ದಸರಾ ಗೊಂಬೆ ಪ್ರದರ್ಶನ: ಜ್ಞಾನ ಭಂಡಾರವೇ ತೆರೆದಿಟ್ಟ ಭದ್ರಾವತಿ ದಂಪತಿ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ನ್ಯೂ ಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪ ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹದಲ್ಲಿ ವಾಸ
- ಉಮೇಶ್- ಕುಸುಮ ದಂಪತಿ ಹವ್ಯಾಸಕ್ಕೆ ಜನರೇ ಬೆರಗು - - - ಅನಂತಕುಮಾರ್ ಕನ್ನಡಪ್ರಭ ವಾರ್ತೆ, ಭದ್ರಾವತಿ ನಗರದ ನಿವಾಸಿಗಳಾದ ಉಮೇಶ್ ಮತ್ತು ಕುಸುಮ ದಂಪತಿ ದಸರಾ ಸಂದರ್ಭ ಗೊಂಬೆ ಪ್ರದರ್ಶನ ವಿಶೇಷ ಹವ್ಯಾಸ ರೂಢಿಸಿಕೊಂಡಿದ್ದಾರೆ. ಇವರ ಈ ಹವ್ಯಾಸ ವೈಭವದ ಮೈಸೂರು ದಸರಾ ನಾಡಹಬ್ಬ ಪರಂಪರೆ ಪ್ರದರ್ಶನಕ್ಕೆ ಮಾತ್ರ ಸೀಮಿತವಿಲ್ಲ. ಹಲವು ವಿಶಿಷ್ಟತೆಯೊಂದಿಗೆ ಅರಿವು ನೀಡುವ ಜ್ಞಾನಭಂಡಾರದಂತೆಯೂ ಪರಿವರ್ತಿಸಿಕೊಂಡಿದ್ದಾರೆ. ನಗರದ ನ್ಯೂ ಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪ ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹದಲ್ಲಿ ವಾಸವಾಗಿರುವ, ಖಾಸಗಿ ಕಂಪನಿ ನೌಕರ ಉಮೇಶ್ ಹಾಗೂ ನ್ಯಾಯಾಂಗ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಕುಸುಮ ದಂಪತಿ ೨೨ ವರ್ಷಗಳಿಂದ ಮೈಸೂರು ದಸರಾ ನಾಡಹಬ್ಬ ಪರಂಪರೆ ಗೊಂಬೆ ಪ್ರದರ್ಶನದ ಮೂಲಕ ಉಕ್ಕಿನ ನಗರ ಜನತೆಗೆ ಪರಿಚಯಿಸುತ್ತಿದ್ದಾರೆ. ಈ ಬಾರಿಯೂ 10 ದಿನಗಳ ಕಾಲ ಗೊಂಬೆಗಳ ಪ್ರದರ್ಶನ ಕೈಗೊಳ್ಳಲಾಗಿತ್ತು. ಚಂದ್ರಯಾನ-3ರ ಪ್ರದರ್ಶನ ಅವರ ಹವ್ಯಾಸಕ್ಕೆ ಮೆರಗು ನೀಡಿತ್ತು. ಈಶ ಫೌಂಡೇಷನ್ ಧ್ಯಾನಾಸಕ್ತ ಜಗದೊಡೆಯ ಶಿವನ ವಿಗ್ರಹವೂ ನೋಡುಗರ ಗಮನ ಸೆಳೆಯಿತು. ಜ್ಞಾನಭಂಡಾರದಂಥ ಪ್ರದರ್ಶನ: ತಾವರೆಕೊಪ್ಪ ಹುಲಿ-ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರ, ಭದ್ರಾ ಅಭಯಾರಣ್ಯ, ಗುಡವಿ ಪಕ್ಷಿಧಾಮ, ಮತ್ಸ್ಯಧಾಮ ಹಾಗೂ ವಿಜಯನಗರ, ಚಾಮುಂಡಿಬೆಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಡಗುಂಜಿ, ಗಾಣಗಾಪುರ, ಗೋಕರ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಗೊಂಬೆಗಳಲ್ಲಿ ಆಕರ್ಷಕವಾಗಿ ಅನಾವರಣಗೊಳಿಸಲಾಗಿತ್ತು. ಆಧುನಿಕ ಶೈಲಿಯ ಅಡುಗೆ ಮನೆ ಹಾಗು ಪ್ರಾಚಿನ ಕಾಲದ ಅಡುಗೆ ಮನೆ ಮತ್ತು ನಗರದ ಪದ್ಮನಿಲಯ ಹೋಟೆಲ್, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಸಹ ಪ್ರದರ್ಶನದಲ್ಲಿದ್ದವು. ಉಳಿದಂತೆ ನವದುರ್ಗಿಯರು, ಶೃಂಗೇರಿ ಶಾರದಾಂಬೆ, ಆಚಾರ್ಯತ್ರಯರು, ದಶವತಾರ, ವಿಶ್ವರೂಪ, ಶ್ರೀ ತಿರುಪತಿ ವೆಂಕಟೇಶ್ವರ, ಸಪ್ತಋಷಿ, ಸಂಗೀತ ವಾದ್ಯಗಳು, ಬೆಣ್ಣೆಕೃಷ್ಣ, ಲಲಿತಾದೇವಿ ಅಷ್ಟಲಕ್ಷ್ಮಿಯರು, ತ್ರಿಶಕ್ತಿ, ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ, ಭಕ್ತೆ ಮೀರಾಬಾಯಿ, ಶಿರಡಿ ಸಾಯಿಬಾಬಾ, ಬಾಲಾಂಬಿಕೆ ಜೊತೆಗೆ ವಿಶೇಷವಾಗಿ ಸುಮಾರು 100 ವರ್ಷಗಳ ಪಟ್ಟದ ಗೊಂಬೆ ಸಹ ಇಲ್ಲಿದೆ. ವೀರಯೋಧರನ್ನು ಈ ದಂಪತಿ ಬೊಂಬೆಗಳ ಸ್ಮರಿಸಿರುವುದು ಗಮನೀಯ. ಉಮೇಶ್ ತಾಯಿ ನಾಗರತ್ನ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಸಹಕಾರದೊಂದಿಗೆ ಈ ದಂಪತಿ ಗೊಂಬೆಗಳನ್ನು ಕೂರಿರುವ ಹವ್ಯಾಸ ಮೆರೆದಿದ್ದಾರೆ. - - - ಕೋಟ್ಸ್‌ ದಸರಾ ಗೊಂಬೆ ಪ್ರದರ್ಶನ ಪ್ರತಿ ಮನೆಯಲ್ಲೂ ಆಚರಿಸಬೇಕು. ಈ ಸಂಪ್ರದಾಯ ಅಜ್ಜ-ಅಜ್ಜಿಯಿಂದ ಕಲಿತುಕೊಂಡಿದ್ದೇನೆ. ತಾಯಿ ನಾಗರತ್ನ ಮಾರ್ಗದರ್ಶನದಲ್ಲಿ ಮುಂದುವರಿಸುತ್ತಿದ್ದೇನೆ. ಈ ಬಾರಿ ಚಂದ್ರಯಾನ-3 ಅನಾವರಣಗೊಳಿಸಲಾಗಿದ್ದು, ಗೊಂಬೆ ಪ್ರದರ್ಶನಕ್ಕೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ - ಉಮೇಶ್, ಭದ್ರಾವತಿ ತಾಯಿ ಮನೆಯಿಂದ ರೂಢಿಸಿಕೊಂಡು ಬಂದ ಭವ್ಯಪರಂಪರೆಯ ಈ ಆಚರಣೆಯನ್ನು ಅತ್ತೆಯ ಮನೆಯಲ್ಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿವರ್ಷ ವಿಭಿನ್ನತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ವರ್ಷ ನೂರಾರು ಮಂದಿ ಆಗಮಿಸುತ್ತಿದ್ದು, ಮತ್ತಷ್ಟು ಸ್ಫೂರ್ತಿ ಉಂಟಾಗಿದೆ - ಕುಸುಮ, ಭದ್ರಾವತಿ - - - -24ಬಿಡಿವಿಟಿ೩ ಮತ್ತು ೩(ಎ): ನ್ಯೂಕಾಲೋನಿ ವಿಐಎಸ್‌ಎಲ್ ವಸತಿ ಗೃಹದಲ್ಲಿ ಉಮೇಶ್- ಕುಸುಮ ದಂಪತಿ ಏರ್ಪಡಿಸಿದ್ದ ದಸರಾ ಗೊಂಬೆ ಪ್ರದರ್ಶನ.

Share this article