- ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮುಖೇನ ರಾಷ್ಟ್ರಪತಿಗೆ ಮನವಿ
- ರಾಜ್ಯಪಾಲರ ಅವಮಾನಿಸಿದ ಐವಾನ್, ಜಮೀರ್, ಕೃಷ್ಣಭೈರೇಗೌಡ, ದಿನೇಶ್ ವಿರುದ್ಧ ಕ್ರಮಕ್ಕೆ ಒತ್ತಾಯ - - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ಸಿನ ನಾಯಕರು, ಸಚಿವರು, ಶಾಸಕರು, ಬೆಂಬಲಿಗರು ತುಚ್ಛವಾಗಿ ಮಾತನಾಡಿದ್ದು, ಅವರ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೆ.ಬಿ. ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ಸಿನ ನಾಯಕರ ವಿರುದ್ಧ ಘೋಷಣೆ ಕೂಗಿದರು. ಗಾಂಧಿ ವೃತ್ತದಲ್ಲಿ ಸುಮಾರು ಹೊತ್ತು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ರಾಜ್ಯಪಾಲರ ಅವಹೇಳನ ಮಾಡಿ, ವೈಯಕ್ತಿಕ ತೇಜೋವಧೆ ಮಾಡಿದಕಾಂಗ್ರೆಸ್ಸಿಗರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.ಪಕ್ಷದ ಮುಖಂಡರು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಗೆ ಕಾರಣರಾದ, ಮುಡಾ ನಿವೇಶನಗಳನ್ನು ತಮ್ಮ ಪತ್ನಿಗೆ ಅಕ್ರಮವಾಗಿ ವರ್ಗಾಯಿಸಿಕೊಳ್ಳುವ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ನಾಯಕರು ಶೋಷಿತ ವರ್ಗಕ್ಕೆ ಸೇರಿದ ರಾಜ್ಯಪಾಲರ ಮೇಲೆ ಮುಗಿಬಿದ್ದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಶೋಷಿತ ಸಮುದಾಯ ವಿರೋಧಿ ಪ್ರವೃತ್ತಿಗೆ ಸಾಕ್ಷಿ ಎಂದರು.
ರಾಜ್ಯಪಾಲರ ಹುದ್ದೆ ಘನತೆ ಅರಿಯದ ಕಾಂಗ್ರೆಸಿನ ನಾಯಕರು ಗೆಹ್ಲೋಟ್ ಅವರ ವಿರುದ್ಧ ಅವಹೇಳನಾಕಾರಿಯಾಗಿ ಟೀಕಿಸುತ್ತಿದ್ದಾರೆ. ಹಾದಿ ಬೀದಿಯಲ್ಲಿ ರಾಜ್ಯಪಾಲರ ಅಣಕು ಶವಯಾತ್ರೆ, ಪ್ರತಿಕೃತಿ ದಹಿಸುವ ಮೂಲಕ ತಮ್ಮ ಹೀನ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿದ ಅಧಿಕಾರ. ಹಿಂದೆಯೂ ಯಡಿಯೂರಪ್ಪ ವಿರುದ್ಧ ಆಗಿನ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಆದೇಶಿಸಿದ್ದರು. ಅತ್ಯಂತ ವಿವೇಚನಾಯುಕ್ತವಾಗಿ, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿಸೂಕ್ಷ್ಮ ಪರಾಮರ್ಶಿಸಿದ ನಂತರವೇ ರಾಜ್ಯಪಾಲರು ಸಹ ತನಿಖೆಗೆ ಆದೇಶಿಸಿದ್ದಾರೆ ಎಂದರು.ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾಗೆ ಬಂದ ಗತಿ ನಿಮಗೂ ಬರುತ್ತದೆ. ನಾವು ಕಾಂಗ್ರೆಸ್ಸಿಗರು ರಾಜಭವನಕ್ಕೆ ನುಗ್ಗಿ ನಿಮ್ಮನ್ನು ಓಡಿಸುವ ಕೆಲಸ ಮಾಡುತ್ತೇವೆಂದು ಬೆದರಿಕೆ ಹಾಕುವ ಮಟ್ಟಕ್ಕೆ ಕಾಂಗ್ರೆಸ್ಸಿನ ಎಂಎಸ್ಸಿ ಐವಾನ್ ಡಿಸೋಜಾ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಕಾರಣವೆಂದು ವಿವಾದಾತ್ಮಕ, ಪ್ರಚೋದನಾಕಾರಿ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮ್ಮದ್, ಅವಾಚ್ಯವಾಗಿ ನಿಂದಿಸಿದ ಸಚಿವ ಕೃಷ್ಣ ಭೈರೇಗೌಡ, ದಿನೇಶ ಗುಂಡೂರಾವ್, ಶಾಸಕ ನಂಜೇಗೌಡ ಸೇರಿದಂತೆ ಕಾಂಗ್ರೆಸ್ಸಿನ ನಾಯಕರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ, ಕಾನೂನು ಕ್ರಮ ಜರುಗಿಸಲಿ ಎಂದು ಅವರು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ಮಾಡಾಳ್ ಮಲ್ಲಿಕಾರ್ಜುನ, ಶ್ರೀನಿವಾಸ ಟಿ.ದಾಸಕರಿಯಪ್ಪ, ಧನಂಜಯ ಕಡ್ಲೇಬಾಳ್, ಬಿ.ಎಂ. ಸತೀಶ, ಬಿ.ಎಸ್.ಜಗದೀಶ, ಅನಿಲಕುಮಾರ ನಾಯ್ಕ, ಆರ್.ಶಿವಾನಂದ, ಬಿ.ಜಿ.ಅಜಯಕುಮಾರ, ಎಚ್.ಡಿ.ವಿಶ್ವಾಸ, ಶಂಕರ ಗೌಡ ಬಿರಾದಾರ್, ಅಕ್ಕಿ ಪ್ರಭು ಕಲ್ಬುರ್ಗಿ, ಹನುಮಂತ ನಾಯ್ಕ, ಆಲೂರು ನಿಂಗರಾಜ, ವೀಣಾ ನಂಜಪ್ಪ, ಶಾಂತಾ ದೊರೈ, ರೇಖಾ ಕೃಷ್ಣ, ಗೌರಮ್ಮ ಪಾಟೀಲ್, ಕೆ.ಎಂ.ವೀರೇಶ, ರಾಜು, ಗಂಗಾಧರ, ಕೊಟ್ರೇಶ, ಟಿಪ್ಪು ಸುಲ್ತಾನ್, ಜಿ.ಕಿಶೋರಕುಮಾರ್, ಪ್ರಕಾಶ, ಬಸವರಾಜ ಡಿ.ಗುಬ್ಬಿ, ಶಿವನಗೌಡ ಪಾಟೀಲ್, ಎಚ್.ಎನ್.ಜಗದೀಶ, ಡಾ.ನಾಸೀರ್ ಅಹಮ್ಮದ್, ಅಂಜಿನಪ್ಪ, ಷಣ್ಮುಖಪ್ಪ, ರುದ್ರೇಶ, ಕೆಟಿಜೆ ನಗರ ಲೋಕೇಶ, ಬಿ.ಆನಂದ, ನಿಂಗರಾಜ ರೆಡ್ಡಿ, ಮಂಜುನಾಥ, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಚಂದ್ರಶೇಖರ ಪೂಜಾರ, ಸೋಗಿ ಗುರು, ಟಿಂಕರ್ ಮಂಜಣ್ಣ, ಇತರರು ಇದ್ದರು.- - -
ಕೋಟ್ಸ್ * ಭ್ರಷ್ಟಾಚಾರ ವಿರುದ್ಧ ಹೋರಾಟ: ರೇಣುಸಿದ್ದರಾಮಯ್ಯ ವಿರುದ್ಧ 61 ಕೇಸ್ ಇವೆ. ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿ ತಮ್ಮ ವಿರುದ್ಧದ ಪ್ರಕರಣಗಳಿಗೆ ಕ್ಲೀನ್ ಚಿಟ್ ಪಡೆದಿದ್ದಾರೆ. ವಾಲ್ಮೀಕಿ ನಿಗಮದ ₹183 ಕೋಟಿ ಅವ್ಯವಹಾರ ಹಣ ಹೆಂಡದ ಅಂಗಡಿಗೆ ಹೋಗಿದೆ. ನಿಮಗೆ ನಾಚಿಕೆ ಆಗಬೇಕು. ನಿಗಮದ ಚಂದ್ರಶೇಖರ ಆತ್ಮಹತ್ಯೆಗೆ ನ್ಯಾಯ ದೊರೆಯಬೇಕು ಎಂದಾದರೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - - * ಕರಿ ಕಾಗೆಗೆ ಕಪ್ಪುಚುಕ್ಕೆ ಇಡಲು ಹೇಗೆ ಸಾಧ್ಯ?
ಅಹಿಂದ ಚಾಂಪಿಯನ್ ಸಿದ್ದರಾಮಯ್ಯ ಏನೇನೂ ಕೃತ್ಯವೆಸಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರೇನು ಬಂಧಿಸಲು ಅನುಮತಿ ನೀಡಿಲ್ಲ. ಆರೋಪ ಬಂದಿದೆ, ತನಿಖೆಗೆ ಒಳಗಾಗಿ, ತಪ್ಪಿತಸ್ಥರು ಅಲ್ಲವೆಂದು ಸಾಬೀತುಪಡಿಸಲು ಹೇಳಿದ್ದಾರೆ. ಆದರೂ, ಕುಂಬಳಕಾಯಿ ಕಳ್ಳ ಎನ್ನುವಂತೆ ಸಿದ್ದರಾಮಯ್ಯ ಹೆಗಲು ಮುಟ್ಟಿಕೊಂಡು ನೋಡುವುದೇಕೆ? ಸಾಂವಿಧಾನಿಕ ಹುದ್ದೆಯಲ್ಲಿರುವ ದಲಿತ ಸಮುದಾಯದ ರಾಜ್ಯಪಾಲರ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವ ಎಂಎಲ್ಸಿ ಐವಾನ್ ಡಿಸೋಜಾ ಅಯೋಗ್ಯ- ಯಶವಂತ ರಾವ್ ಜಾಧವ್, ಮಾಜಿ ಜಿಲ್ಲಾಧ್ಯಕ್ಷ
- - - * ಜಮೀರ್, ಐವಾನ್ ದೇಶದ್ರೋಹಿಗಳು ಜಮೀರ್ ಅಹಮದ್ ಪ್ರತಿ ಬಾರಿ ದೇಶದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ, ಖಂಡಿಸುವುದಕ್ಕೆ ರೀತಿ ನೀತಿ ಇದೆ. ಸಂವಿಧಾನದ ಹುದ್ದೆಯಲ್ಲಿರುವ ರಾಜ್ಯಪಾಲರು ದಲಿತರು ಎಂಬ ಕಾರಣಕ್ಕೆ ವಾಪಸ್ ಹೋಗಿ ಎನ್ನುವಂತಹ ಜಮೀರ್ ಅಹಮ್ಮದ್, ಐವಾನ್ ಡಿಸೋಜಾ ನಿಜಕ್ಕೂ ದೇಶದ್ರೋಹಿಗಳು- ಮಾಡಾಳು ಮಲ್ಲಿಕಾರ್ಜುನ, ಯುವ ಮುಖಂಡ
- - - * 14 ಸೈಟ್ ವಾಪಸ್ ಅಂದಿದ್ದಕ್ಕಿಂತ ಸಾಕ್ಷಿ ಬೇಕೆ?! ರಾಜ್ಯಪಾಲರ ವಿರುದ್ಧ ಮಾತನಾಡಿದ ಐವಾನ್ ಡಿಸೋಜಾ, ಜಮೀರ್ ಅಹಮದ್ ವಿರುದ್ಧ ಭಯೋತ್ಪಾದಕ ನಿಗ್ರಹದಳಕ್ಕೆ ದೂರು ನೀಡಲಾಗುವುದು. ಈಗ ಸಿಎಂ 14 ಸೈಟ್ ವಾಪಸ್ ಕೊಡುತ್ತೇನೆಂದು ಹೇಳಿರುವುದೇ ಸಿದ್ದರಾಮಯ್ಯ ತಪ್ಪು ಮಾಡಿದ್ದನ್ನು ಪರೋಕ್ಷ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿ- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ
- - -