- ಅಳೇಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಧ.ಗ್ರಾ.ಯೋಜನೆಯಡಿ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ, ಸಾಧನಾ ಸಮಾವೇಶ
ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸಂಸ್ಕಾರದ ಅಗತ್ಯವಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕಸ್ವಾಮೀಜಿ ತಿಳಿಸಿದರು.
ಸೋಮವಾರ ಅಳೇಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಧ.ಗ್ರಾ.ಯೋಜನೆ ಕೈಮರ ವಲಯದ ಅಳೇಹಳ್ಳಿ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ರಂಗನಾಥಸ್ವಾಮಿ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪರಿವಾರಕ್ಕೆ ಜ್ವಾಲಾಮಾಲಿನಿ ಅಮ್ಮನವರೇ ಮನೆ ದೇವರಾಗಿದ್ದಾರೆ. ಡಾ.ಡಿ.ವೀರೇಂದ್ರಹೆಗ್ಗಡೆ ಅವರು ಪ್ರಾರಂಭಿಸಿದ್ದ ಧ.ಗ್ರಾ.ಯೋಜನೆಯಿಂದ ಇಂದು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಕ್ರಾಂತಿ ಆಗಿದೆ. ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗಿದೆ. ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವುದೇ ನಿಜವಾದ ಧರ್ಮ. ಇಂದಿನ ಸಮಾಜದಲ್ಲಿ ನಿರೀಕ್ಷೆಯಂತೆ ಜನರು ಧರ್ಮ ಪಾಲಿಸುತ್ತಿಲ್ಲ. ಸಮಾಜದಲ್ಲಿ ಇನ್ನೂಕೆಟ್ಟ ಕೆಲಸ ಮಾಡುವ ರಾವಣರು ಇದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮದ, ಮತ್ಸರಗಳನ್ನು ತೆಗೆದು ಹಾಕುವುದೇ ಸಂಸ್ಕಾರ ಎಂದರು. ಮುಖ್ಯ ಅತಿಥಿಯಾಗಿದ್ದ ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ಮಾತನಾಡಿ, ಮನುಷ್ಯರು ಧರ್ಮದ ತಳಹದಿಯ ಮೇಲೆ ಬದುಕಬೇಕು. ಧ.ಗ್ರಾ.ಯೋಜನೆಯಿಂದ ರಾಜ್ಯದ 20 ಸಾವಿರ ಹಳ್ಳಿಗಳಲ್ಲಿ 6 ಲಕ್ಷ 50 ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿದೆ. ಪ್ರತಿ ಸದಸ್ಯರು ವಾರಕ್ಕೆ 10 ರು. ಉಳಿತಾಯ ಮಾಡಿದ್ದು ಈಗ ಆ ಹಣ 3 ಸಾವಿರ ಕೋಟಿ ಆಗಿದೆ.ಧ. ಗ್ರಾ.ಯೋಜನೆಯ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ನೀಡುತ್ತಿದ್ದು 1 ಲಕ್ಷ ಕೋಟಿಯನ್ನು ನೀಡಿದೆ. ಸ್ವಸ್ಥ ಸಮಾಜ ನಿರ್ಮಾಣವೇ ಧ.ಗ್ರಾ.ಯೋಜನೆ ಗುರಿಯಾಗಿದೆ. ಪ್ರಸ್ತುತ ಹೊಸ, ಹೊಸ ರೋಗಗಳು ಬರುತ್ತಿದ್ದು ಪ್ರತಿಯೊಬ್ಬರೂ ಶಿಸ್ತಿನ ಜೀವನ ನಡೆಸಬೇಕು. ಹಿತ , ಮಿತವಾದ ಆಹಾರ ಸೇವಿಸಬೇಕು. ಯೋಗ, ಪ್ರಾಣಾಯಾಮ ಮಾಡಬೇಕು ಎಂದು ಕರೆ ನೀಡಿದರು ಎಂದರು.ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸಾಮಾಹಿಕ ಸತ್ಯನಾರಾಯಣ ಪೂಜೆ ನೇರವೇರಿತು. ಸಭೆ ಅಧ್ಯಕ್ಷತೆಯನ್ನು ಅಳೇಹಳ್ಳಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬೆಳ್ಳಂಗಿ ಮಂಜುನಾಥ್ ವಹಿಸಿದ್ದರು. ಅತಿಥಿಗಳಾಗಿ ಬಾಳೆ ಗ್ರಾಪಂ ಅಧ್ಯಕ್ಷೆ ವಗಡೆ ರತ್ನಮ್ಮ,ಅಳೇಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಮಾವಿನಮನೆ ನಾಗರಾಜ ಗೌಡ, ಬಾಳೆ ಗ್ರಾಪಂ ಉಪಾಧ್ಯಕ್ಷ ಹೆನ್ನಂಗಿ ತಿಮ್ಮೇಗೌಡ, ಸದಸ್ಯೆ ಶಾಂತಮ್ಮ,ಕೊಪ್ಪ, ನರಸಿಂಹರಾಜಪುರ ತಾಲೂಕು ಯೋಜನಾಧಿಕಾರಿ ಎಂ.ಆರ್. ನಿರಂಜನ್, ಕೈಮರ ವಲಯ ಮೇಲ್ವೀಚಾರಕ ತೀರ್ಥರಾಜ್ ಇದ್ದರು. ಸೇವಾ ನಿರತೆ ಅಶ್ವಿನಿ ವರದಿ ವಾಚಿಸಿದರು.