ಮಾನವನ ದುರಾಸೆಯಿಂದ ಪರಿಸರ ನಾಶ ದುರಂತ: ನಟರಾಜ ರಾಯ್ಕರ್‌

KannadaprabhaNewsNetwork | Published : Jul 8, 2024 12:44 AM

ಮನುಷ್ಯರು ಜೀವಿಸಲು ಬೇಕಾದ ಎಲ್ಲ ರೀತಿಯ ಪೂರಕ ವಾತಾವರಣ ಪರಿಸರವು ಮನುಷ್ಯನಿಗೆ ಉಚಿತವಾಗಿ ನೀಡುತ್ತಿದೆ. ಆದರೂ ಮನುಷ್ಯ ತಮ್ಮ ದುರಾಸೆಯಿಂದ ಪರಿಸರವನ್ನು ದಿನದಿಂದ ದಿನಕ್ಕೆ ನಾಶ ಮಾಡುತ್ತಿರುವುದು ದುರಂತ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಅಧ್ಯಕ್ಷ ನಟರಾಜ ರಾಯ್ಕರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಮನುಷ್ಯರು ಜೀವಿಸಲು ಬೇಕಾದ ಎಲ್ಲ ರೀತಿಯ ಪೂರಕ ವಾತಾವರಣ ಪರಿಸರವು ಮನುಷ್ಯನಿಗೆ ಉಚಿತವಾಗಿ ನೀಡುತ್ತಿದೆ. ಆದರೂ ಮನುಷ್ಯ ತಮ್ಮ ದುರಾಸೆಯಿಂದ ಪರಿಸರವನ್ನು ದಿನದಿಂದ ದಿನಕ್ಕೆ ನಾಶ ಮಾಡುತ್ತಿರುವುದು ದುರಂತ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಅಧ್ಯಕ್ಷ ನಟರಾಜ ರಾಯ್ಕರ್ ಹೇಳಿದರು.

ಭಾನುವಾರ ಪಟ್ಟಣದ ಕನ್ನಡ ನಾಡು ಹಿತರಕ್ಷಣಾ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ "ಕಾಡು ಉಳಿಸಿ- ಪರಿಸರ ಬೆಳೆಸಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ " ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮರ-ಗಿಡಗಳಿಂದ ಬಿಡುಗಡೆಯಾಗುವ ಅಮ್ಲಜನಕವು ಮನುಕುಲದ ಜೀವನಾಡಿಯಾಗಿದ್ದು, ಸ್ವಾರ್ಥ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿಯುವುದನ್ನು ನಿಲ್ಲಿಸದಿದ್ದರೆ ಮುಂದೊಂದು ದಿನ ನಾವೆಲ್ಲರೂ ಆಮ್ಲಜನಕವನ್ನು ಕೊಂಡು ಜೀವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಿತಿಯ ಆರೋಗ್ಯ ರಕ್ಷ ಸಮಿತಿ ಅಧ್ಯಕ್ಷ ಅರಶಿನಘಟ್ಟ ಸುರೇಶ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆ ಮಾಯವಾಗುತ್ತಿದೆ. ಕನ್ನಡಿಗರಾದ ನಾವುಗಳೇ ಕನ್ನಡ ಭಾಷೆಯನ್ನು ಮಾತನಾಡಲು, ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಲು ಹಿಂದೆ ಮುಂದೆ ನೋಡುವಂತಾಗಿದೆ. ಮೊದಲು ಕನ್ನಡಿರಲ್ಲಿ ನನ್ನ ರಾಜ್ಯ, ನನ್ನ ಭಾಷೆ ಎಂಬ ಅಭಿಮಾನ ಮೂಡಬೇಕಾಗಿದೆ. ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನೇ ಬಳಸಿ, ಕನ್ನಡವನ್ನು ಬೆಳೆಸಿ, ಪೋಷಿಸಿದಾಗ ಮಾತ್ರ ಕನ್ನಡಭಾಷೆ ಉಳಿಯಲು ಸಾಧ್ಯ ಎಂದರು.

ಕನ್ನಡ ನಾಡಿನ ಮೇಲೆ ನಮ್ಮ ಅಕ್ಕಪಕ್ಕದ ರಾಜ್ಯದ ಜನರ ದಬ್ಬಾಳಿಕೆ, ಕನ್ನಡಿಗರ ಮೇಲಿನ ದಬ್ಬಾಳಿಕೆಗಳು ನಿರಂತವಾಗಿ ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ರಾಜ್ಯದ ನೆಲ, ಜಲ, ಭಾಷೆ, ಸಂಸ್ಕೃತಿಯ ಮೇಲೆ ಯಾರೇ ದಬ್ಬಾಳಿಕೆ ನಡೆಸಿದರು ನಮ್ಮ ಸಂಘಟನೆ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧವಾಗಿದೆ ಎಂದರು.

ಸಮಿತಿ ಪ್ರಮುಖರಾದ ಯೋಗರಾಜ್, ಸಚಿನ್, ಶಿವು, ಮಹೇಶ್, ಶ್ರೀನಿವಾಸ್, ನಿರ್ಮಲಾಬಾಯಿ ಮೊದಲಾದವರು ಹಾಜರಿದ್ದರು.

- - -