ಕನ್ನಡಪ್ರಭ ವಾರ್ತೆ ಬೀದರ್/ಹುಮನಾಬಾದ್
ಕಾರ್ಖಾನೆ, ಕಾರ್ಖಾನೆಯ ಇತರ ಕಟ್ಟಡಗಳು, ಯಂತ್ರೋಪಕರಣಗಳೂ ಸೇರಿದಂತೆ ಸುಮಾರು 143.33 ಎಕರೆ ಪ್ರದೇಶದ ಆಸ್ತಿಯನ್ನು ಸಾಲ ನೀಡಿದ್ದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೆಸರಿಗೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಮಂಜುಳಾರಿಗೆ ಶುಕ್ರವಾರ ಹಸ್ತಾಂತರಿಸಿದರು.
ಜಿಲ್ಲೆಯ ರೈತರ ಜೀವನಾಡಿಯಾಗಿ 29 ಸಾವಿರ ಷೇರುದಾರರನ್ನು ಹೊಂದಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯು ₹186 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದು, ಕಳೆದ ಒಂದು ವರ್ಷದಿಂದ ಕಬ್ಬು ನುರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು ತನ್ನ ಒಟ್ಟಾರೆ 173.3 ಎಕರೆ ಪ್ರದೇಶದ ಪೈಕಿ ಡಿಸಿಸಿ ಬ್ಯಾಂಕ್ಗೆ ತನ್ನ ಹಳ್ಳಿಖೇಡ (ಬಿ) ವ್ಯಾಪ್ತಿ 13 ಹಾಗೂ ಅಮೀರಾಬಾದ್ ವ್ಯಾಪ್ತಿಯ 4 ಆಸ್ತಿಯ ಒಟ್ಟು 143.33 ಎಕರೆ ಬಿಟ್ಟುಕೊಟ್ಟಿದೆ.ಕಾರ್ಖಾನೆಗೆ ₹126 ಕೋಟಿ ಸಾಲ ನೀಡಲಾಗಿತ್ತು, 2022ರ ನವೆಂಬರ್ನಲ್ಲಿಯೇ ಬಡ್ಡಿ ಸೇರಿ ಸಾಲದ ಮೊತ್ತ ₹186ಕೋಟಿಗೆ ಬಂದಿತ್ತು. ಕಾರ್ಖಾನೆ ಆಡಳಿತ ಮಂಡಳಿ ಸಾಲವನ್ನು ಮುಟ್ಟಿಸುವ ಭರವಸೆ ನೀಡಿದ್ದರ ಹಿನ್ನೆಲೆ ಆಸ್ತಿ ವಶಕ್ಕೆ ಪಡೆಯುವ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಸಾಲದ ಬಡ್ಡಿಯನ್ನೂ ಕಟ್ಟದಾಗದ ಕಾರ್ಖಾನೆಯಿಂದಾಗಿ ಬ್ಯಾಂಕ್ ಸ್ಥಿತಿ ಕೂಡ ಸಂಕಷ್ಟಕ್ಕೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿಸಿ ಕಾರ್ಖಾನೆ ಆಸ್ತಿಯನ್ನು ಬ್ಯಾಂಕ್ ಹೆಸರಿಗೆ ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯ್ದೆ 2002ರನ್ವಯ ಕಾನೂನಾತ್ಮಕವಾಗಿ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಮಂಜುಳಾ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.
ಕಾರ್ಖಾನೆಯ 173.33 ಎಕರೆ ಜಮೀನನ್ನು ಮಾರಾಟಕ್ಕಿಡಲಾಗುವದೋ, ಗುತ್ತಿಗೆಗೆ ನೀಡಲಾಗುವದೋ ಅಷ್ಟೇ ಅಲ್ಲ ಕಾರ್ಖಾನೆ ಯಂತ್ರ, ಕಟ್ಟಡವನ್ನೂ ಹರಾಜು ಹಾಕಬೇಕೋ ಎಂಬುವದನ್ನು ಬ್ಯಾಂಕ್ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಇನ್ನು ಹರಾಜಿನಲ್ಲಿ ಬ್ಯಾಂಕಿನ ಸಾಲಕ್ಕಿಂತ ಹೆಚ್ಚು ಹಣ ಬಂದಲ್ಲಿ ಉಳಿಕೆ ಹಣವನ್ನು ಕಾರ್ಖಾನೆ ಖಾತೆಗೆ ಜಮೆ ಮಾಡಲಾಗುವದು ಎಂದು ಸಿಇಒ ಮಂಜುಳಾ ತಿಳಿಸಿದರು.