ವಿಜ್ಞಾನ ಬೆಳೆದಂತೆ ದೇವರಲ್ಲಿ ನಂಬಿಕೆ ಹೆಚ್ಚಳ: ನಿರ್ಮಲಾನಂದನಾಥ ಶ್ರೀಗಳು

KannadaprabhaNewsNetwork | Published : Nov 10, 2024 2:03 AM

ಸಾರಾಂಶ

ಕುಟುಂಬದಲ್ಲಿ ಕಷ್ಟಗಳು ಸಾಮಾನ್ಯ. ಇದರ ಪರಿಹಾರಕ್ಕಾಗಿ ದೇವರನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂಬುದನ್ನು ನಮ್ಮ ಹಿರಿಯ ನಂಬಿಕೆಯಾಗಿದೆ. ಅದರಂತೆ ಜಂಜಾಟದಲ್ಲಿ ಜೀವನದಲ್ಲಿ ದೇವರ ಪ್ರಾರ್ಥನೆಯು ಮುಖ್ಯವಾಗಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜ್ಞಾನ ಬೆಳೆದೆಂತೆಲ್ಲಾ ದೇವಾಲಯಗಳು ಮತ್ತು ದೇವರಲ್ಲಿನ ನಂಬಿಕೆ ಹೆಚ್ಚುತ್ತಿರುವುದು ವಿಶೇಷವಾಗಿದೆ. ಮನುಷ್ಯನ ಮನಸು ಪರಮಾತ್ಮನ ಕಡೆಯಿದ್ದಲ್ಲಿ ಬದುಕು ಹಸನಾಗಿರುತ್ತದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಶ್ರೀ ಚಿತ್ತಾನಹಳ್ಳಿ ಪಟ್ಟಲದಮ್ಮ ದೇವಾಸ್ಥಾನದದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅರಳಿಕಟ್ಟೆ ಮತ್ತು ನಾಗರಕಟ್ಟೆ ರಾಜಗೋಪುರ ಹಾಗೂ 52 ದೇವತೆಗಳ ಶಕ್ತಿಪೀಠ, ಸುಖನಾಶಿ, ಬಲಿಪೀಠ, ಗುರುಡಕಂಬ, ದೀಪಕಂಬ, ಅಮ್ಮನವರ ಪಾದುಕೆ, ಕಂಚಿನತ್ರಿಶೂಲ, ಮಹಾದ್ವಾರ, ಕಲ್ಲಿನ ಜೋಡಿ, ಆನೆಗಳ ಪ್ರತಿಮೆ, ವಿಮಾನ ಗೋಪುರದ ಕಳಸ ಪ್ರತಿಷ್ಠಾಪನಾ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರು ದೇವರಲ್ಲಿ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರೆ ನಂಬಿಕೆ ಸಹಕಾರಗೊಳ್ಳುವುದು, ಆಧ್ಯಾತ್ಮ ಧರ್ಮದ ಭಾವನೆಯನ್ನು ಬೆಳೆಸಿಕೊಂಡಲ್ಲಿ ಸಾಕ್ಷಾತ್ಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕುಟುಂಬದಲ್ಲಿ ಕಷ್ಟಗಳು ಸಾಮಾನ್ಯ. ಇದರ ಪರಿಹಾರಕ್ಕಾಗಿ ದೇವರನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂಬುದನ್ನು ನಮ್ಮ ಹಿರಿಯ ನಂಬಿಕೆಯಾಗಿದೆ. ಅದರಂತೆ ಜಂಜಾಟದಲ್ಲಿ ಜೀವನದಲ್ಲಿ ದೇವರ ಪ್ರಾರ್ಥನೆಯು ಮುಖ್ಯವಾಗಬೇಕಿದೆ ಎಂದರು.

ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಮಾತನಾಡಿ, ಹೊಳಲು ಗ್ರಾಮವನ್ನು ಅಂಬರೀಷ್‌ ಅವರು ಇಷ್ಟ ಪಡುತ್ತಿದ್ದರು. ಅಂಬರೀಷ್‌ ಅವರಿಗೆ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ ಗ್ರಾಮವೂ ಇದು. ಈ ಗ್ರಾಮಕ್ಕೆ ಹಲವು ಅನುದಾನಗಳನ್ನು ನೀಡಿದ್ದಾರೆ. ಅದರಂತೆ ನಾನು ಸಹ ಅನುದಾನ ನೀಡಿರುವೆ ಎಂದರು.

ಇದಕ್ಕೂ ಮುನ್ನ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ಅವರು ದೇವರ ದರ್ಶನ ಪಡೆದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಅಪೆಕ್ಸ್‌ ಬ್ಯಾಂಕ್‌ ಸದಸ್ಯ ಅಶ್ವಥ್‌, ಚಿತ್ತಾನಹಳ್ಳಿ ದೇವಾಲಯದ ಗೌರವಾಧ್ಯಕ್ಷ ಎಚ್.ಎಲ್‌.ಶಿವಣ್ಣ, ಅಧ್ಯಕ್ಷ ಎಚ್‌.ಬಿ.ರಾಮು ಭಾಗವಹಿಸಿದ್ದರು.

Share this article