ಕನ್ನಡಪ್ರಭ ವಾರ್ತೆ ಚಡಚಣ
ಜಾನಪದ ಸಮಾಜದೊಳಗಿನ ಪ್ರಮುಖ ಪರಿಕಲ್ಪನೆಗಳನ್ನು ಸಂವಹನ ಮಾಡುವ ಸಾಧನ ಹಾಗೂ ಮಾನವ ಸ್ಥಿತಿಯ ಪ್ರಮುಖ ಧಾರ್ಮಿಕ ಮತ್ತು ತಾತ್ವಿಕ ಪ್ರತಿಬಿಂಬಗಳು ಎಂದು ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಮಾಗಣಗೇರಿ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಂಕೇತಿಕ ಭಾಷೆಯ ರೂಪದ ಮೂಲಕ ಸಾಮಾನ್ಯವಾಗಿ ಸಂಬಂಧಿಸಿರುವ ಸಾಮಾಜಿಕ ಅರಿವು ಮತ್ತು ಅವರ ಅನನ್ಯತೆಯ ವ್ಯಕ್ತಿಗಳ ತಿಳುವಳಿಕೆಯು ಹಂಚಿಕೆಯ ಗುಣಲಕ್ಷಣವಾಗಿದೆ ಎಂದರು.
ಪ್ರಾಧ್ಯಾಪಕ ಎಂ.ಎ.ಜನವಾಡ ಪ್ರಾಸ್ಥಾವಿಕವಾಗಿ ಮಾತನಾಡಿ, ಆ.22, ಜಗತ್ತಿನ ಜನಪದ ಸಮುದಾಯ, ವಿದ್ವಾಂಸರಿಗೆ ಒಂದು ಅವಿಸ್ಮರಣೀಯ ದಿನ. ಕಾರಣ, ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತೆನ ಎನ್ನುವ ಗುಪ್ತನಾಮದಲ್ಲಿ 1846ರ ಆಗಸ್ಟ್ 12 ರಂದು ದಿ ಅಥೇ ನಿಯಂ ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ 22 ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ ದಾಸ್ ವೋಕ್ ಮತ್ತು ಜನಪ್ರಿಯ ಪಳೆಯುಳಿಕೆ ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ ಫೋಕ್ಲೋರ್ ಎಂದು ಕರೆಯಬಹುದೆಂದು ಸೂಚಿಸಿದ. ಫೋಕ್ ಎಂದರೆ ಜನ, ಲೋರ್ ಎಂದರೇ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸುತ್ತಾನೆ. ಆಗ ಮೊದಲ ಬಾರಿಗೆ ಫೋಕ್ಲೋರ್ ಎನ್ನುವ ಪದವು ಮುದ್ರಿತ ರೂಪದಲ್ಲಿ ಅಕಡೆಮಿಕ್ ವಲಯದ ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ದಿನದ ನೆನಪಿಗಾಗಿ ಆ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸುತ್ತ ಬರಲಾಗಿದೆ ಎಂದರು.ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಎಂದರೇ ಎಲ್ಲೋ ಹೊರಗಿರುವ ಜನಪದ ಕತೆ, ಗೀತೆ, ಕಲಾ ಪ್ರಕಾರಗಳು ಮಾತ್ರವಲ್ಲ, ಕ್ಷಣ ಕ್ಷಣವೂ ಲೋಕವನ್ನು ನೋಡುವ ನೋಟಕ್ರಮವನ್ನು ನಿರ್ದೇಶಿಸುತ್ತಲೇ ಬಹುಸಂಖ್ಯಾತ ಜನರಲ್ಲಿ ಅಡಗಿ ಕೂತ ಪರಂಪರೆಯ ಬೇರುಗಳ ಮೊತ್ತ ಎಂದು ಕರೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಮುರುಗೇಶ್ ಕೆ.ಎಂ, ಪ್ರೊ.ಎಸ್.ಬಿ.ಶಿರೋಳ, ಪ್ರೊ.ರಾಮಣ್ಣ ನಡಗೇರಿ, ಪ್ರೊ.ಶಂಕರ, ಪ್ರೊ.ಬಿ.ಎಚ್.ಪವಾರ, ಪ್ರೊ.ಪೂಜಾ ಬುರುಡ, ಪ್ರೊ.ದೈವಾಡಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಮಾರ ಸಾಗರ ರಾಜನ್ನವರ ಸ್ವಾಗತಿಸಿದರು. ಕುಮಾರ ಚನಬಸ್ಸು ಫರೀಟ ನಿರೂಪಿಸಿ, ವಂದಿಸಿದರು.