ಸೌಹಾರ್ದತೆಗಾಗಿ ಮಾನವ ಸರಪಳಿ- ನೂರಾರು ಮಂದಿ ಭಾಗಿ

KannadaprabhaNewsNetwork | Published : Jan 31, 2024 2:17 AM

ಸಾರಾಂಶ

ಇವತ್ತು ಇಡೀ ದೇಶವೇ ಡೇಂಜರ್ ಜೋನ್ ನಲ್ಲಿದೆ, ಅಪಾಯದ ತುದಿಯಲ್ಲಿದೆ. ಪಾರಾಗಬೇಕಾದರೆ ಪ್ರತಿಯೊಬ್ಬರು ಮಾತಾಡಬೇಕು. ಪ್ರತಿಯೊಬ್ಬರು ಕ್ರಿಯಾಶೀಲರಾಗಬೇಕು. ರಾಜರ ಆಡಳಿತ ಹೊರಟು ಹೋಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಸರ್ವಾಧಿಕಾರಿಗಳು ಹೋಗಿದ್ದಾರೆ. ದೊಡ್ಡದು ಅಂದುಕೊಳ್ಳುವುದೇ ಪ್ರಯತ್ನಿಸಬೇಕು

- ವಚನ ಪಾಲಿಸದವರಿಂದ ಜೈ ಶ್ರೀರಾಮ್ ಘೋಷಣೆ- ದೇವನೂರ ಮಹಾದೇವ ಕಿಡಿ

ಕನ್ನಡಪ್ರಭ ವಾರ್ತೆ ಮೈಸೂರುಸೌಹಾರ್ದ ಕರ್ನಾಟಕ ಮೈಸೂರು ಸಂಘಟನೆಯು ಮಹಾತ್ಮ ಗಾಂಧಿ ಹುತಾತ್ಮ ದಿನ- ಸೌಹಾರ್ದ ಪರಂಪರೆ ಅಭಿಯಾನ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಜಮಾಯಿಸಿದ ನೂರಾರು ಮಂದಿ ಚಾಮರಾಜ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಸೌಹಾರ್ದತೆಗಾಗಿ ಕೈಜೋಡಿಸುವಂತೆ ಕರೆ ನೀಡಿದರು. ನಂತರ ದೊಡ್ಡ ಗಡಿಯಾರ ವೃತ್ತದ ಮೂಲಕ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದರು.

ಈ ವೇಳೆ ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ವಚನ ಪಾಲನೆಗೆ ಶ್ರೀರಾಮ ಒಂದು ಪ್ರತೀಕ. ಕೊಟ್ಟ ಮಾತನ್ನು ಉಳಿಸಿಕೊಳ್ಳದವರು, ವಚನ ಪಾಲನೆ ಮಾಡದಿದ್ದವರು ಇವತ್ತು ಜೈ ಶ್ರೀರಾಮ್ ಅನ್ನುತ್ತಿದ್ದಾರೆ. ಆ ಮೂಲಕ ವಚನ ಪಾಲನೆಯ ಪ್ರತೀಕವಾದ ಶ್ರೀರಾಮನ ಸ್ಪೀರಿಟ್ ಅನ್ನು ಕೊಲ್ಲುತ್ತಿದ್ದಾರೆ. ವಚನ ಪಾಲಿಸದವರು ಅಸಮರ್ಥರು ಎಂದು ಕಿಡಿಕಾರಿದರು.

ಇವತ್ತು ಇಡೀ ದೇಶವೇ ಡೇಂಜರ್ ಜೋನ್ ನಲ್ಲಿದೆ, ಅಪಾಯದ ತುದಿಯಲ್ಲಿದೆ. ಪಾರಾಗಬೇಕಾದರೆ ಪ್ರತಿಯೊಬ್ಬರು ಮಾತಾಡಬೇಕು. ಪ್ರತಿಯೊಬ್ಬರು ಕ್ರಿಯಾಶೀಲರಾಗಬೇಕು. ರಾಜರ ಆಡಳಿತ ಹೊರಟು ಹೋಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಸರ್ವಾಧಿಕಾರಿಗಳು ಹೋಗಿದ್ದಾರೆ. ದೊಡ್ಡದು ಅಂದುಕೊಳ್ಳುವುದೇ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.

ನಮಗೆ ಈ ಪರಿಸ್ಥಿತಿ ಬರಬಾರದಾಗಿತ್ತು, ಆದರೆ ಬಂದಿದೆ. ಈ ಆಳ್ವಿಕೆ ಹೋಗದೇ ಸಮಸ್ಯೆ ಬಗೆ ಹರಿಯುವುದಿಲ್ಲ. ಇದಕ್ಕೆ ಈ ಗಳಿಗೆಯಿಂದಲೇ ಈ ಕ್ಷಣದಿಂದಲೇ ಅಭಿಪ್ರಾಯ ರೂಪಿಸೋಣ. ನಾಕಾರು ಜನರೊಟ್ಟಿಗೆ ಮಾತಾಡಬೇಕು. ವಾಟ್ಸಾಪ್ ಮೂಲಕ ಅಭಿಪ್ರಾಯ ರೂಪಿಸೋಣ. ಇಲ್ಲದಿದ್ದರೆ ಸಂವಿಧಾನ ಮತ್ತು ಪ್ರಜ್ರಾಪ್ರಭುತ್ವ ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.

ಮಂಡ್ಯದ ಕೆರಗೋಡಿನಲ್ಲಿ ಬಾವುಟ ಹಾರಿಸಿದ್ದಕ್ಕೆ ಗಲಾಟೆ ಆಗುತ್ತಿದೆ. ಅದರರ್ಥ ಏನು? ನಾವು ಏನೋ ಮಾಡಬೇಕಾಗಿತ್ತು. ಎಷ್ಟೋ ಮಾಡಬೇಕಾಗಿತ್ತು. ಅದನ್ನು ನಾವು ಮಾಡಲಿಲ್ಲ. ಅದಕ್ಕೆ ಇದಾಗುತ್ತದೆ ಅಷ್ಟೇ ಅರ್ಥ. ಸೌಹಾರ್ದತೆಗೆ ನಾವು ದೊಡ್ಡದು ಮಾಡಬೇಕಿಲ್ಲ. ಪರಸ್ಪರ ಹೆಗಲಿಗೆ ಕೈ ಹಾಕುವುದು ದೊಡ್ಡದು. ಮುಗುಳುನಗೆ ಕೂಡ ದೊಡ್ಡದು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ಮರೆತು ನಮ್ಮ ನಿಮ್ಮ ಒಳಗಡೆ ಇರುವ ದೌರ್ಬಲ್ಯ ಬಿಟ್ಟು ಹೋರಾಟ ಮಾಡಬೇಕು. ಎಲ್ಲರೂ ಮನಸ್ಸು ಪಟ್ಟರೆ ಅಸಾಧ್ಯಗಳು ಸಾಧ್ಯವಾಗಬಹುದು ಎಂದು ಅವರು ತಿಳಿಸಿದರು.

ಇವತ್ತು ಅಸಮರ್ಥರು ಆಳ್ವಿಕೆ ಮಾಡುತ್ತಿದ್ದಾರೆ. ತಾವು ಜಗತ್ತಿಗೆ ಪೈಲ್ವಾನರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಒಳಗಡೆ ಡೊಳ್ಳು. ಬೆಲೆ ಏರಿಕೆಯನ್ನು ನಿಯಂತ್ರಿಸಲಿಲ್ಲ. ನಿರುದ್ಯೋಗ ಕಮ್ಮಿ ಮಾಡಲಿಲ್ಲ. ಹಣ ದುಬ್ಬರ, ಅಮೇಲೆ ಬಡವ ಬಲ್ಲಿದರ ನಡುವೆ ಅಂತರವನ್ನು ಕಮ್ಮಿ ಮಾಡಲಿಲ್ಲ. ಕೊರೋನಾ ಕಾಲದಲ್ಲೂ ಬಡವರ ಸಂಪತ್ತನ್ನು ಕಿತ್ತಿಕೊಂಡು ಅದಾನಿ, ಅಂಬಾನಿ ಅವರ ಆದಾಯ ಡಬಲ್ ಮಾಡಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕರಾದ ಪ್ರೊ.ಕೆ.ಎಸ್. ಭಗವಾನ್, ಪ್ರೊ. ಅರವಿಂದ ಮಾಲಗತ್ತಿ, ಸಿ. ಬಸಲಿಂಗಯ್ಯ, ಪ್ರೊ. ಕಾಳಚನ್ನೇಗೌಡ, ಕೋಟಿಗಾನಹಳ್ಳಿ ರಾಮಯ್ಯ, ಎಚ್. ಜನಾರ್ಧನ್, ಹೊಸಕೋಟೆ ಬಸವರಾಜು, ಸ.ರ. ಸುದರ್ಶನ, ಸವಿತಾ, ಎಚ್. ಜನಾರ್ಧನ್, ಕೃಷ್ಣಪ್ರಸಾದ್, ಟಿ. ಗುರುರಾಜ್, ಬೆಟ್ಟಯ್ಯ ಕೋಟೆ, ಸುನಂದಮ್ಮ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಕೆ. ಬಸವರಾಜು, ಅಹಿಂದ ಜವರಪ್ಪ, ದೇವದಾಸ್, ದ್ಯಾವಪ್ಪನಾಯಕ, ಚೋರನಹಳ್ಳಿ ಶಿವಣ್ಣ, ಗೋಪಾಲಕೃಷ್ಣ, ಹರಿಹರ ಆನಂದಸ್ವಾಮಿ, ಕಲೀಂ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬಾಲಾಜಿರಾವ್, ಜಗದೀಶ್ ಸೂರ್ಯ ಮೊದಲಾದವರು ಇದ್ದರು.

-----

ಕೋಟ್...

ಸೌಹಾರ್ದತೆ ಸಮಾಜದಲ್ಲಿ ಇರಬೇಕೆಂದು ಕೇಳುತ್ತಿದ್ದೇವೆ, ಇದರರ್ಥ ಸೌಹಾರ್ದತೆ ಇಲ್ಲ. ಎಂಥ ದಯನೀಯ ಸ್ಥಿತಿ. ಇದನ್ನು ಯಾರೋ ಹಾಳು ಮಾಡಿದ್ದಾರೆ. ನ್ಯಾಯ ಬೇಕು ಎಂದು ಕೇಳುತ್ತಿದ್ದೇವೆ. ಅರ್ಥ ಏನು? ನ್ಯಾಯವನ್ನು ಯಾರೋ ಹಾಳು ಮಾಡಿದ್ದಾರೆ. ಹಾಗೇಯ ಸಹಬಾಳ್ವೆ ಬೇಕು ಎಂದು ಕೇಳುತ್ತಿದ್ದೇವೆ. ನಮ ಬಾಳ್ವೆಗೆ, ಸಮಾಜಕ್ಕೆ ಯಾರೋ ವಿಷ ಹಾಕಿದ್ದಾರೆ ಎಂದರ್ಥ.

- ದೇವನೂರ ಮಹಾದೇವ, ಹಿರಿಯ ಸಾಹಿತಿ

Share this article