ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥ
ಓವರ್ ಲೋಡ್ ಮಾಡುವಂತೆ ಒತ್ತಡಕನ್ನಡಪ್ರಭ ವಾರ್ತೆ ಕೊಪ್ಪಳನಗರದ ಎಪಿಎಂಸಿ ಗಂಜ್ನಲ್ಲಿ ಹಮಾಲರು ಮತ್ತು ಲಾರಿ ಚಾಲಕರ ಮಧ್ಯೆ ಮಾರಾಮಾರಿಯಾಗಿದ್ದು, ವಿವಾದ ತಾರಕಕ್ಕೇರಿದ್ದರಿಂದ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಮಾಡಲಾಗಿದೆ.
ನಗರದ ಎಪಿಎಂಸಿ ಗಂಜ್ನಲ್ಲಿ ಲಾರಿ ಓವರ್ ಲೋಡ್ ಮಾಡುವಂತೆ ಹಮಾಲರ ಮೇಲೆ ಒತ್ತಡ ಹಾಕಿದ್ದಾರೆ. ಇದಕ್ಕೆ ಹಮಾಲರು ಆಕ್ರೋಶ ವ್ಯಕ್ತಪಡಿಸಿದ್ದರೆ, ನಮ್ಮ ಕೈ ನಿಲುಕುವ ವರೆಗೂ ನಾವು ಲೋಡ್ ಮಾಡುತ್ತೇವೆ. ಅದಕ್ಕಿಂತ ಮೇಲೆ ನಾವು ಲೋಡ್ ಮಾಡುವುದಿಲ್ಲ ಎಂದಿದ್ದರಿಂದ ಲಾರಿ ಚಾಲಕರು ಹಮಾಲರ ವಿರುದ್ಧ ಹರಿಹಾಯ್ದಿದ್ದಾರೆ. ಇದು ಮಾತಿಗೆ ಮಾತು ಬೆಳೆದು ಪರಸ್ಪರ ವಾಗ್ದಾಳಿಗೆ ಕಾರಣವಾಗಿದೆ. ನೂಕಾಟ ತಳ್ಳಾಟವೂ ನಡೆದಿದೆ. ಈ ಸಂದರ್ಭದಲ್ಲಿ ಲೋಡ್ ಮಾಡುತ್ತಿದ್ದ ಹಮಾಲರ ಮೇಲೆ ಹಲ್ಲೆಯೂ ಆಗಿದೆ ಎಂದು ಹಮಾಲರು ಆರೋಪಿಸಿದ್ದಾರೆ.ಪೊಲೀಸ್ ಠಾಣೆಗೆ ದೂರು:
ಘಟನೆಯ ಕುರಿತು ನೂರಾರು ಹಮಾಲರು ನಗರ ಪೊಲೀಸ್ ಠಾಣೆಗೆ ಆಗಮಿಸಿ, ದೂರು ಸಲ್ಲಿಸಿದ್ದಾರೆ. ನಮ್ಮ ಮೇಲೆ ಹಲ್ಲೆಯಾಗಿದ್ದು, ಲಾರಿ ಚಾಲಕರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಲಾರಿ ಮಾಲೀಕರು ಮತ್ತು ಚಾಲಕರ ಸಂಘದವರು ಆಗಮಿಸಿದ್ದಾರೆ. ಇಬ್ಬರ ಮಧ್ಯೆಯೂ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗಿದೆ.ಲೋಡ್ ಮಾಡದಿರಲು ನಿರ್ಧಾರ:
ಹಮಾಲರ ಮೇಲೆ ಹಲ್ಲೆ ಮಾಡಿರುವ ಲಾರಿ ಚಾಲಕರ ಐದು ಲಾರಿಗಳ ಲೋಡ್ ಮತ್ತು ಅನ್ ಲೋಡ್ ಅನ್ನು ಹದಿನೈದು ದಿನಗಳ ಕಾಲ ಮಾಡದಿರಲು ಹಮಾಲರ ಸಂಘದಲ್ಲಿ ನಿರ್ಧರಿಸಲಾಗಿದೆ. ಹದಿನೈದು ದಿನದೊಳಗಾಗಿ ತಪ್ಪು ತಿದ್ದಿಕೊಂಡರೆ ಸರಿ, ಇಲ್ಲದಿದ್ದರೇ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ, ಎಫ್ಐಆರ್ ದಾಖಲು ಮಾಡಲು ನಿರ್ಧರಿಸಿದ್ದಾರೆ.ಅಲ್ಲೋಲ-ಕಲ್ಲೊಲ:
ಗಲಾಟೆಯಾಗಿದ್ದರಿದ ಕೆಲಸ ಬಿಟ್ಟು ಹಮಾಲರೆಲ್ಲರೂ ಪೊಲೀಸ್ ಠಾಣೆಗೆ ಬಂದಿದ್ದರಿಂದ ಎಪಿಎಂಸಿಯಲ್ಲಿ ಅಲ್ಲೋಲ್ಲ-ಕಲ್ಲೋಲ. ಸಾಲು ಸಾಲು ಲಾರಿಗಳು ಅನ್ ಲೋಡ್ ಆಗದೆ ಅಂಗಡಿಗಳ ಮುಂದೆ ನಿಲ್ಲಬೇಕಾಯಿತು. ಇದರಿಂದ ಟ್ರಾಫಿಕ್ ಜಾಮ್ ಅಷ್ಟೇ ಅಲ್ಲಾ, ವಹಿವಾಟು ಸಹ ಸ್ಥಗಿತವಾಗುವಂತಾಯಿತು. ಸಂಜೆಯ ವೇಳೆಗೆ ಮತ್ತೆ ಹಮಾಲರು ಕೆಲಸಕ್ಕೆ ಹಾಜರಾಗಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.