ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಾವೇರಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ: ಏ. ೧೨ರಿಂದ ನಾಮಪತ್ರ ಸಲ್ಲಿಕೆ

KannadaprabhaNewsNetwork | Published : Mar 17, 2024 1:49 AM

ಹಾವೇರಿಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಒಳಗೊಂಡ ಕ್ಷೇತ್ರದಲ್ಲಿ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಏ. ೧೨ರಿಂದ ಹಾವೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಹಾವೇರಿಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಒಳಗೊಂಡ ಕ್ಷೇತ್ರದಲ್ಲಿ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಏ. ೧೨ರಿಂದ ಹಾವೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ (ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ) ಚುನಾವಣೆ ಮೂರನೆಯ ಹಂತದಲ್ಲಿ ನಡೆಯಲಿದೆ. ಏ.೧೨ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.ವೇಳಾಪಟ್ಟಿ: ಚುನಾವಣಾ ವೇಳಾಪಟ್ಟಿಯನ್ನು ವಿವರಿಸಿದ ಜಿಲ್ಲಾಧಿಕಾರಿಗಳು ಏ.೧೨ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಏ.೧೯ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ. ೨೦ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. ೨೨ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ ೭ರಂದು ಮತದಾನ ನಡೆಯಲಿದೆ. ಜೂ.೪ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಜೂ.೬ಕ್ಕೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.ಮತದಾರರ ವಿವರ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮,೯೫,೩೬೬ ಪುರುಷರು, ೮,೮೨,೪೩೦ ಮಹಿಳೆಯರು ಹಾಗೂ ೮೧ ಇತರರು ಸೇರಿದಂತೆ ೧೭,೭೭,೮೭೭ ಮತದಾರರಿದ್ದಾರೆ. ಈ ಪೈಕಿ ೮೫ ವರ್ಷ ಮೇಲ್ಪಟ್ಟ ೧೫,೫೨೧ ಮತದಾರರು, ೨೭,೪೩೪ ವಿಶೇಷಚೇತನ ಮತದಾರರು, ೧,೬೦೭ ಸೇವಾ ಮತದಾರರು ಹಾಗೂ ೧೮ ರಿಂದ ೧೯ ವರ್ಷದ ೫೦,೬೫೮ ಮತದಾರರಿದ್ದಾರೆ. ಈ ಪೈಕಿ ೮೫ ವರ್ಷ ಮೇಲ್ಪಟ್ಟ ೧೫,೫೨೧ ಮತದಾರರು ಹಾಗೂ ವಿಶೇಷಚೇತನ ೨೭,೪೩೪ ಮತದಾರರು ಒಳಗೊಂಡಂತೆ ೪೨,೯೫೫ ಮತದಾರರಿಗೆ ಅವರು ಬಯಸಿದರೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಮೊದಲೇ ಅವರಿಗೆ ಮತದಾನದ ಕೋರಿಕೆ ಪತ್ರ ನೀಡಲಾಗುವುದು. ಮನೆಯಲ್ಲೇ ಮತದಾನ ಮಾಡಲು ಬಯಸಿ ನಮೂನೆಯನ್ನು ಭರ್ತಿಮಾಡಿ ಸಹಿಮಾಡಿಕೊಟ್ಟರೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಮತಯಂತ್ರ ವಿವರ: ೩,೭೪೬ ಬ್ಯಾಲೆಟ್ ಯುನಿಟ್, ೨೪೯೭ ಕಂಟ್ರೋಲ್ ಯುನಿಟ್ ಹಾಗೂ ೨,೬೩೦ ವಿವಿಪ್ಯಾಟ್ ಯಂತ್ರಗಳ ಲಭ್ಯವಿದೆ. ಮೊದಲ ಹಂತದ ತಪಾಸಣೆ ಕಾರ್ಯ ನಡೆಸಲಾಗಿದೆ. ಕ್ಷೇತ್ರವಾರು ಮೊದಲ ಹಂತದ ರ‍್ಯಾಂಡಮೈಜೇಷನ್ ಮಾಡಲಾಗಿದೆ.

ಮತಗಟ್ಟೆ ವಿವರ: ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ೧೩೭೧ ಸ್ಥಳಗಳಲ್ಲಿ ೧೯೮೨ ಮತಗಟ್ಟೆಗಳನ್ನು ತೆರೆಯಲಾಗುವುದು. ೩೯ ದುರ್ಬಲ ಹಾಗೂ ೩೭೦ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ೨೫೧, ಗದಗ ಕ್ಷೇತ್ರದಲ್ಲಿ ೨೨೩, ರೋಣ ಕ್ಷೇತ್ರದಲ್ಲಿ ೨೬೭, ಹಾನಗಲ್ ಕ್ಷೇತ್ರದಲ್ಲಿ೨೪೩, ಹಾವೇರಿ ಕ್ಷೇತ್ರದಲ್ಲಿ ೨೬೧, ಬ್ಯಾಡಗಿ ಕ್ಷೇತ್ರದಲ್ಲಿ ೨೪೨, ಹಿರೇಕೆರೂರು ಕ್ಷೇತ್ರದಲ್ಲಿ ೨೨೯ ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಾಲಯ, ಪೀಠೋಪಕರಣ, ರ‍್ಯಾಂಪ್, ಶೆಲ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಗದಗ ಮೂರು ಕ್ಷೇತ್ರಗಳಲ್ಲಿ ತಲಾ ಮೂರರಂತೆ ಹಾಗೂ ಹಾವೇರಿ ಕ್ಷೇತ್ರದ ಐದು ಕ್ಷೇತ್ರಗಳಿಗೆ ತಲಾ ಎರಡರಂತೆ ೧೯ ವಿಡಿಯೋ ಸರ್ವಲೆನ್ಸ್ ತಂಡ (ವಿಎಸ್‌ಟಿ) ತಲಾ ಒಂದರಂತೆ ೮ ವಿಡಿಯೋ ವಿವಿಂಗ್ ತಂಡ (ವಿವಿಟಿ), ೧೧ ಅಕೌಂಟ್ ತಂಡ (ಎಟಿ), ೩-೩ ಅನುಪಾತದಲ್ಲಿ ೨೪ ಫ್ಲೈಯಿಂಗ್ ಸ್ವಾಡ್ (ಎಫ್‌ಎಸ್‌ಟಿ), ೮ ಅಸಿಸ್ಟೆಂಟ್ ಎಕ್ಸಪೆಂಡೇಚರ್ ಹಾಗೂ ೧೯೧ ಸೆಕ್ಟರ್ ಆಫೀಸರ್(ಎಸ್‌ಒ)ಗಳನ್ನು ನೇಮಕ ಮಾಡಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ೧೮ ಹಾಗೂ ಗದಗ ಜಿಲ್ಲೆಯಲ್ಲಿ ೧೦ ಸೇರಿ ಒಟ್ಟು ೨೮ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿ ವೆಬ್‌ ಕ್ಯಾಮೆರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದು ಹೇಳಿದರು.ಸಹಾಯವಾಣಿ-ದೂರು ನಿರ್ವಹಣೆ: ಚುನಾವಣಾ ದೂರು ನಿರ್ವಹಣೆಗೆ ಟೋಲ್ ಫ್ರೀ ಸಹಾಯವಾಣಿ ೧೯೫೦ ಸ್ಥಾಪಿಸಲಾಗಿದೆ. ಗದಗ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ೦೮೩೭೨-೨೩೯೧೭೭ ಹಾಗೂ ೦೮೩೭೫-೨೦೦೯೬೫ ಮತ್ತು ವಿಧಾನಸಭೆ ಕ್ಷೇತ್ರವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.

ಶಿರಹಟ್ಟಿ ಕ್ಷೇತ್ರ-೦೮೪೮೭-೨೪೨೧೦೦, ಗದಗ - ೦೮೩೭೨-೨೭೮೫೩೨ ಹಾಗೂ ರೋಣ ಕ್ಷೇತ್ರ-೦೮೩೮೧-೨೬೭೨೩೯ ಸ್ಥಾಪಿಸಲಾಗಿದೆ. ಹಾವೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾನಗಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೨ (೦೮೩೭೯-೨೬೨೨೪೧), ಶಿಗ್ಗಾಂವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೩(೦೮೩೭೮-೨೨೨೪೬೮), ಹಾವೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೪ (೦೮೩೭೫-೨೩೨೪೪೫), ಬ್ಯಾಡಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೫ (೦೮೩೭೫-೨೨೮೪೨೮) ಹಿರೇಕೆರೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೬ (೦೮೩೭೬-೨೮೨೨೩೧) ಹಾಗೂ ರಾಣಿಬೆನ್ನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೩೭೫-೨೦೦೯೮೭ (೦೮೩೭೩-೨೬೦೪೪೯) ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.

ಎಸ್ಪಿ ಅಂಶುಕುಮಾರ್, ಜಿಪಂ ಸಿಇಒ ಅಕ್ಷಯ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇದ್ದರು.