ರೈತರು ಶಾಸಕರ ನಿವಾಸಕ್ಕೆ ಭೇಟಿ ನೀಡಿ ಮಾದಿನಕಟ್ಟೆ ಪುನಶ್ಚೇತನಕ್ಕೆ ಆಗ್ರಹ
ಕಡೂರು ವಿಧಾನಸಭಾ ಕ್ಷೇತ್ರದ ಚಿಕ್ಕಂಗಳ, ರಾಂಪುರದ ಗೇಟ್ ಬಳಿಯ ಮಾದಿನಕಟ್ಟೆ ಪುನಶ್ಚೇತನ ಕಾಮಗಾರಿಗೆ ಶೀಘ್ರವೇ ಹಣ ನೀಡಿ ರೈತರು-ಜಾನುವಾರುಗಳಿಗೆ ಆಗಿರುವ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.
ತಾಲೂಕಿನ ಚಿಕ್ಕಂಗಳ, ಹೆಳವರಹಟ್ಟಿ, ರಾಂಪುರ, ಪಾರ್ವತೀ ನಗರದ ಗ್ರಾಮಸ್ಥರು, ಗ್ರ್ರಾಮ ಪಂಚಾಯಿತಿ ಸದಸ್ಯರು, ರೈತರು ಕಡೂರಿನ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಮಾದಿನಕಟ್ಟೆ ಪುನಶ್ಚೇತನಕ್ಕೆ ಆಗ್ರಹಿಸಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿ, ಐತಿಹಾಸಿಕ ಮದಗದಕೆರೆ ನೀರು ಈ ಹಿಂದೆ ಮಾದಿನಕಟ್ಟೆಗೆ ಹರಿಯುತ್ತಿದ್ದು,ಈ ಕಟ್ಟೆ ಅನೇಕ ವರ್ಷಗಳಿಂದ ದುರಸ್ಥಿ ಕಾಣದೆ ಇರುವ ಹಿನ್ನೆಲೆಯಲ್ಲಿ ತಾವು ಕೂಡಲೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಅಂದಾಜು ವೆಚ್ಚದ ಮಾಹಿತಿ ತರಿಸಿಕೊಂಡು ಅನುದಾನ ನೀಡುವುದಾಗಿ ತಿಳಿಸಿದರು. ಗ್ರಾಮಸ್ಥರು ಸದರಿ ಕಾಮಗಾರಿಗೆ ಅಂದಾಜು 30-40 ಲಕ್ಷ ರು. ಆಗುವ ನಿರೀಕ್ಷೆ ಇರುವುದಾಗಿ ಮನದಟ್ಟು ಮಾಡಿದಾಗ ಶಾಸಕರು ಒಂದು ವಾರದೊಳಗೆ ನಿಮ್ಮ ಕಟ್ಟೆಯನ್ನು ಪುನಶ್ಚೇತನ ಮಾಡಿಸಿ ಕೊಡುತ್ತೇವೆ. ಒಂದು ಕೋಟಿ ರೂ ಮೇಲಾದರೆ 6 ತಿಂಗಳು ಕಾಯಬೇಕಾಗುತ್ತದೆ ಎಂದರು.ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಾಹಿತಿ ನೀಡಿದಾಗ ಕೂಡಲೇ ಮಾದಿನಕಟ್ಟೆ ದುರಸ್ಥಿ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕಂಗಳ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ನಾಯ್ಕ, ಹರಳಘಟ್ಟ ಗ್ರಾಪಂ ಅಧ್ಯಕ್ಷ ಬಸವರಾಜ್, ಸೇವಾನಾಯ್ಕ, ಕಾರದ ಶಿವಣ್ಣ, ದಾಸಯ್ಯನಗುತ್ತಿ ಚಂದ್ರಪ್ಪ, ಮಲ್ಲಿಕಾರ್ಜುನ್, ರಾಂಪುರದ ಹನುಮಂತಪ್ಪ ಮತ್ತಿತರರು ಇದ್ದರು.
ಕಡೂರು ತಾಲೂಕಿನ ರಾಂಪುರದ ಗ್ರಾಮಸ್ಥರು ಶಾಸಕ ಕೆ.ಎಸ್.ಆನಂದ್ ರವರನ್ನು ಭೇಟಿ ಮಾಡಿ ಮಾದಿನಕಟ್ಟೆ ಕಾಮಗಾರಿಗೆ ಅನುದಾನ ನೀಡಲು ಮನವಿ ಮಾಡಿದರು.ಪ್ರಕಾಶನಾಯ್ಕ,ಹನುಮಂತಪ್ಪ,ಬಸವರಾಜು ಇದ್ದರು.