ಎಪಿಎಂಸಿ ಹೊರಗೆ ರಾಗಿ ಖರೀದಿ: ರೈತರ ಆಕ್ರೋಶ

KannadaprabhaNewsNetwork |  
Published : Mar 06, 2025, 12:34 AM IST
ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ರಾಗಿ ಖರೀದಿ ಮಾತ್ರ ಬಾಡಿಗೆ ಸ್ಥಳದಲ್ಲಿ | Kannada Prabha

ಸಾರಾಂಶ

ತಿಪಟೂರು ಎಪಿಎಂಸಿ ಏಷ್ಯಾದಲ್ಲಿಯೇ ಪ್ರಸಿದ್ದಿ ಪಡೆದಿದ್ದು ವಿಶಾಲವಾದ ಜಾಗವನ್ನು ಸಹ ಹೊಂದಿದೆ. ಎಲ್ಲಾ ಸೌಲಭ್ಯಗಳಿಂದ ಕೂಡಿರುವ ಎಪಿಎಂಸಿ ಇದ್ದರೂ ರಾಗಿ ಖರೀದಿಯನ್ನು ಮಾತ್ರ ನಗರದ ಬೇರೊಂದು ಬಾಡಿಗೆ ಸ್ಥಳದಲ್ಲಿ ರೈತರಿಂದ ಖರೀದಿಸುತ್ತಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಿಪಟೂರು ಎಪಿಎಂಸಿ ಏಷ್ಯಾದಲ್ಲಿಯೇ ಪ್ರಸಿದ್ದಿ ಪಡೆದಿದ್ದು ವಿಶಾಲವಾದ ಜಾಗವನ್ನು ಸಹ ಹೊಂದಿದೆ. ಎಲ್ಲಾ ಸೌಲಭ್ಯಗಳಿಂದ ಕೂಡಿರುವ ಎಪಿಎಂಸಿ ಇದ್ದರೂ ರಾಗಿ ಖರೀದಿಯನ್ನು ಮಾತ್ರ ನಗರದ ಬೇರೊಂದು ಬಾಡಿಗೆ ಸ್ಥಳದಲ್ಲಿ ರೈತರಿಂದ ಖರೀದಿಸುತ್ತಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಕೊಬ್ಬರಿ ಖರೀದಿ ನಡೆಯುವ ಮಾರುಕಟ್ಟೆ ತಿಪಟೂರು ಎಪಿಎಂಸಿಯಾಗಿದ್ದು ಕೃಷಿ ಮಾರಾಟ ಮಹಾಮಂಡಳದ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಎಪಿಎಂಸಿಯ ಒಳಗಡೆ ಎಪಿಎಂಸಿಯಿಂದ ರಾಗಿ ಖರೀದಿಗೆ ಬೇಕಾದ ಸುಸಜ್ಜಿತವಾದ ಸಾಕಷ್ಟು ಕಟ್ಟಡ, ವಿದ್ಯುತ್, ನೀರಿನ ವ್ಯವಸ್ಥೆ ಇದೆ. ರೈತರಿಂದ ರಾಗಿ ಖರೀದಿಗೆ ಹೆಸರು ನೋಂದಾವಣೆ ಪ್ರಕ್ರಿಯೆಯೂ ಸಹ ಇಲ್ಲೇ ನಡೆದಿದೆ. ಆದರೂ ಕೂಡ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ರಾಗಿ ಖರೀದಿ ಪ್ರಕ್ರಿಯೆಯನ್ನು ಮಾತ್ರ ಎಪಿಎಂಸಿಯಿಂದ ಹೊರಗೆ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಈಗ ಖರೀದಿ ಪ್ರಾರಂಭಿಸಿರುವ ಜಾಗದಲ್ಲಿ ರಾಗಿ ತಂದಂತಹ ರೈತರು ತಮ್ಮ ವಾಹನಗಳ ಜೊತೆ ಬಿಸಿಲಿನಲ್ಲಿ ನೀರು ನೆರಳಿಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಯಾರ ಅನುಕೂಲಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.

ದಿ. ೩ರ ಸೋಮವಾರದಂದು ಎಪಿಎಂಸಿ ಒಳಗಡೆ ರಾಗಿ ಖರೀದಿಗಾಗಿ ರಾಗಿ ರಾಶಿಗೆ ಪೂಜೆ ಮಾಡಿದ ಅಧಿಕಾರಿಗಳು, ಮಂಗಳವಾರ ಹಮಾಲರ ನಡುವೆ ನಡೆದ ಗಲಾಟೆಯಿಂದ ರಾಗಿ ಖರೀದಿ ನಿಂತು ಹೋಗಿತ್ತು. ಮತ್ತೆ ಬುಧವಾರ ಎಪಿಎಂಸಿಯಿಂದ ಹೊರಗಡೆ ಅಂದರೆ, ದೂರದ ಬಂಡಿಹಳ್ಳಿ ಸಮೀಪದ ಗೋಡನ್‌ನಲ್ಲಿ ತಿಂಗಳಿಗೆ 50ಸಾವಿರ ರು. ಬಾಡಿಗೆ ನೀಡಿ ರಾಗಿ ಖರೀದಿ ಪ್ರಾರಂಭಿಸಿದ್ದಾರೆ. ಸ್ಥಳದ ಬಗ್ಗೆ ಮಾಹಿತಿ ಇಲ್ಲದ ರೈತರು ಎಪಿಎಂಸಿ ಬಳಿ ಬಂದು ಹೋಗುತ್ತಿದ್ದಾರೆ. ರೈತರು ರಾಗಿ ಚೀಲಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತರುವುದರಿಂದ ಇಲ್ಲಿ ನಿಲ್ಲಿಸಲು ಸ್ಥಳದ ಅಭಾವವಿದೆ. ಅಲ್ಲದೆ ರಾಗಿ ತಂದ ದಿನವೇ ರಾಗಿ ಖರೀದಿಸಿದರೆ ಸರಿ. ಇಲ್ಲವಾದಲ್ಲಿ ರೈತರು ತಮ್ಮ ಮಾಲಿನೊಂದಿಗೆ ಬೀದಿಯಲ್ಲಿ ಕಾರ್ಗತ್ತಲಿನಲ್ಲಿ ಮಲಗುವ ಸ್ಥಿತಿ ಬಂದೊದಗಿದೆ. ನಿಗಮದವರು ಯಾವುದೇ ಸಿದ್ಧತೆ ಇಲ್ಲದೆ ಏಕಾಏಕಿ ಖರೀದಿ ಪ್ರಾರಂಭ ಮಾಡಿದ್ದು ಇಲ್ಲಿ ಯಾವ ರೈತರು ಯಾವಾಗ ರಾಗಿಯನ್ನು ತರಬೇಕು ಎಂಬುದರ ಜೇಷ್ಠತಾ ಪಟ್ಟಿಯನ್ನು ಸಹ ಪ್ರಕಟಿಸಿಲ್ಲ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗುತ್ತಿದ್ದು ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮವಹಿಸಬೇಕಿದೆ. ತಾಲೂಕಿನಲ್ಲಿ ಒಟ್ಟು 9454 ರೈತರು ಹೆಸರು ನೋಂದಾಯಿಸಿಕೊಂಡಿದ್ದು, 1,39,776ಸಾವಿರ ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೊಂದಣಿಯಾಗಿದೆ.ಕೋಟ್‌ 1 ಹಮಾಲಿಗರ ನಡುವಿನ ಗಲಾಟೆಯಿಂದಾಗಿ ಎಪಿಎಂಸಿಯಿಂದ ಹೊರಗಡೆ ಖರೀದಿ ಕೇಂದ್ರ ಆರಂಭಿಸಿದ್ದೇವೆ. ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿಕೊಟ್ಟು, ಖರೀದಿ ಮಾಡುತ್ತೇವೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು - ಶ್ರೀಧರ, ಜಿಲ್ಲಾಮಟ್ಟದ ರಾಗಿ ಖರೀದಿ ಅಧಿಕಾರಿ

ಕೋಟ್ 2 : ತಿಪಟೂರು ಎಪಿಎಂಸಿಯಲ್ಲಿ ರಾಗಿ ಖರೀದಿಗೆ ವಿಶಾಲ ಜಾಗವಿದ್ದರೂ ನಿಗಮದವರು ಬೇರೆಡೆ ರಾಗಿ ಖರೀದಿಸುತ್ತಿರುವ ಮರ್ಮ ತಿಳಿಯುತ್ತಿಲ್ಲ. ರಾಗಿ ತರುವ ರೈತರಿಗೆ ನೆರಳು, ನೀರಿನ ವ್ಯವಸ್ಥೆ ಇಲ್ಲ. ಒಂದು ವೇಳೆ ರೈತ ತಂದ ರಾಗಿಯನ್ನು ಮರುದಿನ ಖರೀದಿಸಿದರೆ ಆತ ಉಳಿಯಲು ಜಾಗವಿಲ್ಲ. ಎಪಿಎಂಸಿಯಲ್ಲಾಗಿದ್ದರೆ ಕಾವಲುಗಾರರ ವ್ಯವಸ್ಥೆಯಿತ್ತು ಮುಖ್ಯದ್ವಾರವನ್ನು ಹಾಕುವುದರಿಂದ ರೈತರಲ್ಲಿ ಭಯವಿರುತ್ತಿರಲಿಲ್ಲ. ಬಾಡಿಗೆ ನೀಡಿ ರಾಗಿ ಖರೀದಿಸುವುದರ ಉದ್ದೇಶ ತಿಳಿಯುತ್ತಿಲ್ಲ. ಒಟ್ಟಾರೆ ಸರ್ಕಾರದ ಹಣ ವೃಥಾ ವ್ಯಯವಾಗುತ್ತಿದೆ.

- ಭೋಜರಾಜು, ಅಧ್ಯಕ್ಷರು, ಸದೃಢ ಫೌಂಡೇಶನ್, ತಿಪಟೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ