಂದು ಬಿಂದಿಗೆ ನೀರು ಸುರಿಯಲಾಯಿತು. ಮೆರವಣಿಗೆ ಮುಗಿದ ಬಳಿಕ ಊರಿನ ಹೊರಗೆ ಮರದ ಬುಡದಲ್ಲಿ ದೇವರನ್ನು ವಿಸರ್ಜಿಸಿದರು. ಗ್ರಾಮದ ಮನೆಗಳಲ್ಲಿ ಸಂಗ್ರಹಿಸಿದ್ದ ದವಸ ಧಾನ್ಯಗಳಿಂದ ಅಡುಗೆ ಸಿದ್ದಪಡಿಸಿ ಸಾಮೂಹಿಕವಾಗಿ ಊಟ ಮಾಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಚಿಕ್ಕಅಂಕನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆ ಮೆರವಣಿಗೆ ನಡೆಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನ ಉತ್ಸವದ ಜೊತೆ ಕತ್ತೆ ಮೆರವಣಿಗೆ ನಡೆಸಿ ಬಸವನ ಮೂರ್ತಿ ಮತ್ತು ಕತ್ತೆಗೆ ಮಾರ್ಗದ ಉದ್ದಕ್ಕೂ ಪೂಜೆ ಸಲ್ಲಿಸಿದರು. ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ ಎಂದು ಹಾಡುವ ಮೂಲಕ ಮಳೆರಾಯನನ್ನು ಪ್ರಾರ್ಥನೆ ಮಾಡಿದರು.

ಬಸವನ ಉತ್ಸವ ಮೂರ್ತಿ ಹೊತ್ತ ಹಾಗೂ ಮೆರವಣಿಗೆಯ ಜೊತೆ ಸಾಗಿದ ಯುವಕರಿಗೆ ಪ್ರತಿ ಮನೆಯಿಂದ ಒಂದೊಂದು ಬಿಂದಿಗೆ ನೀರು ಸುರಿಯಲಾಯಿತು. ಮೆರವಣಿಗೆ ಮುಗಿದ ಬಳಿಕ ಊರಿನ ಹೊರಗೆ ಮರದ ಬುಡದಲ್ಲಿ ದೇವರನ್ನು ವಿಸರ್ಜಿಸಿದರು. ಗ್ರಾಮದ ಮನೆಗಳಲ್ಲಿ ಸಂಗ್ರಹಿಸಿದ್ದ ದವಸ ಧಾನ್ಯಗಳಿಂದ ಅಡುಗೆ ಸಿದ್ದಪಡಿಸಿ ಸಾಮೂಹಿಕವಾಗಿ ಊಟ ಮಾಡಿದರು.

ಮೆರವಣಿಗೆಯಲ್ಲಿ ಯಜಮಾನ್ ಧರ್ಮಣ್ಣ, ವಿಜಯಕುಮಾರ್, ಗಿರೀಶ್‌ಕುಮಾರ್, ಶಂಕರ್, ನಿಂಗೇಗೌಡ, ಸಿ.ಆರ್. ಶಂಕರ್, ಮಂಜು, ಕುಮಾರ ಸೇರಿದಂತೆ ಗ್ರಾಮಸ್ಥರು ಇದ್ದರು.

ಸಂಪೂರ್ಣ ಬರಿದಾದ ಕೋಣನಹಳ್ಳಿ ಕೆರೆ

ಕನ್ನಡಪ್ರಭ ವಾರ್ತೆ ಮಂಡ್ಯದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವುದರಿಂದ ನಗರದ ಹೊರ ವಲಯದಲ್ಲಿರುವ ಕೋಣನಹಳ್ಳಿ ಕೆರೆ ಸಂಪೂರ್ಣ ಬತ್ತಿಹೋಗಿದೆ. ಬೇಸಿಗೆಯಲ್ಲಿಯೂ ಬತ್ತದೆ ತನ್ನೊಡಲಿನಲ್ಲಿ ನೀರು ತುಂಬಿಸಿಕೊಂಡಿರುತ್ತಿದ್ದ ಕೆರೆ ಈಗ ಬಟಾಬಯಲಿನಂತೆ ಕಾಣುತ್ತಿದೆ. ಮೈಷುಗರ್ ಕಾರ್ಖಾನೆಗೆ ಕೋಣನಹಳ್ಳಿ ಕೆರೆಯಿಂದ ನೀರು ಪೂರೈಕೆಯಾಗುತ್ತಿದ್ದು, ಮಳೆ ಬಾರದಿರುವುದು, ನಾಲೆಗಳಲ್ಲಿ ನೀರು ಹರಿಯದಿರುವುದರಿಂದ ಸಂಪೂರ್ಣವಾಗಿ ಒಣಗಿನಿಂತಿದೆ.

ಮುಂಗಾರು ಪೂರ್ವ ಮಳೆ ಈ ವೇಳೆಗೆ ಆರಂಭಗೊಳ್ಳಬೇಕಿದ್ದರೂ ಮಳೆಯ ದರ್ಶನವೇ ಆಗದೆ ಆತಂಕದ ಪರಿಸ್ಥಿತಿ ಮನೆಮಾಡಿದೆ. ಮಳೆಯಿಲ್ಲದೆ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕೆರೆಗಳಲ್ಲಿದ್ದ ನೀರೆಲ್ಲವೂ ಬತ್ತಿಹೋಗುತ್ತಿದ್ದು, ಬಹುತೇಕ ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಮಳೆ ಬರದಿದ್ದರೆ ನೀರಿನ ಬವಣೆ ಇನ್ನಷ್ಟು ತೀವ್ರ ಸ್ವರೂಪಕ್ಕೆ ತಲುಪುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ