ಓಲೆಮಠದ ಡಾ.ಅಭಿನವ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

KannadaprabhaNewsNetwork | Published : Nov 9, 2024 1:09 AM

ಸಾರಾಂಶ

ಸವದತ್ತಿ ತಾಲೂಕಿನ ಗೊರವನಕೊಳ್ಳ ಹಾಗೂ ಜಮಖಂಡಿಯ ಓಲೆಮಠದ ಡಾ.ಅಭಿನವ ಚನ್ನಬಸವ ಸ್ವಾಮೀಜಿ (೬೨) ಗುರುವಾರ ರಾತ್ರಿ ಗೊರವನಕೊಳ್ಳದ ಮಠದಲ್ಲಿ ಲಿಂಗೈಕ್ಯರಾದರು.

ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕಿನ ಗೊರವನಕೊಳ್ಳ ಹಾಗೂ ಜಮಖಂಡಿಯ ಓಲೆಮಠದ ಡಾ.ಅಭಿನವ ಚನ್ನಬಸವ ಸ್ವಾಮೀಜಿ (೬೨) ಗುರುವಾರ ರಾತ್ರಿ ಗೊರವನಕೊಳ್ಳದ ಮಠದಲ್ಲಿ ಲಿಂಗೈಕ್ಯರಾದರು.

ಕೆಲ ದಿನಗಳಿಂದ ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಗೊರವನಕೊಳ್ಳ ಶಾಖಾ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ ತೀವ್ರ ಅಸ್ವಸ್ಥರಾದ ಶ್ರೀಗಳನ್ನು ಸವದತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಮಠದ ಭಕ್ತರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆಯಿಂದ ಗೊರವನಕೊಳ್ಳದ ಮಠದಲ್ಲಿ ಸಾರ್ವಜನಿಕರ ಪೂಜ್ಯರ ಪಾರ್ಥೀವ ಶರೀರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ನಂತರ ಸವದತ್ತಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಎಪಿಎಂಸಿಯಿಂದ ಹೊಸಪೇಠ ಓಣಿ, ರೇಣುಕಾ ಟಾಕೀಜ್‌ ಮಾರ್ಗವಾಗಿ, ಕವಲಪೇಟೆ ಓಣಿಯಿಂದ ಬಜಾರ್ ರೋಡ್ ಮುಖಾಂತರ ಮೆರವಣಿಗೆ ಮಾಡಿ ಮಧ್ಯಾಹ್ನ 1.30 ಸುಮಾರಿಗೆ ಜಮಖಂಡಿಯ ಓಲೆಮಠಕ್ಕೆ ಬೀಳ್ಕೊಡಲಾಯಿತು.

ಪಟ್ಟಣದಲ್ಲಿ ಪೂಜ್ಯರ ಪಾರ್ಥಿವ ಶರೀರರದ ಮೆರವಣಿಗೆಯಲ್ಲಿ ಮಹಾಂತೇಶ ಕವಟಗಿಮಠ, ವಿರುಪಾಕ್ಷ ಮಾಮನಿ, ಅಶ್ವತ ವೈದ್ಯ, ಐ.ಪಿ.ಪಾಟೀಲ, ಅಲ್ಲಮಪ್ರಬು ಪ್ರಬುನವರ, ಜಗದೀಶ ಹಳೆಮನಿ, ಎಂ.ಬಿ.ಸವದತ್ತಿ, ಗಿರೀಶ ಹಂಪಣ್ಣವರ, ಪ್ರವೀಣ ರಾಮಪ್ಪನವರ, ಬಸವರಾಜ ಕಪ್ಪಣ್ಣವರ, ಬಸವರಾಜ ಹಂಪಣ್ಣವರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಜಮಖಂಡಿಯ ಒಲೆಮಠದಲ್ಲಿ ಸಂಜೆಯವರೆಗೆ ಶ್ರೀಗಳ ಪಾರ್ಥೀವ ಶರೀರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಜಮಖಂಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿಯ ಹೊತ್ತಿಗೆ ಶ್ರೀಮಠದ ಆವರಣದಲ್ಲಿ ಲಿಂಗಾಯಿತ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹಲವಾರು ಜನ ಗಣ್ಯರು, ವಿವಿಧ ಮಠಗಳ ಪೀಠಾಧಿಪತಿಗಳು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು.

ಶ್ರೀಗಳ ಹಿನ್ನೆಲೆ:

ನಗರದ ಓಲೆಮಠದ ಅಭಿನವ ಕುಮಾರ ಡಾ.ಚನ್ನಬಸವ ಸ್ವಾಮೀಜಿ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ 15.06.1962ರಲ್ಲಿ ಗಂಗಮ್ಮ ಹಾಗೂ ಬಸಲಿಂಗಯ್ಯ ದಂಪತಿ ಪುತ್ರರಾಗಿ ಜನಿಸಿದರು. ಪೂರ್ವಾಶ್ರಮದಲ್ಲಿ ಇವರಿಗೆ 4 ಜನ ಸಹೋದರರು. ಮೊದಲಿನಿಂದಲೂ ಆಧ್ಯಾತ್ಮದತ್ತ ಇವರಿಗಿದ್ದ ಒಲವು ಪೀಠಾಧಿಪತಿಗಳಾಗುವಂತೆ ಮಾಡಿತು. ಬಿದರಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶ್ರೀಗಳು, ಬದಾಮಿ ಶಿವಯೊಗ ಮಂದಿರದಲ್ಲಿ 9 ವರ್ಷಗಳ ಕಾಲ ಶಾಸ್ತ್ರಾಭ್ಯಾಸ ಮಾಡಿದರು. ನಂತರ ಕಾಶಿ, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಗ್ಗಿ ಮಾಯಯ್ಯದೇವರ ವಚನಗಳ ಕುರಿತು ಪ್ರಬಂಧ ಮಂಡಿಸಿ, ಪಿಎಚ್‌ಡಿ ಪದವಿ ಪಡೆದರು. ಇವರಿಗೆ ಡಾ.ಎಂ.ಎಂ.ಕಲ್ಬುರ್ಗಿ ಮಾರ್ಗದರ್ಶನ ನೀಡಿದ್ದರು.

ಒಳಬಳ್ಳಾರಿಯ ತಾತನವರು ಇವರಿಗೆ ಗುರುದೀಕ್ಷೆ ನೀಡಿದ್ದರು. ಜಮಖಂಡಿ ತಾಲೂಕಿನ ಕಡಕೋಳ, ಶಿಗ್ಗಾಂವ ತಾಲೂಕಿನ ಹುಲಗೂರು, ಸವದತ್ತಿ ತಾಲೂಕಿನ ಗೊರವಿನಕೊಳ್ಳ ಸೇರಿದಂತೆ 3 ಶಾಖಾ ಮಠಗಳಿವೆ. ಇವರ ಹಿರಿಯ ಸಹೋದರ ಅನ್ನದಾನೇಶ್ವರ ಸ್ವಾಮೀಜಿ ಹೊಸಪೇಟೆಯ ಹಾಲಕೇರೆ ಮಠದ ಪೀಠಾಧಿಪತಿಗಳಾಗಿದ್ದಾರೆ. ಡಾ.ಚನ್ನಬಸವ ಸ್ವಾಮೀಜಿ 12 ವಚನ ಸಂಕಲನ, 10 ಕನವ ಸಂಕಲನ, 15 ವ್ಯಕ್ತಿ ಚರಿತ್ರೆ, 4 ಮಹಾಕಾವ್ಯಗಳು, ಅಭಿನವ ಸಿದ್ಧಬಸವೇಶ್ವರ ಅಂಕಿತದಲ್ಲಿ ಆಧುನಿಕ ವಚನಗಳು, ಸೇರಿದಂತೆ 70ಕ್ಕೂ ಹೆಚ್ಚು ವೈವಿದ್ಯಮಯ ಕೃತಿ ರಚಿಸಿದ್ದಾರೆ.

ಇವರಿಗೆ ಕನ್ನಡ ಸಾಹಿತ್ಯ ಪರಿಷತ್‌, ಕನ್ನಡಸಂಘ ಸೇರಿದಂತೆ ಅನೇಕ ಸಂಘಟನೆಗಳು ಪ್ರಶಸ್ತಿನೀಡಿ ಗೌರವಿಸಿವೆ. ಇತ್ತೀಚೆಗೆ ತೇರದಾಳದಲ್ಲಿ ನಡೆದ ನೂತನ ಮಂದಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಭುಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆಧುನಿಕ ವಚನಕಾರರು, ಪ್ರಖರ ಚಿಂತಕರು, ಖ್ಯಾತ ಪ್ರವಚನಕಾರರು, ಪ್ರಕಾಂಡ ಪಂಡಿತರು ಮಮತಾಮಯಿ, ಮಾತೃಹೃದಯಿ, ಕವಿ, ಕಲಾವಿದರು, ಸಾಹಿತಿ ಎಂಬೆಲ್ಲ ಬಿರುದುಗಳು ಇವರಗಿವೆ. ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟದಲ್ಲಿ ಶ್ರೀಗಳು ಪ್ರಮುಖ ಪಾತ್ರವಹಿಸಿದ್ದರು.

Share this article