ದುರಹಂಕಾರಿಗಳಿಗೆ ಚುನಾವಣೆಯಲ್ಲಿ ಪಾಠ: ಶ್ರೇಯಸ್ ಪಟೇಲ್

KannadaprabhaNewsNetwork | Published : Apr 11, 2024 12:52 AM

ಸಾರಾಂಶ

ಹಾಸನ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ೫ ವರ್ಷಗಳಲ್ಲಿಯೂ ಸಂಸದರಾಗಿದ್ದರವರು ಎಲ್ಲಿಗೂ ಭೇಟಿ ನೀಡದೆ, ಸುಳ್ಳು ಅಭಿವೃದ್ಧಿ ಪ್ರಚಾರ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇಂತಹ ದರ್ಪ, ದುರಹಂಕಾರವುಳ್ಳವರಿಗೆ ಈ ಬಾರಿ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಿಳಿಸಿದರು.

ಬೀರೂರು: ಹಾಸನ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ೫ ವರ್ಷಗಳಲ್ಲಿಯೂ ಸಂಸದರಾಗಿದ್ದರವರು ಎಲ್ಲಿಗೂ ಭೇಟಿ ನೀಡದೆ, ಸುಳ್ಳು ಅಭಿವೃದ್ಧಿ ಪ್ರಚಾರ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇಂತಹ ದರ್ಪ, ದುರಹಂಕಾರವುಳ್ಳವರಿಗೆ ಈ ಬಾರಿ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಿಳಿಸಿದರು.

ಪಟ್ಟಣದ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ರಾತ್ರಿ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆ ಬದಲಾವಣೆ ತವಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ಮನವನ್ನು ಮುಟ್ಟಿದೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸುವ ಅಭಿಲಾಷೆ ಹೊಂದಿದ್ದಾರೆ ಎಂದರು.ಹಾಸನದಲ್ಲಿ ಬಡಜನರೇ ಹೆಚ್ಚಿರುವುದು ಹಾಗಾಗಿ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸಲು ೮ ವಿಧಾನಸಭಾ ವ್ಯಾಪ್ತಿಗಳಲ್ಲಿ ಐಐಟಿ ಕೈಗಾರಿಕಾ ಕೇಂದ್ರಗಳನ್ನು ತಂದು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗೆ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಮುಕ್ತಿ ನೀಡಬೇಕು. ತೆಂಗು ಮತ್ತು ಅಡಿಕೆಗೆ ಕೊಳೆ, ನುಸಿ ರೋಗ ಮತ್ತು ಮೂಲ ಸೌಲಭ್ಯಗಳಿಗೆ ಶೀಘ್ರ ಪರಿಹಾರಕೊಳ್ಳಲು ಸಂಶೋಧನ ಕೇಂದ್ರಗಳನ್ನು ತರುವ ಆಸೆ ಇದೆ ಎಂದರು.

ಎಲ್ಲಾ ಕ್ಷೇತ್ರದಲ್ಲೂ ವಾತವರಣ ತುಂಬಾ ಚೆನ್ನಾಗಿದೆ. ಜನ ಸ್ವಯಂಪ್ರೇರಿತರಾಗಿ ಎಲ್ಲಾ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಜನರ ಕೈಗೆ ಸಿಗುವ ಸಂಸದರನ್ನು ಆಯ್ಕೆ ಮಾಡಬೇಕೆನ್ನುವುದು ಅವರ ಉದ್ದೇಶ. ನನಗೆ ಆತ್ಮವಿಶ್ವಾಸವಿದೆ ನಮ್ಮ ತಾತ ಪುಟ್ಟಸ್ವಾಮಿ, ದೇವೆಗೌಡು ಇದ್ದಾಗ ಉತ್ತಮ ಕೆಲಸಗಳು ಆಗುತ್ತಿದ್ದವು. ಕಳೆದ ೫ ವರ್ಷಗಳಲ್ಲಿ ಸಂಸದರು ಏನು ಕೆಲಸ ಮಾಡಿದ್ದಾರೆನ್ನುವುದು ಯುವಕರಿಗೆ ತಿಳಿದಿದೆ. ಅಧಿಕಾರಕ್ಕಾಗಿ ಬಿಜೆಪಿ ಜತೆ ಸೇರಿ ಮತ್ತೆ ಕಣಕ್ಕಿಳಿದಿದ್ದಾರೆ. ಇಡೀ ರಾಷ್ಟ್ರದಲ್ಲೇ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕೇವಲ ೧ ವರ್ಷಗಳಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ತಲುಪಿಸಿದ್ದಾರೆ ಎಂದರು.

ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ಯಾವ ರಾಜಕಾರಣಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾನೋ ಅವನು ಜನಮಾನಸದಲ್ಲಿ ಸದಾ ಉಳಿಯುತ್ತಾನೆ. ಅಂತ ವ್ಯಕ್ತಿಗಳ ಸಾಲಿಗೆ ಸೇರಬೇಕು. ಕಡೂರು ಕ್ಷೇತ್ರದ ಜನ ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದರು.

ಶಾಸಕ ಕೆ.ಎಸ್.ಆನಂದ್, ಕಾಂಗ್ರೆಸ್ ಮುಖಂಡರಾದ ಬೀರೂರು ದೇವರಾಜ್, ಭಂಡಾರಿ ಶ್ರೀನಿವಾಸ್, ಕೆ.ಜಿ.ಶ್ರೀನಿವಾಸ ಮೂರ್ತಿ, ಶರತ್ ಕೃಷ್ಣಮೂರ್ತಿ, ಆಸಂದಿ ಕಲ್ಲೇಶ್, ಜಾವಗಲ್ ಮಂಜಣ್ಣ , ಬಿ.ಕೆ.ಶಶಿಧರ್ ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಇದ್ದರು.

Share this article