ಬಿಪಿಎಲ್‌ ಕಾರ್ಡ್‌ ರದ್ದಾಗುವ ಆತಂಕ, ಫ್ರೂಟ್ಸ್‌ ನೋಂದಣಿಗೆ ಹಿಂದೇಟು

KannadaprabhaNewsNetwork | Published : Dec 5, 2023 1:30 AM
Follow Us

ಸಾರಾಂಶ

ಡಂಬಳ ಹೋಬಳಿಯಾದ್ಯಂತ ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಅಧಿಕಾರಿ ವರ್ಗದವರು ಅನೇಕ ಬಾರಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ ರೈತರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ಮಾಹಿತಿಯಿಂದ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎನ್ನುವ ಆತಂಕ ಈ ಹಿಂದೇಟಿಗೆ ಕಾರಣ.

8528 ಹೊಲಗಳ ಎಫ್‌ಐಡಿ ಆಗಬೇಕು, ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲರಿಯಾಜಅಹ್ಮದ ಎಂ. ದೊಡ್ಡಮನಿಡಂಬಳ: ಡಂಬಳ ಹೋಬಳಿಯಾದ್ಯಂತ ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಅಧಿಕಾರಿ ವರ್ಗದವರು ಅನೇಕ ಬಾರಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ ರೈತರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ಮಾಹಿತಿಯಿಂದ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎನ್ನುವ ಆತಂಕ ಈ ಹಿಂದೇಟಿಗೆ ಕಾರಣ. ಸರ್ಕಾರದಿಂದ ಬೆಳೆನಷ್ಟ ಪರಿಹಾರ ಪಡೆಯಬೇಕಾದರೆ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನು ವಿವರ ಸಲ್ಲಿಸಬೇಕು. ಆದರೆ ಮುಂಡರಗಿ ಭಾಗದಲ್ಲಿ 3716, ಡಂಬಳ ಹೋಬಳಿಯ ಭಾಗದಲ್ಲಿ 4812ಕ್ಕೂ ಅಧಿಕ ರೈತರು ಹಿಂದೇಟು ಹಾಕುತ್ತಿದ್ದಾರೆ.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಂಭವಿಸಿರುವ ಬರದ ಪರಿಸ್ಥಿತಿಯಲ್ಲಿ ಮುಂಡರಗಿ ತಾಲೂಕು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಯಾದ ಸಂದರ್ಭದಲ್ಲಿ ರೈತರಿಗೆ ಫ್ರೂಟ್ಸ್‌ ತಂತ್ರಾಂಶದಲ್ಲಿ ಸೇರಿಸಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಸಂದಾಯ ಮಾಡಲಾಗುತ್ತದೆ. ಆದರೆ ಇನ್ನೂ ಕೂಡಾ ಶೇ. 40ರಷ್ಟು ರೈತರು ತಮ್ಮ ಮಾಹಿತಿ ನೀಡಿಲ್ಲ.

ನೋಂದಣಿ ಅಂಕಿ ಸಂಖ್ಯೆ:

ಮುಂಡರಗಿ ತಾಲೂಕಿನ 50590 ಪ್ಲಾಟ್‌ (ಹೊಲ) ಗಳಲ್ಲಿ ಮುಂಡರಗಿ ಭಾಗದ 18664 ಪ್ಲಾಟ್‌ಗಳು, ಡಂಬಳ ಹೋಬಳಿಯ 31926 ಪ್ಲಾಟ್‌ಗಳನ್ನು ಹೊಂದಿದ್ದು, ಅದರಲ್ಲಿ ಮುಂಡರಗಿ ಭಾಗದ 14948 ಪ್ಲಾಟ್‌ಗಳು ನೋಂದಣಿ ಆಗಿವೆ. ಡಂಬಳ ಹೋಬಳಿಯ 27114ರಷ್ಟು ನೋಂದಣಿಯಾಗಿವೆ. ಮುಂಡರಗಿಯ 3716 ಬಾಕಿ, ಡಂಬಳ ಹೋಬಳಿಯ 4812 ಬಾಕಿ ಇದ್ದು ರೈತರು ಕೂಡಲೇ ಎಫ್‍ಐಡಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕಾಗಿದೆ.

ರೇಷನ್ ಕಾರ್ಡ್‍ರದ್ದು ಆಗುತ್ತದೆ ಎನ್ನುವ ಆತಂಕ ಮುಂಡರಗಿ ತಾಲೂಕಿನಾದ್ಯಂತ ಕೆಲ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಐದು ಎಕರೆಗಿಂತ ಹೆಚ್ಚು ಹೊಲ ಹೊಂದಿರುವ ರೈತರ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ ಎಂಬ ವದಂತಿ ತಾಲೂಕಿನಲ್ಲಿ ಹರಡಿದೆ. ಅವಿಭಕ್ತ ಕುಟುಂಬಗಳಲ್ಲಿ ಜಮೀನುಗಳನ್ನು ಪೋಡಿ ಮಾಡಿಕೊಳ್ಳದೇ ಇರುವ ಕುಟುಂಬಗಳಲ್ಲಿ ಹೆಚ್ಚಿನ ಜಮೀನಿದ್ದು, ಫ್ರೂಟ್ಸ್ ತಂತ್ರಾಂಶ ಮಾಡಿಸಿದಾಗ ಎಲ್ಲಿ ನಮ್ಮ ಬಿಪಿಎಲ್ ಕಾರ್ಡ್ ರದ್ದು ಪಡಿಸಬಹುದು ಎಂಬ ಆತಂಕವು ರೈತರಲ್ಲಿ ಮನೆ ಮಾಡಿದೆ. ಇದರಿಂದ ಎಫ್‌ಐಡಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಿಂದ ಬರ ಪರಿಹಾರ ಹಾಕುವುದಾಗಿ ಘೋಷಿಸಿದ್ದಾರೆ. ರೈತರು ತಮ್ಮ ಎಲ್ಲ ಹೊಲಗಳನ್ನು ಎಫ್‍ಐಡಿ ನೋಂದಣಿ ಮಾಡಿಸಿದಾಗ ಮಾತ್ರ ಬರಪರಿಹಾರ ಸಿಗುತ್ತದೆ. ಆ ಹಿನ್ನಲೆ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ. ಎಲ್ಲ ರೈತರು ಕಡ್ಡಾಯವಾಗಿ ಎಫ್‍ಐಡಿ ಮಾಡಿಸಬೇಕು ಶಾಸಕ ಜಿ.ಎಸ್. ಪಾಟೀಲ ಹೇಳಿದ್ದಾರೆ.