ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದಿ.ಉಮೇಶ ಕತ್ತಿ ಅವರ ಜನ್ಮ ದಿನ: ಉಚಿತ ಆರೋಗ್ಯ ತಪಾಸಣೆ ಶಿಬಿರ

KannadaprabhaNewsNetwork | Published : Mar 15, 2024 1:26 AM

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಗುರುವಾರ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ಜನ್ಮ ದಿನದ ನಿಮಿತ್ತ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪ್ರತಿಪಾದಕರಾಗಿದ್ದ ಮಾಜಿ ಸಚಿವ ದಿ.ಉಮೇಶ ಕತ್ತಿ ಎಲ್ಲ ಜಾತಿ, ಧರ್ಮದ ಜನರನ್ನು ಪ್ರೀತಿಸುವ, ಗೌರವಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಆದರ್ಶ, ಜನಾನುರಾಗಿ ರಾಜಕಾರಣಿಯಾಗಿದ್ದರು ಎಂದು ಬೆಲ್ಲದ ಬಾಗೇವಾಡಿ ವಿರಕ್ತಮಠದ ಶಿವಾನಂದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಗುರುವಾರ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ಜನ್ಮ ದಿನದ ನಿಮಿತ್ತ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಹಲ್ಯೋಕ ತ್ಯಜಿಸಿದ ನಂತರವೂ ಜನ ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಹೊಂದಿದ್ದು ಅಂಥ ಜನಪರ ರಾಜಕಾರಣಕ್ಕೆ ಉಮೇಶ ಕತ್ತಿ ಮಾದರಿಯಾಗಿದ್ದರು ಎಂದರು.

ಸಾಮಾನ್ಯವಾಗಿ ರಾಜಕಾರಣಿಗಳು ಬದುಕಿದ್ದಾಗ ಜನಪ್ರೀಯರಾಗಿರುವುದು ಸಹಜ. ಆದರೆ, ಉಮೇಶ ಕತ್ತಿ ಕಾಲವಾದ ಬಳಿಕವೂ ಅವರು ಕೈಗೊಂಡ ಜನಪರ ಕೆಲಸಗಳು ಜನರ ಮನಸ್ಸಿನಲ್ಲಿ ಅಜರಾಮರವಾಗಿವೆ. ಕ್ಷೇತ್ರದಲ್ಲಿ ದಾಖಲೆ ಗೆಲವು ಸಾಧಿಸಿ ಈ ಭಾಗದ ಶಾಸಕ, ಸಚಿವರಾಗಿ ಸಮಾಜದಲ್ಲಿ ಹಿಂದುಳಿದ, ದುರ್ಬಲರು ಮತ್ತು ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವಲ್ಲಿ ಕೆಲಸ ಮಾಡಿ ಅಜಾತ ಶತ್ರುವಾಗಿ ಗುರುತಿಸಿಕೊಂಡಿದ್ದರು ಎಂದು ಅವರು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವ ಮುಖಂಡ ಪೃಥ್ವಿ ಕತ್ತಿ ಮಾತನಾಡಿ, ಯಾವುದೆ ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅಗತ್ಯವಿದ್ದು ಈ ಗುಣಲಕ್ಷಣಗಳು ಉಮೇಶ ಕತ್ತಿ ಅವರಲ್ಲಿದ್ದವು. ಸರಳ, ಸಜ್ಜನ, ಸಭ್ಯತೆಯಿಂದ ಕೂಡಿದ ನಾಯಕತ್ವ ಹೊಂದಿ ಇಡೀ ರಾಜ್ಯ ಸ್ಮರಿಸುವಂಥ ಕೆಲಸಗಳನ್ನು ಮಾಡಿದ್ದಾರೆ. ಹಗಲು-ರಾತ್ರಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ, ಧಣಿವರಿಯದೇ ದುಡಿದವರು. ಸ್ನೇಹಮಯ ಮತ್ತು ನಿಷ್ಕಳಂಕ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಹೇಳಿದರು.

ಅರ್ಬನ್ ಬ್ಯಾಂಕ್ ಚೇರ್ಮನ್‌ ಪವನ ಕತ್ತಿ, ಮುಖಂಡರಾದ ಭರತ ಮುನ್ನೋಳಿ, ಬಸ್ಸಯ್ಯಾ ಪೂಜೇರಿ, ಅಪ್ಪಾಸಾಹೇಬ ಖೆಮಲಾಪುರೆ, ಮುರಗೇಶ ಮಾಳಗಿ, ಸುಧೀರ ಕತ್ತಿ, ಮಹಾವೀರ ಖೆಮಲಾಪುರೆ, ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕ ಉಮೇಶ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ಪಾಟೀಲ ನಿರೂಪಿಸಿದರು. ಶಿಬಿರದಲ್ಲಿ ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ಮತ್ತು ಗೋಕಾಕ ತಾಲೂಕಿನ ನೂರಾರು ಜನ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟ್ರಸ್ಟ್, ವಿಶ್ವನಾಥ ಕತ್ತಿ ಸ್ಮಾರಕ ಧರ್ಮಾರ್ಥ ಟ್ರಸ್ಟ್, ವಿಶ್ವರಾಜ ಶುಗರ್ಸ್‌ ಇಂಡಸ್ಟ್ರೀಜ್ ಲಿಮಿಟೆಡ್ ಮತ್ತು ಮಹಾಂತೇಶ್ವರ ವಿದ್ಯಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಿತು.

ಸಂಕೇಶ್ವರ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ, ಘಟಪ್ರಭಾ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸಾಯಿಟಿ, ಗೋಕಾಕ ಗಂಗಾ ಆಸ್ಪತ್ರೆ, ಧಾರವಾಡ ಎಸ್‌ಡಿಎಂ ನಾರಾಯಣ ಹಾರ್ಟ ಸೆಂಟರ್, ಅಥಣಿ ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಚಿಕ್ಕೋಡಿ ದಿಯಾ ಹಾಸ್ಪಿಟ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.