ಕನ್ನಡಪ್ರಭ ವಾರ್ತೆ ಮುಧೋಳ
ಬುಧವಾರ ಸ್ಥಳೀಯ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆಯಲ್ಲಿ ರೈತ ಮುಖಂಡರು ಪ್ರವಾಹಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಶಾಶ್ವತ ಪರಿಹಾರ ಒದಗಿಸಬೇಕು ಎಂದಾಗ ಸಚಿವರು ರೈತ ಮುಖಂಡರನ್ನು ಸಿಎಂ ಅವರನ್ನ ಭೇಟಿ ಮಾಡಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವೆ ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡರು, ಮುಧೋಳ ತಾಲೂಕಿನ ಘಟಪ್ರಭಾ ನದಿಗೆ 2019 ರಿಂದ 2024ರವರೆಗೆ ಪ್ರತಿವರ್ಷ ಪ್ರವಾಹದಿಂದಾಗಿ ನದಿಪಾತ್ರದ ಗ್ರಾಮಗಳ ಮುಳಗಡೆಯಾಗುತ್ತಲಿವೆ. ಅಲ್ಲದೇ ನದಿ ದಂಡೆಯ ಸಹಸ್ರಾರು ಸಂಖ್ಯೆಯ ಹೊಲಗದ್ದೆಗಳು ಜಲಾವೃತಗೊಂಡು ರೈತರು ಬೆಳೆದ ಬೆಳೆಯು ನೀರಲ್ಲಿ ಮುಳಗಿ ಕೊಳೆತು ಹೊಗುತ್ತಿವೆ ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಾರಣ ನೆರೆ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಮುಳಗಡೆಯಾಗುವ ಮನೆಗಳಿಗೆ ಶಾಶ್ವತ ಸೂರು ಒದಗಿಸಬೇಕು. ಅಷ್ಟೇ ಅಲ್ಲ ಮುಳಗಡೆಯಾದ ಪ್ರತಿ ಎಕರೆ ಕಬ್ಬಿಗೆ ₹1 ಲಕ್ಷ, ಪ್ರತಿ ಎಕರೆ ಇತರೆ ಬೆಳೆಗಳಿಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಮಖಂಡಿ ಉಪ-ವಿಭಾಗಾಧಿಕಾರಿಗಳು, ತಹಸೀಲ್ದಾರರು, ಹೆಸ್ಕಾಂ, ಲೋಕೋಪಯೋಗಿ, ನೀರಾವರಿ ಇಲಾಖೆ ಸೇರಿದಂತೆ ತಾಲೂಕಿನ ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.