ಕನ್ನಡಪ್ರಭ ವಾರ್ತೆ ಕೋಲಾರಪಥನಮುಖಿಯಾಗಿರುವ ಕನ್ನಡವನ್ನು ಊರ್ಧ್ವಮುಖಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕನ್ನಡವನ್ನು ಕನ್ನಡಿಗರಾಗಿ ನಾವು ಉಳಿಸದಿದ್ದರೆ, ಜಗತ್ತಿನ ಯಾವುದೇ ಶಕ್ತಿ ಉಳಿಸಲಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಪ್ರಾಧಿಕಾರದ ಮುಖ್ಯ ಕೆಲಸ ಸರ್ಕಾರ ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಂಡರೆ, ಅಂತಹ ತೀರ್ಮಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಈ ನಿಟ್ಟಿನಲ್ಲಿ ಸರ್ಕಾರವು ೩೦೦೦ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಿದೆ ಎಂದರು.
ಗಡಿಪ್ರದೇಶದ ಶಾಲೆಗಳು ಹೆಚ್ಚಾಗಿ ಕನ್ನಡೀಕರಣ ಗೊಳಿಸಬೇಕು ಮತ್ತು ಹೊರಗಿನಿಂದ ಬರುವವರನ್ನು ಕನ್ನಡಿಗರೊಂದಿಗೆ ವ್ಯವಹಾರ ಮಾಡುವಾಗ ಅವರನ್ನು ಕನ್ನಡದಲ್ಲಿಯೇ ಮಾತನಾಡಿ ಅವರಿಗೆ ಕನ್ನಡ ಭಾಷೆ ಕಲಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ. ಜಾಗತಿಕ ಮಾರುಕಟ್ಟೆಗಳು ಭಾಷೆಯ ಮೇಲೆ ಮಹತ್ತರ ಪರಿಣಾಮ ಉಂಟುಮಾಡಿದೆ. ಮುಂದೆ ಕರ್ನಾಟಕಕ್ಕೆ ಹತ್ತು ಲಕ್ಷ ಕೋಟಿ ಹೂಡಿಕೆ ಬರುವ ನಿರೀಕ್ಷೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಇದರಿಂದ ಉದ್ಯೋಗಾವಕಾಶ ಹೆಚ್ಚಾಗುತ್ತವೆ ಎಂದರು.
ಕನ್ನಡ ಭಾಷೆ ಸಮೃದ್ಧವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯ ಪರಿಣಾಮ ನಮ್ಮ ಭಾಷಿಕರಿಗೆ ಅವಕಾಶಗಳು ತಪ್ಪಿಸುತ್ತಿದೆ. ಭಾಷೆಯನ್ನು ಜನಸಂಖ್ಯೆಯ ಆಧಾರದ ಮೇಲೆ ಅವೈಜ್ಞಾನಿಕವಾಗಿ ಅಲೆಯಲಾಗುತ್ತಿದೆ, ಆದರೆ ನಮ್ಮ ಕನ್ನಡ ಭಾಷೆ ಉಳಿಸಿಕೊಳ್ಳಲು ಕಾನೂನುಗಳು ಸಮರ್ಥವಾಗಿಲ್ಲ. ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕಾದರೆ, ನಮ್ಮ ಭಾಗದ ಯುವಕರಿಗೆ ಅಷ್ಟೊಂದು ಕೌಶಲ ತರಬೇತಿ ಇರುವುದಿಲ್ಲ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಕೆಲಸಗಳನ್ನು ಕೊಡುವುದು ಕಡಿಮೆ ಆದ್ದರಿಂದ ಕಂಪನಿಗಳಲ್ಲಿ ಕೆಲಸಗಳನ್ನು ಪಡೆಯಲು ಕೌಶಲ ತರಬೇತಿಗಳನ್ನು ಪಡೆದುಕೊಳ್ಳಬೇಕು ಎಂದರು.ಆಡು ಭಾಷೆಗೆ ಸೀಮಿತಮುಂದಿನ ಐವತ್ತು ವರ್ಷಗಳಲ್ಲಿ ನಮ್ಮ ಕನ್ನಡ ಭಾಷೆಯು ಕೇವಲ ಮಾತನಾಡುವ ಭಾಷೆಯಾಗಿ ಮಾತ್ರ ಉಳಿಯುತ್ತದೆ ಎಂಬ ಆತಂಕ ಇದೆ. ಏಕೆಂದರೆ ಅನ್ಯ ಭಾಷೆಗಳು ನಮ್ಮ ಭಾಷೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ತಮ್ಮ ಮನೆಗಳಲ್ಲಿ ಹೆಚ್ಚಾಗಿ ಕನ್ನಡ ಭಾಷೆ ಮಾತಾಡಿ. ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.ಲೀಡ್ ಬ್ಯಾಂಕ್ ಅಧಿಕಾರಿಗಳು ನೂತನವಾಗಿ ಬರುವ ಉದ್ಯೋಗಿಗಳಿಗೆ ಕನ್ನಡ ಭಾಷೆ ಕಲಿಸಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪ್ರಮಾಣ ಪತ್ರ ಕನ್ನಡದಲ್ಲಿಯೇ ನೀಡಬೇಕು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮರಣಕ್ಕೆ ಕಾರಣವನ್ನಾದರು ಕನ್ನಡದಲ್ಲಿ ದಾಖಲಿಸಲು ಪ್ರಯತ್ನಿಸಬೇಕು. ಅಲ್ಪ ಸಂಖ್ಯಾತರ, ಉರ್ದು ಶಾಲೆಗಳಲ್ಲಿ ಹಾಗೂ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಭವನವನ್ನು ನಿರ್ಮಿಸಲು, ಸರ್ಕಾರದ ಸ್ಥಳವನ್ನು ಗುರುತಿಸಿ ಕೊಡಲಾಗುವುದು. ಭವನವನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಕೊಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತ ಬಿಳಿಮಲೆರಿಗೆ ಮನವಿ ಮಾಡಿಕೊಂಡರು.ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ತಿಮ್ಮೇಶ್, ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಮಂಗಳ, ಕೋಲಾರ ಎಸ್ಪಿ ನಿಖಿಲ್.ಬಿ, ಕೆಜಿಎಫ್ ಎಸ್ಪಿ ಶಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ, ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಇದ್ದರು.