ಕನ್ನಡಪ್ರಭ ವಾರ್ತೆ, ಚನ್ನಗಿರಿ
ಭದ್ರಾ ನಾಲೆ ನೀರು ಏ.2ನೇ ತಾರೀಖಿನವರೆಗೆ ಹರಿಯಲಿದ್ದು, ಈ ನಾಲೆ ಅಕ್ಕ-ಪಕ್ಕ, ತುಸು ದೂರದಲ್ಲಿದ್ದವರು ಪಂಪ್ಸೆಟ್ ಮೂಲಕ ನೀರನ್ನು ಹರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇತ್ತ ನೀರಾವರಿ ಇಲಾಖೆಯ ಅಧಿಕಾರಿಗಳು, ಬೆಸ್ಕಾಂ, ಪೊಲೀಸ್, ತಹಸೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ಪ್ರತಿದಿನ ಅಕ್ರಮ ಪಂಪ್ಸೆಟ್ ತೆರವು ಕಾರ್ಯಾಚರಣೆಗಿಳಿದಿದ್ದಾರೆ.
ಭದ್ರಾ ನಾಲೆ ನೀರು ಕೊನೆ ಭಾಗದ ರೈತರಿಗೆ ಹರಿಯದೆ ಇರುವ ಕಾರಣ ಅಧಿಕಾರಿಗಳು ನಾಲೆಗೆ ಹಾಕಿರುವ 200ಕ್ಕೂ ಹೆಚ್ಚು ಅಕ್ರಮ ಪಂಪ್ಸೆಟ್ಗಳನ್ನು ತಾಲೂಕಿನ ಬೆಳ್ಳಿಗನೂಡು ಗ್ರಾಮದಿಂದ ಅಶೋಕನಗರದವರೆಗೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಆ ಭಾಗದ ವಿದ್ಯುತ್ ಸರಬರಾಜನ್ನು ಸಹ ಸ್ಥಗಿತಗೊಳಿಸಿದ್ದಾರೆ.ಅಡಕೆ ಬೆಳೆಯು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರಿಗೆ ಕೋಟ್ಯಂತರ ರು. ಆದಾಯ ತಂದುಕೊಡುತ್ತದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ತಾಲೂಕಿನ ಅರ್ಥಿಕ ಪರಿಸ್ಥಿತಿ ಏರು ಪೇರಾಗಲಿದೆ ಎನ್ನುತ್ತಾರೆ ಅಡಕೆ ಬೆಳೆಗಾರರಾದ ಶೇಖರಪ್ಪ, ದೇವರಹಳ್ಳಿ ರಾಕೇಶ್, ಎಂ.ಯು.ಚನ್ನಬಸಪ್ಪ, ಎಂ.ಎಸ್. ಮಲ್ಲೇಶಪ್ಪ.
ಅಡಕೆ ಬೆಳೆ ರಕ್ಷಣೆ ಜೊತೆಗೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ನೀರಿನ ತೊಂದರೆ ಕಾಣಿಸಿಕೊಂಡಿದೆ. 11 ಖಾಸಗಿ ಕೊಳವೆ ಬಾವಿಗಳಿಂದ ವಿ.ಬನ್ನಿಹಟ್ಟಿ, ಚಿಕ್ಕ ಮಳಲಿತಾಂಡ, ಹೊಸೂರು, ಕೆರೆಬಿಳಚಿ ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ಟ್ಯಾಂಕರ್ಗಳ ಅವಶ್ಯಕತೆ ಇದ್ದು, ಈ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ಲೋಹಿತ್ ಹೇಳುತ್ತಾರೆ.