ಕನ್ನಡಪ್ರಭ ವಾರ್ತೆ ಜಗಳೂರು
ಸಂವಿಧಾನ ಪ್ರತಿಯೊಬ್ಬರಿಗೂ ಮೀಸಲಾತಿ, ಸಮಾನತೆ ನೀಡಿದ ಶ್ರೇಷ್ಠ ಗ್ರಂಥವಾಗಿದ್ದು, ಇದರ ಮಹತ್ವ ತಿಳಿದು ಸಂವಿಧಾನ ಆಶಯಗಳ ಎತ್ತಿ ಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಬೀರೇಂದ್ರ ಕುಮಾರ್ ಹೇಳಿದರು.ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲಾ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಜಾಪ್ರಭುತ್ವ ದೇಶಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನ ಎಲ್ಲ ವರ್ಗದ ಸಮುದಾಯಕ್ಕೆ ರಕ್ಷಣಾ ಕವಚದಂತಿದೆ. ಸರ್ಕಾರ ಇಲಾಖೆ ಮೂಲಕ ಪ್ರತಿ ಮನೆ ಮನೆಗಳಿಗೆ ತಲುಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು 22 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘ ಸಂಸ್ಥೆ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಸಾಗಲಿದೆ. ಜನಸಾಮಾನ್ಯರು, ಯುವಕರು ವಿದ್ಯಾರ್ಥಿಗಳು ಸಂವಿಧಾನ ಮಹತ್ವ ಅರಿತು ಕೊಳ್ಳಬೇಕು ಎಂದರು.
ದಸಂಸ ತಾಲೂಕು ಅಧ್ಯಕ್ಷ ಬಿ.ಸತೀಶ್ ಮಾತನಾಡಿ, ಸಂವಿಧಾನ ಭಾರತದ ಶ್ರೇಷ್ಠ ಗ್ರಂಥವೆಂದು ಒಪ್ಪಿಕೊಳ್ಳದ ಕೆಲ ಮನುವಾದಿ ಸಿದ್ಧಾಂತದ ಮನಸ್ಸುಗಳಿಗೆ ಸಂವಿಧಾನ ಮಹತ್ವ ಅದರ ಮೌಲ್ಯ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾಥಾ ಮೂಲಕ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ . ಕೇವಲ ಪಠ್ಯ ಪುಸ್ತಕಗಳಲ್ಲಿ ಅಷ್ಟೇ ತಿಳಿಸದೆ ಸಮಾಜದ ಪ್ರತಿಯೊಬ್ಬ ಪ್ರಜೆಗೂ ತಿಳಿಯಬೇಕಿದೆ ಎಂದು ತಿಳಿಸಿದರು.ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ, ಮನುಷ್ಯನ ದಿನ ನಿತ್ಯ ಬದುಕಿಗೆ ಗಾಳಿ ನೀರು ಆಹಾರ ಎಷ್ಟು ಮುಖ್ಯವೋ ಸಂವಿಧಾನವು ಅಷ್ಟೆ ಪ್ರಮುಖವಾದ್ದು ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರೂ ಸಮನವಾಗಿ ಬದುಕಲು ಮತ್ತು ನ್ಯಾಯ ಬದ್ದ ಹಕ್ಕುಗಳನ್ನ ಪಡಿಯಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಕರಿಬಸಪ್ಪ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಸರ್ಕಾರಿ ಪಬ್ಲಿಕ್ ಶಾಲೆ ಪ್ರಾಂಶುಪಾಲ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಅಜಾಂ ಉಲ್ಲಾ,ಡಿ.ಎಸ್.ಎಸ್.ಸಂಚಾಲಕ ಕುಬೇಂದ್ರಪ್ಪ, ಪರಿಶಿಷ್ಟ ಕಲ್ಯಾಣ ಇಲಾಖೆ ಮಂಗಳಮ್ಮ ಸೇರಿ ಮತ್ತಿತರರಿದ್ದರು.