- ಕಳೆದ ವರ್ಷಕ್ಕಿಂತ ಶೇ.15 ರಿಂದ 20ರಷ್ಟು ದರ ಹೆಚ್ಚಳ
ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಪಟಾಕಿ ಬೆಲೆ ಮಾತ್ರ ದುಬಾರಿಯಾಗುತ್ತಲೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ಬೆಲೆಯಲ್ಲಿ ಶೇ.15 ರಿಂದ 20ರಷ್ಟು ಬೆಲೆ ಹೆಚ್ಚಳವಾಗಿದೆ.
ಪಟಾಕಿ ಮೇಲೆ ಕೇವಲ ಮಕ್ಕಳಿಗಷ್ಟೇ ಆಸಕ್ತಿ ಇರುವುದು ಬಿಟ್ಟರೆ, ಯುವಕರು ಪಟಾಕಿ ಮೇಲಿನ ವ್ಯಾಮೋಹದಿಂದ ದೂರವೇ ಉಳಿದಿದ್ದಾರೆ. ಪಟಾಕಿ ಸಿಡಿಸುವ ಉತ್ಸಾಹವೂ ಇಲ್ಲ. ಇದರ ಪರಿಣಾಮ ಪಟಾಕಿ ನಿರೀಕ್ಷೆಯಂತೆ ಮಾರಾಟವಾಗದಿರುವುದು ಮಾರಾಟಗಾರರಲ್ಲಿ ಬೇಸರ ಮೂಡಿಸಿದೆ.ಪ್ರತಿ ವರ್ಷ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ ಜಾಗ ಬದಲಾವಣೆ ಮಾಡಲಾಗಿದ್ದು, ಡಾ.ರಾಜಕುಮಾರ್ ಬಡಾವಣೆಯ ವಸ್ತು ಪ್ರದರ್ಶನ ನಡೆಯುವ ಜಾಗದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದು ನಗರದ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಹಲವಾರು ಮಂದಿ ಪಟಾಕಿ ನಿಷೇಧ ಮಾಡಿರಬಹುದೆಂಬ ಗೊಂದಲದಲ್ಲಿದ್ದಾರೆ. ಜಾಗದ ಬದಲಾವಣೆಯೂ ಪಟಾಕಿ ಮಾರಾಟದ ಮೇಲೆ ಕೊಂಚ ಪರಿಣಾಮ ಬೀರಿದೆ ಎನ್ನುವುದು ವ್ಯಾಪಾರಸ್ಥರು ಹೇಳುವ ಮಾತಾಗಿದೆ.
ಪಟಾಕಿ ಖರೀದಿಸಲು ಬರುವವರು ಮಕ್ಕಳಿಗೆ ಬೇಕಾದ ಸಣ್ಣ ಪುಟ್ಟ ಪಟಾಕಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಪಟಾಕಿಗಳನ್ನು ಕೊಳ್ಳುವುದಕ್ಕೆ ಯಾರೂ ಆಸಕ್ತಿಯನ್ನು ತೋರುತ್ತಿಲ್ಲ. ಮಕ್ಕಳ ಪಟಾಕಿಗಳಿಗೆ ಬೇಡಿಕೆ ಇದೆಯಾದರೂ ಅತಿ ಶಬ್ಧ ಬರುವ ಪಟಾಕಿಗಳಿಗೆ ಬೇಡಿಕೆ ಇಲ್ಲವಾಗಿದೆ.
ಪ್ರತಿ 12 ಕಿ.ಮೀ.ಗೊಂದರಂತೆ ಪಟಾಕಿ ಅಂಗಡಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಹೊರಗಿನ ತಾಲೂಕಿನವರು ಯಾರೂ ಪಟಾಕಿ ಕೊಳ್ಳುವುದಕ್ಕೆ ಜಿಲ್ಲಾ ಕೇಂದ್ರಕ್ಕೆ ಬರುವುದಿಲ್ಲ. ಆಯಾ ತಾಲೂಕುಗಳಲ್ಲಿಯೇ ಪಟಾಕಿ ಅಂಗಡಿಗಳು ಇರುವುದರಿಂದ ಅಲ್ಲೇ ಅವರು ಕೊಳ್ಳುತ್ತಾರೆ. ಮಂಡ್ಯ ನಗರ ಹಾಗೂ ಸುತ್ತಮುತ್ತಲ ಹಳ್ಳಿಯ ಜನರು ಬಂದು ಖರೀದಿಸಿದರಷ್ಟೇ ವ್ಯಾಪಾರ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.ಜಿಲ್ಲಾಡಳಿತ ನೀಡಿರುವ ಹೊಸ ಜಾಗದಲ್ಲಿ 17 ಸ್ಟಾಲ್ಗಳಿವೆ. ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಕೊಂಡೊಯ್ಯಲು ಚೆನ್ನಾಗಿದೆ. ನೀರು, ಮರಳು, ಅಗ್ನಿ ನಿರೋಧಕ ಸಿಲಿಂಡರ್ಗಳಿವೆ. ಪಟಾಕಿ ಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಲಕ್ಷಾಂತರ ರು. ಬಂಡವಾಳ ಹೂಡಿದ್ದೇವೆ. ಭಾನುವಾರದಿಂದ ವ್ಯಾಪಾರ ನೋಡಬೇಕು.
- ನಾಗರಾಜು, ಪಟಾಕಿ ಮಾರಾಟಗಾರ