ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ : ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Nov 10, 2024 2:01 AM

ಸಾರಾಂಶ

ವಿದ್ಯಾರ್ಥಿಗಳು ಚಂಚಲ ಮನ್ಸನ್ನು ಬದಿಗಿಟ್ಟು ತಮ್ಮ ಗುರಿಯತ್ತ ಮುನ್ನುಗ್ಗಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ವಿಗೊಳ್ಳಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಮತ್ತು ಕ್ರೀಯಾಶೀಲತೆ ಬೆಳೆಸುವುದರ ಮೂಲಕ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸ್ವಾಸ್ತ್ಯಕ್ಕೆ ಕಾರಣವಾಗುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ವಿದ್ಯಾರ್ಥಿಗಳು ಪಠ್ಯತ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಮಣಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡೆ, ಎನ್‌ಎಸ್‌ಎಸ್ ಹಾಗೂ ರೇಂಜರ್ಸ್ , ರೋವರ್ಸ್ ಮತ್ತು ರೆಡ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಚಂಚಲ ಮನ್ಸನ್ನು ಬದಿಗಿಟ್ಟು ತಮ್ಮ ಗುರಿಯತ್ತ ಮುನ್ನುಗ್ಗಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ವಿಗೊಳ್ಳಲು ಸಾಧ್ಯ ಎಂದರು.

ಸಾಂಸ್ಕೃತಿಕ ಸಂಚಾಲಕ ಪ್ರೊ.ವಿಷಕಂಠ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಮತ್ತು ಕ್ರೀಯಾಶೀಲತೆಗಳನ್ನು ಬೆಳೆಸುವುದರ ಮೂಲಕ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸ್ವಾಸ್ತ್ಯಕ್ಕೆ ಕಾರಣವಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಶ್ರೀನಿವಾಸ್‌ಮೂರ್ತಿ ಮಾತನಾಡಿದರು. ಇದೇ ವೇಳೆ ಕ್ರೀಡಾಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಮಣಿಗೆರೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ವೇದಿಕೆಯಲ್ಲಿ ಗಾಯಕರಾದ ಸಿ.ಚಂದ್ರಾಜ್, ಗ್ರಾಪಂ ಅಧ್ಯಕ್ಷೆ ಸೌಭಾಗ್ಯ, ಗ್ರಂಥಪಾಲ ಪ್ರೊ.ರಂಗನಾಥ್, ಉಪನ್ಯಾಸಕರಾದ ಶಿಲ್ಪಶ್ರೀ, ಪ್ರೊ.ಮಂಚಯ್ಯ, ಪ್ರೊ.ರಶ್ಮಿ ಸೇರಿದಂತೆ ಹಲವರಿದ್ದರು.

ಕನ್ನಡ ನಾಡು, ನುಡಿ ಬಗ್ಗೆ ಜನತೆಗೆ ಗೌರವ ಇರಲಿ: ಬಸವರಾಜು

ಭಾರತೀನಗರ: ಗುಡಿಗೆರೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮ ನಡೆಯಿತು.

ಕನ್ನಡ ಉಪನ್ಯಾಸಕ ಬಸವರಾಜು ಮಾತನಾಡಿ, ಕನ್ನಡ ನಾಡು, ನುಡಿಯ ಬಗ್ಗೆ ಕರ್ನಾಟಕದ ಜನತೆಗೆ ಗೌರವ, ಅಭಿಮಾನ ಇದ್ದಾಗ ಮಾತ್ರ ನೆಲ, ಜಲಗಳನ್ನು ಉಳಿಸಿಕೊಳ್ಳಲು ಸಾಧ್ಯ. ಇಂದಿನ ಯುವ ಪೀಳಿಗೆ ಪರಭಾಷೆ ವ್ಯಾಮೋಹಕ್ಕೆ ಬಲಿಯಾಗುವ ಮೂಲಕ ಕನ್ನಡ ಭಾಷೆ ಕ್ಷೀಣಿಸುವಂತೆ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಕನ್ನಡ ಭಾಷೆ ಶ್ರೀಮಂತವಾಗಿದ್ದು, ಪ್ರೀತಿಸಿ ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಭಾಷೆ ಬಗ್ಗೆ ಅಭಿಮಾನ ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದು ಪ್ರತಿನಿತ್ಯ ನಿತ್ಯೋತ್ಸವವಾಗಬೇಕೆಂದರು.

ವೇದಿಕೆಯಲ್ಲಿ ರೈತ ಕವಿ ದೋಚಿಗೌಡ, ಗುಡಿಗೆರೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಪಾಲಕಾರದ ಟಿ.ಎಸ್.ಸುನೀಲ್‌ಕುಮಾರ್, ಎನ್.ಮಂಜುನಾಥ್‌ನಾಯ್ಡು ಉಪಸ್ಥಿತರಿದ್ದರು.

Share this article