ಕನ್ನಡಪ್ರಭ ವಾರ್ತೆ ಬೇಲೂರುಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದದಲ್ಲಿ ಭೂಮಿಕ್ ತಂದೆ ಲಕ್ಷ್ಮಣ್ ಅವರ ಆಕ್ರಂದನ, ಮೂಖರೋಧನೆ ಹೇಳತೀರದಾಗಿದ್ದು ಕಳೆದ ಎರಡು ದಿನದಿಂದ ಸಮಾಧಿ ಮೇಲೆ ಮಲಗಿ ಮರುಗುತ್ತಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಯುವಕ-ಯುವತಿಯರು ಸಾವೀಗಿಡಾಗಿದ್ದು, ಮೃತರ ಕುಟುಂಬದ ಗೋಳು ಹೇಳತೀರಾದಾಗಿದೆ. ಮಕ್ಕಳನ್ನ ನೆನೆದು ಹೆತ್ತವರು ಕಣ್ಣೀರಿಡುತ್ತಿದ್ದು, ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಲಕ್ಷ್ಮಣ್ ಅವರು ತನ್ನ ಮಗ ಭೂಮಿಕ್ ಸಮಾಧಿ ಮುಂದೆ ಗೋಳಾಡುತ್ತಿರುವುದು ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ.ಲಕ್ಷ್ಮಣ್ ಪ್ರೀತಿಯಿಂದ ಬೆಳೆಸಿದ ಮಗನನ್ನು ಕಳೆದುಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿ ದೊಡ್ಡ ಮಟ್ಟಕ್ಕೆ ಬಂದಿದ್ದು ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಮಗನೂ ಕೂಡ ಎಂದಿಗೂ ತಂದೆಗೆ ವಿರುದ್ಧವಾಗಿ ಮಾತನಾಡದೆ, ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದನು. ಆದರೆ ಕಳೆದ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭೂಮಿಕ್ ಸಾವನ್ನಪ್ಪಿದ್ದನು. ಅಂದಿನಿಂದ ಮಗ ಇಲ್ಲದನ್ನು ನೆನೆದು ಕಣ್ಣೀರಿಡುತ್ತಿರುವ ಭೂಮಿಕ್ ತಂದೆ ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದಾರೆ. ಮಗನ ಸಮಾಧಿಯ ಮೇಲೆ ಬಿದ್ದು ಹೊರಳಾಡಿರುವ ಭೂಮಿಕ್ ತಂದೆ ಆಕ್ರಂದನ ಮುಗಿಲು ಮುಟ್ಟಿದೆ.ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಗೋಳಾಡುತ್ತಿದ್ದು ನನ್ನ ಮಗನ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಮಗನು ಸೇರಿ ಅಮಾಯಕರು ಬಲಿಯಾಗಿದ್ದು ಕುಟುಂಬಗಳ ನೋವಿಗೆ ಹಣದಿಂದ ಪರಿಹಾರ ಕೊಟ್ಟರೆ ಸತ್ತವರು ಬದುಕಿ ಬರುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.