ಶಿರಹಟ್ಟಿ: ಹಿಂದು ಮುಸ್ಲಿಂ ಭಾವೈಕ್ಯತೆ ಶಿರಹಟ್ಟಿ ಫಕೀರೇಶ್ವರ ಮಠದ ಭವ್ಯ ರಥೋತ್ಸವ ನೆರೆದ ಜನಸಾಗರದ ಮಧ್ಯೆ ಗುರುವಾರ ಸಂಜೆ ಮಠದ ಪೀಠಾಧಿಪತಿ ಶ್ರೀಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಚಾಲನೆ ನೀಡಿದರು. ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.
ಪ್ರತಿ ವರ್ಷ ಬುದ್ದ ಪೌರ್ಣಿಮೆಯಂದು ನಡೆಯುವ ಉತ್ತರ ಕರ್ನಾಟಕದ ಐತಿಹಾಸಿಕ, ಪ್ರಸಿದ್ದ ಜಾತ್ರೆಗಳಲ್ಲೊಂದಾದ ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರರ ಮಹಾರಥೋತ್ಸವ ಗುರುವಾರ ಜನಸಾಗರದ ಮಧ್ಯೆ ಶ್ರದ್ದಾ-ಭಕ್ತಿ ಸಡಗರ ಸಂಭ್ರಮದಿಂದ ನಡೆಯಿತು.ಸಹಸ್ರಾರು ಭಕ್ತ ಕೋಟಿಯ ಜಯಕಾರದ ಮಧ್ಯೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.ಮಠದ ಸಂಪ್ರದಾಯ, ಪರಂಪರೆಯಂತೆ ಕಳಸಾರೋಹಣ ಮಾಡಿದ ದಿನದಂದೇ ಮಠದ ಪೀಠಾಧ್ಯಕ್ಷ ಜ.ಫಕೀರ ಸಿದ್ದರಾಮ ಸ್ವಾಮೀಜಿ ಪಟ್ಟಣದ ಹೊರ ವಲಯದ ಶಿಕ್ಷಣ ಸಂಸ್ಥೆಗೆ ಬಂದು ನೆಲೆಸುತ್ತಾರೆ.ನಂತರ ರಥೋತ್ಸವದ ದಿನದಂದು ಅವರನ್ನು ಮೆರವಣಿಗೆ ಮೂಲಕ ಪುನ ಮಠಕ್ಕೆ ಕರೆತರಲಾಗುತ್ತದೆ.
ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿಗಳು ಅಲಂಕೃತ ರಥಕ್ಕೆ ಟೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಶ್ರೀಗಳ ನೇತೃತ್ವದಲ್ಲಿ ರಥವನ್ನು ಸಂಜೆ ಭಕ್ತ ಸಮೂಹ ಒಂದು ಕಿಮೀ ದೂರದವರೆಗೆ ತೇರನ್ನು ಸಾಗಿಸಿದ ಭಕ್ತರು ಪಾದಸ್ಥಳ ತಲುಪಿ ಮತ್ತೆ ಮೊದಲಿನ ಸ್ಥಳಕ್ಕೆ ರಥ ತಂದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಝಾಂಜ ಮೇಳ, ಹೆಜ್ಜೆ ಮೇಳ, ನಂದಿ ಕೋಲು, ವಾದ್ಯ ಮೇಳ ಮನಸೂರೆಗೊಂಡವು.ರಥಕ್ಕೆ ನೆರೆದಿದ್ದ ಭಕ್ತ ಸಮೂಹ ಉತ್ತತ್ತಿ, ಪೇರಲ, ಬಾಳೆ ಹಣ್ಣು ಎಸೆದು ಫಕೀರೇಶ್ವರ ಮಹಾರಾಜ ಕೀ ಜೈ, ಫಕೀರೇಶ್ವರನ ಅಂಗಾರ ನಾಡಿಗೆಲ್ಲ ಬಂಗಾರ, ಫಕೀರೇಶ್ವರನ ಜೋಳಗಿ ನಾಡಿಗೆಲ್ಲ ಹೋಳಗಿ, ಹರಹರ ಮಹಾದೇವ ಎಂಬ ಜಯಘೋಷ ಮಾಡಿದರು.
ಸಿದ್ದರಾಮ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೇವಾಲಯಗಳು ಭಕ್ತರ ಜೀವನದ ಅವಿಭಾಜ್ಯ ಅಂಗ. ದೇವರ ಜಾತ್ರೆ, ಉತ್ಸವ ನಮ್ಮ ಸಾಂಸ್ಕೃತಿಕ ಪರಂಪರೆ. ತೇರು ಎಳೆಯುವುದೂ ಸಂಸ್ಕೃತಿಯ ಭಾಗವೇ. ತೇರು ಎಂಬುದು ಸಂಚಾರಿ ದೇವಾಲಯ ಇದ್ದಂತೆ ಎಂದು ಹೇಳಿದರು.ನಮ್ಮ ದೇಶದಲ್ಲಿ ದೇವಾಲಯಗಳಿಗೆ ಮಹತ್ವ ಇದೆ. ಪ್ರತಿ ಗ್ರಾಮದಲ್ಲಿಯೂ ದೇವಾಲಯಗಳಿವೆ. ಆದರೆ ದೇವಾಲಯದ ಗರ್ಭಗುಡಿಯಲ್ಲಿ ಎಲ್ಲರಿಗೂ ಅವಕಾಶ ಇಲ್ಲ. ಇದೊಂದು ನಾವು ಮಾಡಿಕೊಂಡ ಕೆಟ್ಟ ವ್ಯವಸ್ಥೆ. ಎಲ್ಲರೂ ದೇವರ ಮಕ್ಕಳೆಂದಾಗ ಅಲ್ಲಿ ಎಲ್ಲರಿಗೂ ಅವಕಾಶ ಇರಬೇಕು. ಈ ವ್ಯವಸ್ಥೆಯ ಬದಲಾವಣೆಯೇ ರಥದ ನಿರ್ಮಾಣ. ಹಿರಿಯರು, ಮಠಾಧೀಶರು ಈ ಬದಲಾವಣೆ ಮಾಡಿ ಜನರು ಇರುವಲ್ಲಿಗೆ ರಥ ಎಳೆಯುವ ಮೂಲಕ ಭಗವಂತನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಿದರು. ದೇವರ ಉತ್ಸವ ಮೂರ್ತಿಯನ್ನೇ ರಥದಲ್ಲಿಟ್ಟು ರಥ ಎಳೆಯಲಾಗುತ್ತದೆ. ಭಕ್ತರಿದ್ದಲ್ಲಿಗೆ ದೇವರು ಬಂದು ದರ್ಶನ ನೀಡುವ ವ್ಯವಸ್ಥೆಯೇ ರಥ ಎಳೆಯುವುದು ಎಂದು ತಿಳಿಸಿದರು.