
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ದ್ವಿಭಾಷಾ (ಕನ್ನಡ, ಇಂಗ್ಲಿಷ್) ಕಲಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಕುರಿತ ಅನುಮತಿ ಆದೇಶ ಶೀಘ್ರ ಹೊರಬರಲಿದೆ ಎಂದು ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
17 ಕೋಟಿ ರು. ವೆಚ್ಚದ ವಸತಿಯುತ ಶಾಲೆಯನ್ನು ಪ್ರಾಥಮಿಕ ಮಟ್ಟದಿಂದ ಪದವಿವರೆಗೆ ವಿಸ್ತರಿಸುವ ಯೋಜನೆಯಿದೆ. ಕೊಣಾಜೆ- ಪಜೀರು ಪರಿಸರದಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗುವುದು. ಎಲ್ಲ ವಸತಿಶಾಲೆಗಳಿಗಿಂತ ಭಿನ್ನವಾಗಿ ಸ್ಥಳೀಯರಿಗೆ ವಸತಿ ಅಥವಾ ಡೇ ಸ್ಕಾಲರ್ ಅಥವಾ ಎರಡಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದರು.ಎರಡು ಸೇತುವೆ ಕಾಮಗಾರಿ:
ಉಳ್ಳಾಲಕ್ಕೆ ತೆರಳುವ ದಾರಿ ನಡುವಿನ ರೈಲ್ವೆ ಸೇತುವೆ ಹಾಗೂ ಸೋಮೇಶ್ವರ ದಾರಿಯಲ್ಲಿರುವ ಪಿಡಬ್ಲ್ಯೂಡಿ ಸೇತುವೆ ನಿರ್ಮಾಣಕ್ಕೆ ತಲಾ 4 ಕೋಟಿ ರು. ಮಂಜೂರಾಗಿದೆ. ಫಾಲ್ಗಾಟ್ ರೈಲ್ವೆಯವರು ಈಗಿನ ಸೇತುವೆಯ ವಿನ್ಯಾಸವನ್ನು ಬದಲಿಸಲು ಹೇಳಿದ್ದು, ಅದು ಕಾರ್ಯಗತವಾದ ಕೂಡಲೆ ಎರಡೂ ಸೇತುವೆ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸಲಾಗುವುದು ಎಂದು ಖಾದರ್ ತಿಳಿಸಿದರು.ಅತಿಕ್ರಮಣ ಪತ್ತೆಗೆ ಡ್ರೋಣ್ ಸರ್ವೇ: ಉಳ್ಳಾಲದಲ್ಲಿ ರಾಜಾಕಾಲುವೆ ಅತಿಕ್ರಮಣ ಗುರುತಿಸಲು ಉಳ್ಳಾಲ ನಗರಸಭೆ ವತಿಯಿಂದ ಡ್ರೋಣ್ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ. ಆರಂಭದಲ್ಲೇ ಅತಿಕ್ರಮಣ ಗುರುತಿಸುವುದು ಮತ್ತು ಹೆಚ್ಚಿನ ಅತಿಕ್ರಮಣ ತಡೆಯುವುದು ಈ ಸರ್ವೇ ಉದ್ದೇಶ ಎಂದರು.
ಜಿಲ್ಲೆಯ ಹೆಸರಿಗಿಂತ ಸೌಹಾರ್ದತೆ ಮುಖ್ಯದ.ಕ. ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಿಸುವಂತೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ಹೆಸರೇ ಬೇಕು ಎಂದಾದರೆ ಎಲ್ಲ ಕ್ಷೇತ್ರಗಳ ತಜ್ಞರು, ವಿಚಾರವಂತರ ಅಭಿಪ್ರಾಯ ಪಡೆದು ಚರ್ಚಿಸಿ ಪೂರಕ ತೀರ್ಮಾನ ಆಗಲಿ ಎಂದು ಹೇಳಿದ ಖಾದರ್, ಜಿಲ್ಲೆಯ ಅಭಿವೃದ್ಧಿಗೆ ಹೆಸರಿಗಿಂತಲೂ ಮುಖ್ಯವಾಗಿ ದ್ವೇಷ ರಹಿತ ಸೌಹಾರ್ದತೆಯ ವಾತಾವರಣ ಅಗತ್ಯ. ಅದಕ್ಕಾಗಿ ಎಲ್ಲರೂ ಪ್ರಯತ್ನಪಡಬೇಕು ಎಂದು ಅಭಿಪ್ರಾಯಪಟ್ಟರು.