75ನೇ ಗಣರಾಜ್ಯೋತ್ಸವ । ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಗಣರಾಜ್ಯ ದಿನದಲ್ಲಿ ಸಲಹೆ
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಬುನಾದಿ ಹಾಕಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಡವರ, ರೈತರ ಮಕ್ಕಳು ಸ್ಪರ್ಧಿಸಲು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಹೋಬಳಿ ಮಟ್ಟದಲ್ಲೂ ತೆರೆದು, ಅಗತ್ಯ ಸೌಲಭ್ಯಗಳನ್ನು ಓದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.
ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ ಮೊದಲು ಎಂಬ ಮನೋಭಾವದೊಂದಿಗೆ ಪ್ರಧಾನ ಮಂತ್ರಿ ಮೋದಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ‘ನಮ್ಮ ಸಂಕಲ್ಪ ವಿಕಸಿತ ಭಾರತ’ ವಿನೂತನ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಹೇಳಿದರು.ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಭಾರತೀಯರ ಸಂಸ್ಕೃತಿ, ಭಾಷೆ, ವಿಚಾರ, ಸಂಪ್ರದಾಯ, ಧರ್ಮ ಹಾಗೂ ಅಚರಣೆ ವಿಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಏಕೀಕೃತ ಭಾರತ ನಿರ್ಮಾಣದಲ್ಲಿ ಸಾಧ್ಯವಾಗಿದೆ ಎಂದರು.
ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ಧ್ವಜರೋಹಣ ನೆರವೇರಿಸಿದರು. ಪ್ರಗತಿ ಪರ ರೈತ ಪ್ರದೀಪ್, ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅನಿತಾ, ಪತ್ರಕರ್ತ ಎಚ್.ಡಿ.ಅಭಿಲಾಷ್, ತಾ. ಕಚೇರಿ ಜೀಪ್ ಚಾಲಕ ಟಿ.ರಂಗನಾಥ್, ಎಎಸ್ಸೈ ನಿಂಗರಾಜಪ್ಪ, ಪೊಲೀಸ್ ಮುಖ್ಯ ಪೇದೆ ಫರೀದಬೇಗಂ, ಆರಕ್ಷಕ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಮಂಜುಳ, ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಂಜುನಾಥ್, ಡಾ.ಸಿದ್ದೇಗೌಡ, ಚಂದ್ರಶೇಖರ್, ಸತ್ಯನಾರಾಯಣ, ಶ್ರೀನಿವಾಸ್, ಗಿರೀಶ್ ಎಸ್.ಎಸ್., ಕ್ರೀಡಾಪಟುಗಳಾದ ಸೋಹನ್ ಮೌರ್ಯ, ಶ್ರಾವಣಿ ಹಾಗೂ ಲಿಖಿತ್, ಪಿ.ಎಸ್.ಅನಿಲ್ ಕುಮಾರ್, ಪೌರ ಕಾರ್ಮಿಕರಾದ ರೂಪ ಹಾಗೂ ರಮೇಶ್ರನ್ನು ಗೌರವಿಸಲಾಯಿತು.