ಯಲಬುರ್ಗಾ: ತಾಲೂಕಿನ ಸಂಗನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಈರಬಸಮ್ಮ ತೋಟಯ್ಯ ವಿರಕ್ತಿಮಠ ಒಂದು ಎಕರೆ ಜಮೀನನ್ನು ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ರಾಜ್ಯಪಾಲರ ಹೆಸರಿಗೆ ಭೂದಾನವಾಗಿ ತಮ್ಮ ಆಸ್ತಿ ನೋಂದಣಿ ಮಾಡಿಸಿದ್ದಾರೆ. ಇವರ ಪ್ರತಿಯನ್ನು ಬಿಇಒ ನಿಂಗಪ್ಪ ಕೆ.ಟಿ. ಅವರಿಗೆ ಹಸ್ತಾಂತರಿಸಿದರು.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೯೬೩ರಲ್ಲಿ ತೋಟಯ್ಯ ವಿರಕ್ತಿಮಠ ಎನ್ನುವರು ಶಾಲೆ ಕಟ್ಟಡಕ್ಕಾಗಿ ತಮ್ಮ ಒಂದು ಎಕರೆ ಜಮೀನನ್ನು ಭೂದಾನವಾಗಿ ನೀಡಿದ್ದರು. ಆದರೆ ಇದುವರೆಗೊ ಭೂದಾನಿ ತೋಟಯ್ಯ ವಿರಕ್ತಿಮಠ ಹೆಸರಿನಲ್ಲಿ ಚಾಲ್ತಿಯಲ್ಲಿದ್ದ ಕಾರಣ ಶಾಲೆಗೆ ನೀಡಿದ ಭೂಮಿಯನ್ನು ಉಪನೋಂದಣಾಧಿಕಾರಿ ಇಲಾಖೆ ಮೂಲಕ ಈರಬಸಮ್ಮ ನೋಂದಣಿ ಮಾಡಿಸಿದ್ದಾರೆ.ಭೂದಾನಿ ಈರಬಸಮ್ಮ ಮಾತನಾಡಿ, ಸಂಗನಹಾಳ ಶಾಲೆಗೆ ಈ ಹಿಂದೆಯೇ ನಮ್ಮ ಯಜಮಾನರು ಭೂದಾನವಾಗಿ ಒಂದು ಎಕರೆ ಭೂಮಿಯನ್ನು ನಮ್ಮೂರು ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎನ್ನುವ ಕಾಳಜಿಯಿಂದ ನೀಡಿದ್ದರು. ಗ್ರಾಮಸ್ಥರ ಮನವಿಗೆ ಒಪ್ಪಿ ಕೊಟ್ಟ ಮಾತಿನಂತೆ ರಾಜ್ಯಪಾಲರ ಹೆಸರಿಗೆ ನಮ್ಮ ಭೂಮಿ ವರ್ಗಾವಣೆ ಮಾಡಿದ್ದೇವೆ. ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ನಮ್ಮ ಕುಟುಂಬದಿಂದ ಸಮಾಜಮುಖಿ ಕಾರ್ಯ ಮಾಡಿರುವುದು ನನಗೆ ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ, ಎಸ್ಡಿಎಂಸಿ ಅಧ್ಯಕ್ಷ ಅಡಿವೆಪ್ಪ ಲಕ್ಕಲಕಟ್ಟಿ, ಗ್ರಾಮಸ್ಥರಾದ ಶರಣಪ್ಪ ಕಟ್ಟೆಪ್ಪನವರ, ಫಕೀರಪ್ಪ ವಾಲ್ಮೀಕಿ, ಶೇಖರ ಗುರಾಣಿ, ಸಂಗಪ್ಪ ಜೋಗಣ್ಣವರ, ಶಿವಲಿಂಗಪ್ಪ ಕವಲೂರ, ಶೇಖರಯ್ಯ ವಿರಕ್ತಮಠ, ಚನ್ನಯ್ಯ ವಿರಕ್ತಮಠ, ಶಿವಪ್ಪ ಗದ್ದಿ, ದುರಗಪ್ಪ ನಡುವಲಕೇರಿ, ಗವಿಸಿದ್ದಪ್ಪ ಚೋಳಿನ್, ಸಂಗಪ್ಪ ಗಡಾದ, ಮಂಜುನಾಥ ಬೂದಿಹಾಳ, ವಿಜಯಲಕ್ಷ್ಮಿ ಒಂಟಿಗೋಡಿಮಠ, ಶಿಕ್ಷಕರಾದ ಬಸವರಾಜ ಮಾಸ್ತಿ, ಶರಣಯ್ಯ ಸರಗಣಾಚಾರ ಇದ್ದರು.