ಸರ್ಕಾರಿ ಶಾಲೆ ಸಬಲೀಕರಣಕ್ಕೆ ದಾನಿಗಳ ಸಹಕಾರ ಅಗತ್ಯ

KannadaprabhaNewsNetwork | Published : Aug 9, 2024 12:38 AM

ಸರ್ಕಾರ ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆದರೂ, ಖಾಸಗಿ ಸಂಘ, ಸಂಸ್ಥೆಗಳು, ದಾನಿಗಳ ಸಹಕಾರದ ಅಗತ್ಯವಿದೆ ಎಂದು ಬಿಇಒ ಡಿ.ದುರುಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಸರ್ಕಾರ ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆದರೂ, ಖಾಸಗಿ ಸಂಘ, ಸಂಸ್ಥೆಗಳು, ದಾನಿಗಳ ಸಹಕಾರದ ಅಗತ್ಯವಿದೆ ಎಂದು ಬಿಇಒ ಡಿ.ದುರುಗಪ್ಪ ಹೇಳಿದರು.

ನಗರದ ಗುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬೆಂಗಳೂರಿನ ಮಾರ್ವಾಡಿ ಯುವ ಮಂಚ್ ಸಂಘದಿಂದ ಆಯೋಜಿಸಿದ್ದ ಶಾಲಾ ಬ್ಯಾಗ್, ಪುಸ್ತಕ, ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಶಾಲೆಗಳ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ರಹದಾರಿಯಾಗಿದೆ ಎಂದರು.

ಮಾರ್ವಾಡಿ ಯುವ ಮಂಚ್ ಸಂಸ್ಥೆ ಅಧ್ಯಕ್ಷ ಸ್ನೇಹಕುಮಾರ್ ಜಾಜಿ ಮಾತನಾಡಿ, ಸಂಘದಿಂದ ಹಲವು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ೫೦೦೦ಕ್ಕೂ ಹೆಚ್ಚು ಶೈಕ್ಷಣಿಕ ಸಾಮಗ್ರಿಯ ಕಿಟ್‌ಗಳನ್ನು ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಈ ವರ್ಷ ಹರಿಹರ ತಾಲೂಕಿನ ಗುತ್ತೂರು, ದೀಟೂರು, ವಿನೋಬನಗರ, ನೀಲಕಂಠ ನಗರ, ಕಾಳಿದಾಸ ನಗರ, ರಾಜನಹಳ್ಳಿ ಸರ್ಕಾರಿ ಶಾಲೆ, ರಾಜನಹಳ್ಳಿ ಎ.ಕೆ. ಕಾಲೋನಿ, ಹಲಸಬಾಳು, ಎಳೆಹೊಳೆ, ಆಶ್ರಯ ಕಾಲೋನಿ, ಮಲೇಬೆನ್ನೂರು, ನಂದಿತಾವರೆ, ವಿವಿಧ ಶಾಲೆಗಳ ೧೧೦೦ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್, ಶೈಕ್ಷಣಿಕ ಸಾಮಗ್ರಿಗಳ ಕಿಟ್ ಸೇರಿದಂತೆ ೨೦ ಫ್ಯಾನುಗಳನ್ನು ವಿತರಿಸಲಾಗಿದೆ ಎಂದರು.

ಮಾರ್ವಾಡಿ ಯುವ ಮಂಚ್ ಮಾಜಿ ಅಧ್ಯಕ್ಷ ಅಂಕಿತ್ ಮೋದಿ ಮಾತನಾಡಿ, ಮುಂದಿನ ದಿನದಲ್ಲಿ ಹರಿಹರ ತಾಲೂಕಿನ ಕೆಲವು ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಹೆಗಡೆ ಮಾತನಾಡಿ, ಯಾವ ಫಲಾಪೇಕ್ಷೆ ಇಲ್ಲದೇ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ವಾಡಿ ಯುವ ಮಂಚ್‌ನ ಸರ್ವ ಪದಾಧಿಕಾರಿಗಳು ಸಹಾಯಹಸ್ತ ಚಾಚಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪ್ರಭಾರ ತಾಪಂ ಇಒ ಪಿ.ಆರ್. ರಾಮಕೃಷ್ಣಪ್ಪ, ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್, ಬೆಳಗಾವಿ ಜಿಲ್ಲಾ ಮಾರ್ಮಾಡಿ ಯುವ ಮಂಚ್ ಅಧ್ಯಕ್ಷ ಗೋಪಾಲ್ ಉಪಾಧ್ಯ, ಮಾಜಿ ಅಧ್ಯಕ್ಷ ಅಜಯ್ ಹೆಡ್ಡ, ಮಧುಸೂದನ್ ಭಟ್, ರಾಜ್ಯ ಉಪಾಧ್ಯಕ್ಷ ಗೋಪಾಲ್ ಕುಮಾರ್, ಕಾರ್ಯದರ್ಶಿ ರೋಹಿತ್ ಶರ್ಮಾ, ಮೋನಿಷಾ ಮನ್ಸೂರಿಯ, ಪಂಕಜ್ ಜಲ, ಅಂಕಿತ್ ಮೋದಿ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.