ಮುದ್ದೇಬಿಹಾಳ: ಜಾನಪದ ಮಾನವ ಜನಾಂಗದ ಮೂಲ ಸಂಸ್ಕೃತಿ. ಕಾಡು ಮಾನವರು ನಾಡಿಗೆ ಬಂದು ಸಂಘಟಿತರಾಗಿ ಬದುಕಿಗಾಗಿ ಒಳ್ಳೆಯ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ, ಮನೋರಂಜನೆ ರೂಢಿಸಿಕೊಂಡು ಜೀವನ ಪ್ರಾರಂಭಿಸಿದರು. ಈ ಎಲ್ಲ ಪದ್ದತಿಗಳು ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮ ಬದುಕಿಗೆ ದಾರಿ ದೀಪವಾಗಿವೆ ಎಂದು ಎಂಜಿವ್ಹಿಸಿ ಬಿಇಡಿ ಕಾಲೇಜ ಪ್ರಾಚಾರ್ಯ ಡಾ.ಆರ್.ಜಿ.ಚಿಕ್ಕಮಠ ಅಭಿಪ್ರಾಯಪಟ್ಟರು.ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಿರೇಮಠದ ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಜಾನಪದ ಕಲಾ ಮೇಳ ಉದ್ಘಾಟಿಸಿ ಮಾತನಾಡಿದರು, ನಮ್ಮ ಹಿರಿಯರು ಅನುಭವದ ಮೂಲಕ ಕಟ್ಟಿಕೊಟ್ಟ ಜಾನಪದ ಸಿದ್ದಾಂತ ಸರ್ವ ಜನಾಂಗಕ್ಕೂ ಒಳಿತನ್ನು ಬಯಸುವ ಶ್ರೇಷ್ಠ ಪರಂಪರೆ. ಅದನ್ನು ಅರಿತು ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕಜಾಪ ಬಸವನಬಾಗೇವಾಡಿ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕಜಾಪ 9ವರ್ಷದಲ್ಲಿ ಯಾವ ಸಂಘಟನೆಯೂ ಮಾಡದಂತ ಕೆಲಸ ಮಾಡುತ್ತಿದೆ. ಕಲಾವಿದರಿಗೆ ಬಟ್ಟೆ, ದವಸ-ದಾನ್ಯ, ವಿತರಿಸಿದೆ. ಜಿಲ್ಲಾ, ತಾಲೂಕು, ವಲಯ, ಮತ್ತು ಗ್ರಾಮ ಘಟಕ ರಚಿಸಿ ಜಾನಪದ ಕಲೆ-ಕಲಾವಿದರ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಮುದ್ದೇಬಿಹಾಳ ತಾಲೂಕು ಕಜಾಪ ಅಧ್ಯಕ್ಷ ಎ.ಆರ್.ಮುಲ್ಲಾ, ಹಿರೇಮುರಾಳ ಪಿಕೆಪಿಎಸ್ ಅಧ್ಯಕ್ಷ ಬಿ.ಬಿ.ಭೋವಿ, ವಲಯ ಅಧ್ಯಕ್ಷ ಗಿರೀಶಗೌಡ ಪಾಟೀಲ, ಜಾನಪದ ಕಲಾವಿದ ಗುರುಪಾದಪ್ಪ ಚಲವಾದಿ, ಮೌಲಾಸಾಹೇಬ ಜಹಾಗೀರದಾರ, ಪಿಹೆಚ್ಡಿ ಪುರಸ್ಕೃತ ಡಾ.ಹೂಗಾರ ರನ್ನು ಸನ್ಮಾನಿಸಲಾಯಿತು. ಕಜಾಪ ಸದಸ್ಯೆ ಎಸ್.ಬಿ.ಗೊಂಗಡಿ ಸ್ವಾಗತಿಸಿ ನಿರೂಪಿಸಿದರು. ಎಂ.ಬಿ.ವಾಳದ ವಂದಿಸಿದರು. ಭಜನೆ, ಗಂಗೂರ ತತ್ವಪದ, ಉಪ್ಪಲದಿನ್ನಿ ರಿವಾಯತ ಪದ, ಇಟಗಿ ಜನಪದ ಗೀತೆ, ಬಿದರಕುಂದಿ-ಕುಂಟೋಜಿ ಹಂತಿಪದ, ಅಬ್ಬಿಹಾಳ ಡೊಳ್ಳಿನ ಪದ, ಕಣಮುಚನಾಳ ಸಂಪ್ರದಾಯ ಪದ, ದೇವರ ಹುಲಗಬಾಳ ಸೋಬಾನೆಪದ, ಕುಂಟೋಜಿ ಚೌಡಕಿ ಪದ ಪ್ರದರ್ಶನಗೊಂಡವು.