ಕನ್ನಡಪ್ರಭ ವಾರ್ತೆ ಬೆಳಗಾವಿ
ಜಗತ್ತಿನಲ್ಲಿ ಯಾರಿಂದಲೂ ಕದಿಯಲಾಗದ, ಯಾರಿಗೂ ತೆರಿಗೆ ರೂಪದಲ್ಲಿ ನೀಡಲಾಗದ, ಯಾರಿಗೂ ಪಾಲು ನೀಡಲಾಗದ ಹಾಗೂ ಎಷ್ಟೇ ಖರ್ಚು ಮಾಡಿದರೂ ತೀರದ ಸಂಪತ್ತು ವಿದ್ಯೆ. ಅಂತಹ ವಿದ್ಯೆ ಒಂದಿದ್ದರೆ ಎಂತಹ ಸಂಕಷ್ಟದಿಂದಲೂ ಪಾರಾಗಬಹುದಲ್ಲದೇ ಅದು ನಮ್ಮೆಲ್ಲರ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.ಶನಿವಾರ ಶಿವಬಸವ ನಗರದ ಪ್ರಭುದೇವ ಸಭಾಗ್ರಹದಲ್ಲಿ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಶಾಲಾ ಸಂಸತ್ತು ಹಾಗೂ ಸಾಂಸ್ಕೃತಿಕ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಬಾಲ್ಯದಿಂದಲೇ ನಿರಂತರವಾಗಿ ಪ್ರಯತ್ನಿಸಿದರೆ ಒಲಿಪಿಂಕ್ ಪದಕ ಗಳಿಸುವುದು ಕಷ್ಟಸಾಧ್ಯವಲ್ಲ. ದೊಡ್ಡ ಗುರಿಯೊಂದಿಗೆ ನಿರಂತರ ಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಚಿಂತಾಮಣರಾವ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಹಣ್ಣೂರ ಮಾತನಾಡಿ, ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿ ನೆಲಕ್ಕೆ ಚೆಲ್ಲಲ್ಪಟ್ಟ ಬೀಜವೇ ಮುಂದೊಂದು ದಿನ ಮೊಳಕೆಯೊಡೆದು ಹೆಮ್ಮರವಾಗುವಂತೆ, ವಿದ್ಯಾರ್ಥಿಗಳು ತಾನು ದಡ್ಡ, ನನ್ನ ತಲೆಗೆ ವಿದ್ಯೆ ಹತ್ತುವುದಿಲ್ಲ ಎಂಬ ಕೀಳರಿಮೆಯಿಂದ ಹೊರಬಂದು ನಿರಂತರ ಅಧ್ಯಯನಶೀಲರಾಗಿ ಉನ್ನತ ಸಾಧನೆ ಮಾಡಬೇಕೆಂದರು.ಯರಗಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಿರಣ ಚೌಗಲೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೆ ಅಂತವರ ಶೈಕ್ಷಣಿಕ ಪ್ರಗತಿ ಇಮ್ಮಡಿಯಾಗುತ್ತದೆ. ವಿದೇಶಿ ಶೈಲಿಯ ಬಟ್ಟೆಯಿಂದ ಯಾರೂ ಆಧುನಿಕರಾಗಲ್ಲ. ಆದರೆ, ಉತ್ತಮ ಸಂಸ್ಕೃತಿ, ಒಳ್ಳೆಯ ಆಚಾರ ವಿಚಾರ, ಸಮಾಜಮುಖಿ ಕಾರ್ಯಗಳಿಂದ ಎಲ್ಲರೂ ಆಧುನಿಕರಾಗಬಹುದು ಎಂದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಉಪಪ್ರಾಚಾರ್ಯ ಶಿವಲೀಲಾ ಪೂಜಾರ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮನೋಹರ ಉಳ್ಳೇಗಡ್ಡಿ ನಿರೂಪಿಸಿದರು. ಶಿಕ್ಷಕಿ ಪ್ರೀತಿರಾಣಿ ಸಿದ್ರಾಮಣಿ ವಂದಿಸಿದರು.