ಶಿಕ್ಷಣ ಸಂಸ್ಕಾರಯುತವಾಗಬೇಕು: ಬಿಇಒ ಶಬನಾ ಅಂಜುಮ್

KannadaprabhaNewsNetwork | Published : Dec 3, 2024 12:31 AM

ಸಾರಾಂಶ

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಚಿಣ್ಣರ ಉತ್ಸವ ೨೦೨೪ ಶಾಲಾ ವಾರ್ಷಿಕೋತ್ಸವ ನಡೆಯಿತು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದಿನ ವಿದ್ಯಾರ್ಥಿಗಳ ಎಲಕ್ಲ ಹೆತ್ತವರು ಶಿಕ್ಷಣವಂತರಾಗಿದ್ದಾರೆ. ಆದರೆ ಅವರು ತಮ್ಮ ಮಕ್ಕಳ ಅಂಕಗಳ ಹಿಂದೆ ಇದ್ದಷ್ಟು ಅವರ ಸಾಮಾಜಿಕ ಸ್ಪಂದನೆಗೆ ಒತ್ತು ಕೊಡದೇ ಇರುವುದು ಒಂದು ದುರಂತ. ಅಂಕಗಳ ಜೊತೆಗೆ ಸಂಸ್ಕಾರವನ್ನು ಕಲಿಸಿ ಬೆಳೆಸಬೇಕು ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹೇಳಿದರು.ಅವರು ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಚಿಣ್ಣರ ಉತ್ಸವ ೨೦೨೪ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೊರ್ವ ಮುಖ್ಯ ಅತಿಥಿ ಶಾಲಾ ಹಳೇ ವಿದ್ಯಾರ್ಥಿನಿ ಉನ್ನತ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ಆಕ್ಷತಾ ಕುಲಾಲ್ ಮಾತನಾಡಿ ನಾನು ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪಿ ಸಾಧನೆ ಮಾಡಿದ ಯಶಸ್ಸಿನಲ್ಲಿ ಈ ಸಂಸ್ಥೆಯ ಕೊಡುಗೆ ಅಪೂರ್ವವಾಗಿದೆ ಎಂದು ತನ್ನ ವಿದ್ಯಾರ್ಥಿ ಜೀವನವನ್ನು ಹಂಚಿ ಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ವಾರ್ಷಿಕ ವರದಿಯನ್ನು ಸಭೆಯ ಮುಂದಿರಿಸಿದರು. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಠ್ಯ ಪಠ್ಯೇತರ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾಸಿಸಲಾಯಿತು. ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳಾದ ಶಬನಾ ಅಂಜುಮ್ ಮತ್ತು ಅಕ್ಷತಾ ಕುಲಾಲ್‌ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ದಿವ್ಯಾಶ್ರೀ ಮತ್ತು ವನೀತಾ ಅತಿಥಿಗಳನ್ನು ಸಭೆಗೆ ಪರಿಚಯ ಮಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂ. ಡಾ.ರೋಕ್ ಡಿಸೋಜ ಸಂಸ್ಥೆಯು ೨೭ನೇ ವರ್ಷಕ್ಕೆ ಕಾಲಿಡುವಾಗ ಇದನ್ನು ಹಂತ ಹಂತವಾಗಿ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಬೆಳೆಸಿದ ಎಲ್ಲ ಪೋಷಕರಿಗೆ ಶ್ಲಾಘಿಸಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೂಕ್ ಡಿಸೋಜ, ಚರ್ಚ್‌ನ ಸಹಾಯಕ ಧರ್ಮಗುರು ಓಲಿವರ್ ನಜ್ರಿತ್, ಗೊರಟ್ಟಿ ಕಾನ್ವೆಂಟಿನ ಮುಖ್ಯಸ್ಥೆ ಸಿ.ಜೇನ್ ಜೋಸೆಫ್, ಶಾಲಾ ಉಪನಾಯಕ ನೀಲ್ ಡಿಸೋಜ ಹಾಗೂ ಉಪಾಧ್ಯಕ್ಷ ರತ್ನ ಪ್ರತಾಪ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳದ ಅದ್ವಿತ್ ಮತ್ತು ಅಖಿಫಾ ನಿರೂಪಿಸಿದರು. ಶಿಕ್ಷಕಿ ಮೀನಾ ಫೆರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕಿ ನೀಮಾ ವಂದಿಸಿದರು.ನರ್ಸರಿಯಿಂದ ನಾಲ್ಕನೇ ತರಗತಿಗಳ ೬೦೦ ವಿದ್ಯಾರ್ಥಿಗಳೆಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆಗೆ ಬಂದದ್ದು ವಿಶೇಷವಾಗಿತ್ತು.

Share this article