ಎರಡು ದಿನಗಳ ಕುವೆಂಪು ವಿ.ವಿ.ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಶಾಸಕ ಕೆ.ಎಸ್.ಆನಂದ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಗಳಿಗೂ ಪ್ರಾಮುಖ್ಯತೆ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಎರಡು ದಿನಗಳ ಕುವೆಂಪು ವಿ.ವಿ.ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ 2023-24 ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡೆಯೆಂದರೆ ಕೇವಲ ಕ್ರಿಕೆಟ್ ಅಥವಾ ಫುಟ್ ಬಾಲ್ ಮಾತ್ರವೇ ಅಲ್ಲ. ಅಷ್ಟೇ ದೈಹಿಕ ಶ್ರಮ ಮತ್ತು ಚಾಕಚಕ್ಯತೆ ಹೊಂದಿರಬೇಕಾದ ಕಬಡ್ಡಿಯಂತಹ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆ ಕಡೂರಿಗೆ ಕಬಡ್ಡಿ ಹಾಸ್ಟೆಲ್ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಮಾತನಾಡಿ, ಕಡೂರಿನಲ್ಲಿ ಇದೇ ಮೊದಲ ಬಾರಿಗೆ ವಿ.ವಿ.ಮಟ್ಟದ ಪಂದ್ಯಾವಳಿ ಯಶಸ್ವಿ ಯಾಗಿ ನಡೆಸಲಾಗಿದೆ. ಶೈಕ್ಷಣಿಕವಾಗಿ ಉತ್ತಮ ಸೇವೆ ನೀಡುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾ ಚಟುವಟಿಕೆಗಳಲ್ಲಿಯೂ ಸದಾ ಕ್ರಿಯಾಶೀಲವಾಗಿದೆ ಎಂದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ 29 ಕಾಲೇಜಿನ ತಂಡಗಳಲ್ಲಿ ಪ್ರಥಮ ಸ್ಥಾನವನ್ನು ಶಂಕರಘಟ್ಟದ ಯುಸಿಪಿಇ ಬಿಎಡ್ ಕಾಲೇಜು, ದ್ವಿತೀಯ ಸ್ಥಾನವನ್ನು ಭಧ್ರಾವತಿಯ ಸರ್.ಎಂ.ವಿ.ಕಾಲೇಜು, ತೃತೀಯ ಸ್ಥಾನವನ್ನು ತೀರ್ಥಹಳ್ಳಿಯ ಜಿಎಫ್.ಜಿ.ಸಿ.ಕಾಲೇಜು ಪಡೆದಿದೆ.
ಗೆಲುವು ಸಾಧಿಸಿದ ತಂಡಕ್ಕೆ ಶಾಸಕ ಕೆ.ಎಸ್. ಆನಂದ್ ಬಹುಮಾನ ವಿತರಿಸಿದರು.