ಲಾಸ್ಟ್ ಬೆಂಚೇ ಇಲ್ಲದ ತರಗತಿಗಳು ಕರ್ನಾಟಕದಲ್ಲೇ ಮೊದಲು!

KannadaprabhaNewsNetwork |  
Published : Jul 21, 2025, 12:00 AM IST
ಲಾಸ್ಟ್‌ ಬೆಂಚ್‌ | Kannada Prabha

ಸಾರಾಂಶ

ವೃತ್ತಾಕಾರದಲ್ಲಿ ಬೆಂಚ್ ವ್ಯವಸ್ಥೆ ಮಾಡಿರುವುದರಿಂದ ಮಧ್ಯದಲ್ಲಿ ಏನೂ ಅಡಚಣೆ ಇಲ್ಲದ್ದರಿಂದ ಶಿಕ್ಷಕರಿಗೆ ನೇರವಾಗಿ ಕ್ಷಿಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆ ಪರಿಶೀಲಿಸಲು ಸಾಧ್ಯವಾಗಿದೆ. ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಪರಸ್ಪರ ಮುಖಮುಖಿಯಾಗಿರುವುದರಿಂದ ಅವರಿಗೆ ಸಭಾ ಕಂಪನವು ಈ ಹಂತದಲ್ಲೇ ಮಾಯವಾಗುತ್ತದೆ. ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕಗಳ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.

ದುರ್ಗಾಕುಮಾರ್ ನಾಯರ್ ಕೆರೆ

ಕನ್ನಡಪ್ರಭ ವಾರ್ತೆ ಸುಳ್ಯತರಗತಿಗಳಲ್ಲಿ ಲಾಸ್ಟ್ ಬೆಂಚ್ ವ್ಯವಸ್ಥೆ ನಿವಾರಿಸಿ ವೃತ್ತಾಕಾರದ ಬೆಂಚ್ ವ್ಯವಸ್ಥೆ ಮಾಡಿರುವ ಕೇರಳದ ಶಾಲೆಗಳ ಕುರಿತಾದ ‘ಕನ್ನಡಪ್ರಭ’ ವರದಿ ವೈರಲ್ ಆಗಿ ರಾಜ್ಯದ ಕೆಲವು ಕಡೆಯೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಕಳೆದ ಮೂರು ದಶಕದಿಂದ ಈ ವ್ಯವಸ್ಥೆ ಜಾರಿಯಲ್ಲಿರುವ ಶಾಲೆಯೊಂದು ರಾಜ್ಯದಲ್ಲಿರುವುದು ಗಮನಕ್ಕೆ ಬಂದಿದೆ.

ಸುಳ್ಯದ ಸ್ನೇಹ ಖಾಸಗಿ ಶಿಕ್ಷಣ ಸಂಸ್ಥೆಯ ಕೆಲವು ತರಗತಿಗಳು ಕಳೆದ ೨೯ ವರ್ಷಗಳಿಂದ ಇದೇ ರೀತಿ ನಡೆಯುತ್ತಿವೆ.

೧೯೯೯ರಲ್ಲಿ ಈ ಶಾಲೆ ಆರಂಭಗೊಂಡಾಗಲೇ ವೈವಿಧ್ಯಮಯವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಒಂದಷ್ಟು ಧನಾತ್ಮಕ ಪರಿಣಾಮಗಳನ್ನೂ ಕಂಡುಕೊಳ್ಳಲಾಗಿದೆ.

ವೃತ್ತಾಕಾರದಲ್ಲಿ ಬೆಂಚ್ ವ್ಯವಸ್ಥೆ ಮಾಡಿರುವುದರಿಂದ ಮಧ್ಯದಲ್ಲಿ ಏನೂ ಅಡಚಣೆ ಇಲ್ಲದ್ದರಿಂದ ಶಿಕ್ಷಕರಿಗೆ ನೇರವಾಗಿ ಕ್ಷಿಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆ ಪರಿಶೀಲಿಸಲು ಸಾಧ್ಯವಾಗಿದೆ. ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಪರಸ್ಪರ ಮುಖಮುಖಿಯಾಗಿರುವುದರಿಂದ ಅವರಿಗೆ ಸಭಾ ಕಂಪನವು ಈ ಹಂತದಲ್ಲೇ ಮಾಯವಾಗುತ್ತದೆ. ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕಗಳ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.

ಗೋಡೆಯು ನಿಮ್ನ ಆಕಾರದಲ್ಲಿದ್ದು, ಕರಿಹಲಗೆಯನ್ನು ಗೋಡೆಯಲ್ಲೇ ಮಾಡಿರುವುದರಿಂದ ಅದರಲ್ಲಿ ಬರೆದುದೆಲ್ಲವೂ ಮಕ್ಕಳಿಗೆ ಕಾಣುತ್ತದೆ. ಎಲ್ಲೇ ಕುಳಿತ ಮಗುವಿಗೆ ಬೋರ್ಡಿನ ಯಾವುದೇ ಮೂಲೆಯಲ್ಲಿ ಬರೆದದ್ದು ಕಾಣಿಸುತ್ತದೆ.ಮಕ್ಕಳಿಗೂ ಬರೆಯುವ ಅವಕಾಶ ನೀಡುವ ಉದ್ದೇಶದಿಂದ ಕರಿಹಲಗೆಯನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ. ಸಾಕಷ್ಟು ಕಿಟಕಿಗಳಿರುವುದರಿಂದ ವಾತಾಯನ ವ್ಯವಸ್ಥೆ ಸುಖದಾಯಕವಾಗಿದೆ. ಮೇಲ್ಛಾವಣಿ ಸುಮಾರು ೧೮ ಅಡಿಗಳಷ್ಟು ಎತ್ತರವಿದ್ದು ಬಿಸಿಗಾಳಿ ಮೇಲಕ್ಕೆ ಸಾಗಿ ತರಗತಿಯಲ್ಲಿ ಮಕ್ಕಳು ಇಡೀ ದಿನ ಉಲ್ಲಾಸದಿಂದ ಇರುತ್ತಾರೆ. ವೃತ್ತಾಕಾರದ ಕೊಠಡಿ ಎಂಬುದರಲ್ಲಿ ಸೌಂದರ್ಯ ಮತ್ತು ಉತ್ಸಾಹದ ಪ್ರೇರಣೆ ಇದೆ.

ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ೧೯೯೦ರ ದಶಕದ ಕೊನೆಗೆ ‘ಚೈತನ್ಯ’ ಎಂಬ ಹೆಸರಿನಲ್ಲಿ ವೃತ್ತಾಕಾರದ ತರಗತಿಗಳನ್ನು ಅನುಮೋದಿಸಿತ್ತು. ಇದರ ಭಾಗವಾಗಿ ೧೯೯೯ರಲ್ಲಿ ಸುಳ್ಯದ ಈ ಸ್ನೇಹ ಶಾಲೆಯಲ್ಲಿ ಕರಾವಳಿ ಶಾಲೆಗಳ ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.ಸ್ನೇಹ ಶಾಲೆಯಲ್ಲಿ ಇಂತಹ ಮೂರು ಕೊಠಡಿಗಳಿದ್ದು, ಒಂದರಿಂದ ಮೂರನೇ ತರಗತಿಗಳು ಅಲ್ಲಿ ನಡೆಯುತ್ತವೆ.

ಪ್ರಸ್ತುತ ‘ಯು’ ಮಾದರಿಯ ತರಗತಿಗಳು ಪ್ರಚಾರ ಪಡೆಯುತ್ತಿರುವ ಹಾಗೂ ಅಂತಹ ಶಾಲೆಗಳನ್ನು ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಮತ್ತು ಕೆಲವೆಡೆ ಅನುಷ್ಠಾನವೂ ಆಗುತ್ತಿರುವ ಈ ಹೊತ್ತಿನಲ್ಲಿ ಇಂದಿಗಿಂತ ಮೂರು ದಶಕಗಳ ಹಿಂದೆಯೇ ಸುಳ್ಯದ ಪ್ರಕೃತಿ ಸಂಪತ್ಭರಿತ ಸ್ನೇಹ ಶಾಲೆಯಲ್ಲಿ ಈ ಮಾದರಿಯನ್ನು ಅಳವಡಿಸಿ ಪ್ರಯೋಜನ ಪಡೆಯಲಾಗಿದೆ.ಆಸಕ್ತರು ಯಾವಾಗ ಬೇಕಿದ್ದರೂ ಬಂದು ಈ ಮಾದರಿಯನ್ನು ನೋಡಬಹುದು ಎನ್ನುತ್ತಾರೆ ಸಂಸ್ಥೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ..............................

ಶಿಕ್ಷಣ ಇಲಾಖೆ ನಿರ್ಲಕ್ಷ್ಯಕರ್ನಾಟಕದ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ಒಬ್ಬ ಅಧಿಕಾರಿಯೂ ನಮ್ಮ ಶಾಲೆಯ ನೈಸರ್ಗಿಕ ಶಿಕ್ಷಣ ಸೌಲಭ್ಯಗಳನ್ನಾಗಲಿ, ನಮ್ಮ ಸೃಜನಾತ್ಮಕ ರಚನೆಗಳನ್ನಾಗಲಿ ನೋಡಲು ಬಂದಿಲ್ಲ ಎನ್ನುವ ಕೊರಗು ಸ್ನೇಹ ಶಿಕ್ಷಣ ಸಂಸ್ಥೆಯದ್ದು. ನಮ್ಮ ಶಾಲೆಗೆ ಅರಣ್ಯ ಇಲಾಖೆಯಿಂದ ‘ಅರಣ್ಯಮಿತ್ರ’ ಪ್ರಶಸ್ತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ‘ಜಲಮಿತ್ರ’ ಪ್ರಶಸ್ತಿಗಳು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್‌ ‘ಹಸಿರು ಶಾಲೆ’ ಪ್ರಶಸ್ತಿ ಬಂದಿದೆ. ಆದರೆ ಶಿಕ್ಷಣ ಇಲಾಖೆ ಈ ವರೆಗೆ ಗುರುತಿಸಿಲ್ಲ. ಹಾಗಾಗಿ ನಮ್ಮ ವೃತ್ತಾಕಾರದ ಕೊಠಡಿಗಳೂ ಪ್ರಚಾರ ಪಡೆದಿಲ್ಲ ಎನ್ನುತ್ತಾರೆ ಸಂಸ್ಥೆಯವರು.

...................

ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು ೧೯೯೬ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ ೨೯ ವರ್ಷಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಒಂದು ತರಗತಿಗೆ ೩೦ ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ನೀತಿ ಇದ್ದು, 20 ಅಡಿಗಳ ವ್ಯಾಸದ ಈ ಕೊಠಡಿಗಳಲ್ಲಿ ಒಂದೇ ವೃತ್ತದಲ್ಲಿ ಗೋಡೆಯ ಪರಿಧಿಯಲ್ಲಿ ೩೦ ಮಕ್ಕಳನ್ನು ಕೂರಿಸಲು ಸಾಧ್ಯವಾಗಿದೆ. ಯಾವುದೇ ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವುದು ಇತ್ಯಾದಿ ಸಮಸ್ಯೆಗಳು ಈತನಕ ಬಂದಿಲ್ಲ. ಬ್ಯಾಕ್ ಬೆಂಚರ್ ಸಮಸ್ಯೆಯನ್ನು ನೀಗಿಸಿದ್ದಲ್ಲದೆ, ಇದರಿಂದಾಗಿ ಇತರ ಹಲವು ಪ್ರಯೋಜನಗಳನ್ನೂ ಪಡೆಯಲಾಗಿದೆ.

। ಡಾ. ಚಂದ್ರಶೇಖರ ದಾಮ್ಲೆ , ಅಧ್ಯಕ್ಷರು, ಸ್ನೇಹ ಶಿಕ್ಷಣ ಸಂಸ್ಥೆ.

PREV

Recommended Stories

ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ
ಪರ್ತಕರ್ತರು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು:ಶಾಸಕ ಸಿದ್ದು ಸವದಿ