ಕನ್ನಡಪ್ರಭ ವಾರ್ತೆ ಹನೂರು ವಿದ್ಯುತ್ ಲೊ ವೋಲ್ಟೇಜ್ ಸಮಸ್ಯೆಯಿಂದ ಮುಸುಕಿನ ಜೋಳ ಒಣಗಿದ್ದರಿಂದ ಬೇಸತ್ತ ರೈತನೊಬ್ಬ ತೆನೆ ಕಟ್ಟುವ ಸಮಯದಲ್ಲಿ ಜಾನುವಾರುಗಳ ಮೇವಿಗಾಗಿ ಬೆಳೆ ಮಾರಾಟ ಮಾಡಿದ ಘಟನೆ ನಡೆದಿದೆ.
ಹೆಚ್ಚುವರಿಟ್ರಾನ್ಸ್ಫಾರ್ಮರ್ಗೆ ಒತ್ತಾಯ:
ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನಿಂದ ಮಳೆ ಇಲ್ಲದೆ ಕಂಗಲಾಗಿರುವ ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ ಹಾಕಿರುವ ಫಸಲು ಸಹ ಒಣಗುತ್ತಿರುವುದರಿಂದ ಚೆಸ್ಕಾಂ ಇಲಾಖೆ ಹೆಚ್ಚುವರಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಿ ರೈತರಿಗೆ ನೀರಾವರಿ ಜಮೀನುಗಳ ಫಸಲು ಉಳಿಸುವಂತೆ ರೈತ ಸಂಘಟನೆ ಒತ್ತಾಯಿಸಿದೆ. ಇಲ್ಲದಿದ್ದರೆ ಸಂಬಂಧಪಟ್ಟ ರೈತ ಸಂಘಟನೆಯ ಜೊತೆ ಜನ ಜಾನುವಾರುಗಳನ್ನು ಸಹ ಆವರಣದಲ್ಲಿ ಕಟ್ಟಿಹಾಕಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘಟನೆ ಎಚ್ಚರಿಕೆ ನೀಡಿದ್ದಾರೆ. ಇರುವ ಅಲ್ಪಸ್ವಲ್ಪ ನೀರಿನಲ್ಲಿ 2 ಎಕರೆ ಮುಸುಕಿನ ಜೋಳ ಬೆಳೆಯಲಾಗಿತ್ತು. ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿಂದ ಮೋಟರ್ ಚಾಲನೆಯಾಗದೇ ಕಾಳು ಕಟ್ಟುವ ಸಮಯದಲ್ಲಿ ಫಸಲು ಸಂಪೂರ್ಣವಾಗಿ ಒಣಗಿದೆ. ಇದರಿಂದಾಗಿ ಸಾಲ ಮಾಡಿ ಜಮೀನಿನಲ್ಲಿ ಬೆಳೆದಿರುವ ಪಸಲು ಒಣಗುತ್ತಿರುವುದನ್ನು ನೋಡಲಾಗದೆ ಜಾನುವಾರುಗಳ ಮೇವಿಗಾಗಿ ಮಂಡ್ಯದ ರೈತರಿಗೆ ಕಡಿಮೆ ಬೆಲೆಗೆ ತೆನೆ ಸಮೇತ ಮಾರಾಟ ಮಾಡಿದ್ದೇನೆ ಇನ್ನು ಮುಂದಾದರು ಸಂಬಂಧಪಟ್ಟ ಜನ ಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಚೆಸ್ಕಾಂ ಅಧಿಕಾರಿಗಳು ಗಮನಹರಿಸಿ ಹೆಚ್ಚುವರಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರೈತ ದೊರೆ ಮನವಿ ಮಾಡಿದ್ದಾರೆ.