ಕನ್ನಡಪ್ರಭ ವಾರ್ತೆ ಹಲಗೂರು
ಯುವ ಜನಾಂಗ ಸೇರಿದಂತೆ ಬಹುತೇಕರು ಮೊಬೈಲ್ ಚಟಕ್ಕೆ ಬಿದ್ದಿರುವುದರಿಂದ ಜನಪದ ಕಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ.ಉಮೇಶ ದಡಮಹಳ್ಳಿ ಬೇಸರ ವ್ಯಕ್ತಪಡಿಸಿದರು.ಹುಸ್ಕೂರು ಗ್ರಾಮದಲ್ಲಿ ಹಲಗೂರಿನ ಅನಿಕೇತನ ಪ್ರತಿಷ್ಠಾನದಿಂದ ಆಯೋಜಿಸಿದ್ದ ಅನಿಕೇತನ ನಾಟಕೋತ್ಸವ-2024 ಕಾರ್ಯಕ್ರಮದಲ್ಲಿ ಮಾತನಾಡಿ, ನಾಟಕ ಕ್ಷೇತ್ರ ಮನುಷ್ಯರ ಜೀವನದ ಮೇಲೆ ತುಂಬಾ ಪ್ರಭಾವ ಬೀರಿದೆ. ಆದರೆ, ಮೊಬೈಲ್ ದುರ್ಬಳಕೆಯ ಚಟದಿಂದ ಜನಪದ ಕಲೆಗಳು ಮಸುಕಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲೆಗಳು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳ ಬಗೆಗಿನ ಅರಿವನ್ನು ಜನರಿಗೆ ಮೂಡಿಸಿದೆ. ನೊಂದ ಜನರ ಪ್ರತಿಭಟನೆ ಅಸ್ತ್ರವಾಗಿದೆ. ಮನುಷ್ಯರ ತುಮುಲವನ್ನು ಹೊರಹೊಮ್ಮಿಸುವ ಕ್ಷೇತ್ರವಾಗಿದೆ. ಶ್ರಮಿಕ ಜೀವಿಗಳಿಗೆ ಮಾನಸಿಕ, ದೈಹಿಕ ಭಾದೆ ನಿವಾರಿಸುವ ಮುಲಾಮು ಆಗಿದೆ. ಮನರಂಜನೆಗಷ್ಟೆ ಸೀಮಿತವಾಗದೆ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗಿದೆ ಎಂದರು.ಸಹಬಾಳ್ವೆ, ಸಹಜೀವನದ ಪರಿಪಾಠ ಕಲಿಸಿದೆ. ಸದಾ ಸಾಮರಸ್ಯ ಜೀವನಕ್ಕೆ ಭದ್ರಬುನಾದಿ ಆಗಿದ್ದ ಜನಪದ ಕಲೆಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಜನರ ಆರೋಗ್ಯ, ಆಯಸ್ಸು ವೃದ್ಧಿಸುವಲ್ಲಿಯೂ ಸಹಕಾರಿಯಾಗಿರುವ ಜನಪದ ಕಲೆಗಳು ಪುನರ್ ಚೇತನಗೊಳ್ಳಬೇಕು ಎಂದರು.
ಇಂದಿನ ಯುವಪೀಳಿಗೆ ರಂಗಕಲೆ ಸೇರಿದಂತೆ ಜನಪದ ಕಲೆಗಳ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆಯ ಜನರಿಗೂ ತಲುಪುವ ಕೆಲಸಗಳು ನಿರಂತರವಾಗಿ ಸಾಗಬೇಕು ಎಂದು ಆಶಿಸಿದರು.ಮಳವಳ್ಳಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆಂಬೂತಗೆರೆ ದ್ಯಾಪೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಹೆಚ್ಚು, ಹೆಚ್ಚು ನಾಟಕಗಳು ಆಯೋಜನೆಗೊಳ್ಳಬೇಕು. ಜನರು ಕೂಡ ನಾಟಕಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳಬಾರದು ಎಂದರು.
ಭಾರತೀನಗರ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಲಕ್ಷ್ಮೀಶ್ ಹೊನ್ನಲಗೆರೆ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಕಲಾವಿದರಿಂದ ಶ್ರೀಕೃಷ್ಣ ಸಂಧಾನ (ನಗೆನಾಟಕ) ಪ್ರದರ್ಶನಗೊಂಡಿತು. ಜನಪದೋತ್ಸವ, ರಂಗಗೀತೋತ್ಸವ, ರಂಗೋತ್ಸವ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಹುಸ್ಕೂರು ಶಿವಲಿಂಗೇಗೌಡ, ಕೆಂಪೇಗೌಡ, ಅಪ್ಪಾಜಯ್ಯನದೊಡ್ಡಿ ಮರಿಗೌಡ, ಅಗಸನಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ದಡಮಹಳ್ಳಿ ಚಿಕ್ಕಮಾದೇಗೌಡ, ರವಿವೆಂಕಟೇಗೌಡ, ಮಾದೇವ ಇದ್ದರು.