- ಡಾ.ಕೆ.ಸುಧಾಕರ್, ಸಂಸದರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರು ಎಂದು ಹೆಸರಾದಂತೆ ರಾಜ್ಯ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಅಜಾತಶತ್ರು ಎಂದು ಹೆಸರಾಗಿದ್ದರು. ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಅವರು ಡಿಗ್ನಿಫೈಡ್ ಎನಿಸಿಕೊಂಡಿದ್ದರು. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ.
ನಮ್ಮದು ಗುರು-ಶಿಷ್ಯರ ಮೀರಿಸಿದ ಬಾಂಧವ್ಯಎಸ್.ಎಂ.ಕೃಷ್ಣ ಹಾಗೂ ನನ್ನ ಸಂಬಂಧ ಗುರು-ಶಿಷ್ಯ ಬಾಂಧವ್ಯವನ್ನೂ ಮೀರಿದೆ. ನಾನು ರಾಜಕೀಯ ಬದುಕಿಗೆ ಕಾಲಿರಿಸುವ ಮೊದಲು ಅವರ ಪ್ರತಿ ಹೆಜ್ಜೆಗಳನ್ನು ಗಮನಿಸುತ್ತಿದ್ದೆ. ಅವರಂತೆ ಯಾರೂ ಬೆಳೆಯಲು, ಆಲೋಚಿಸಲು, ರಾಜ್ಯವನ್ನು ಮುನ್ನಡೆಸಲು ಸಾಧ್ಯವಿಲ್ಲ. ಆದರೆ ಅವರು ಹಾಕಿದ ಹೆಜ್ಜೆಯಲ್ಲಿ ನಾನು ದಾರಿ ಕಂಡುಕೊಳ್ಳಬೇಕು ಎಂಬ ಗುರಿ ನನ್ನದಾಯಿತು. ಅದರಂತೆಯೇ ಈವರೆಗಿನ ನನ್ನ ರಾಜಕೀಯ ಬದುಕಿನಲ್ಲಿ ಅವರಿಂದ ಅಪಾರ ಮಾರ್ಗದರ್ಶನ ಪಡೆದಿದ್ದೇನೆ.
2019ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾದ ಬಳಿಕ ದಿಢೀರನೆ ಕೋವಿಡ್ ಸವಾಲು ಎದುರಾಗಿತ್ತು. ಆಗ ನಾನು ಕೃಷ್ಣ ಅವರ ಬಳಿಗೆ ಹೋಗಿ ಮಾರ್ಗದರ್ಶನ ಪಡೆದಿದ್ದೆ. ಆಗ ನನ್ನಲ್ಲಿ ಅವರು ಹುಮ್ಮಸ್ಸು ತುಂಬಿ ಜನರ ಆರೋಗ್ಯಕ್ಕಾಗಿ ನಿರಂತರ ಶ್ರಮಿಸುವಂತೆ ಪ್ರೋತ್ಸಾಹಿಸಿದ್ದರು.
ಎಸ್.ಎಂ.ಕೃಷ್ಣ ಅವರ ಮುತ್ಸದ್ಧಿತನವನ್ನು ಅವರ ಮಾತುಗಳಲ್ಲೇ ಕಾಣಬಹುದಿತ್ತು. ಅವರು ಬಳಸುತ್ತಿದ್ದ ಪದಗಳು, ವಿಧಾನಸಭೆಯಲ್ಲಿ ಆಡುತ್ತಿದ್ದ ಮಾತು ಕೇಳಲು ಎಷ್ಟು ಚಂದವೋ, ಅಷ್ಟೇ ನೇರ ನಿಷ್ಠುರವಾಗಿರುತ್ತಿತ್ತು. ಮಿತಭಾಷೆ, ಶಿಸ್ತು ಹಾಗೂ ಸಂಯಮವೇ ಎಸ್.ಎಂ.ಕೃಷ್ಣ ಅವರ ಆಭರಣ. ಅವರು ಯಾವುದೇ ಕಾರ್ಯಕ್ರಮವಾಗಲಿ, ವೇದಿಕೆಯಾಗಲಿ ಆ ಸಂದರ್ಭಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಧರಿಸುತ್ತಿದ್ದ ಉಡುಪಿನಲ್ಲೂ ಅವರ ಶಿಸ್ತು ಎದ್ದು ಕಾಣುತ್ತಿತ್ತು.
ಗಾಂಧೀಜಿಯ ಆಶೀರ್ವಾದಎಸ್.ಎಂ.ಕೃಷ್ಣ ಅವರಿಗೆ ಬಾಲ್ಯದಲ್ಲೇ ಮಹಾತ್ಮರ ಆಶೀರ್ವಾದ ಸಿಕ್ಕಿತ್ತು ಎಂಬುದು ಅಚ್ಚರಿಯ ಸಂಗತಿ. ಕೃಷ್ಣ ಅವರ ತಂದೆ ಎಸ್.ಸಿ.ಮಲ್ಲಯ್ಯ ಅವರು ಸಮಾಜ ಸುಧಾರಕರಾಗಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಮೈಸೂರು ರಾಜ್ಯಕ್ಕೆ ಬಂದಾಗ, ಮಲ್ಲಯ್ಯನವರ ಮನೆಗೆ ಭೇಟಿ ನೀಡಿದ್ದರು. ‘ಹರಿಜನ ಫಂಡ್ʼ ಎಂಬ ನಿಧಿ ನಡೆಸುತ್ತಿದ್ದ ಗಾಂಧೀಜಿಗೆ ಹಣ ಸಹಾಯ ಬೇಕಿತ್ತು. ಆಗ ಮಲ್ಲಯ್ಯನವರು ತಮ್ಮ ಪುತ್ರ, ಸಣ್ಣ ಬಾಲಕ ಎಸ್.ಎಂ.ಕೃಷ್ಣ ಕೈಯಿಂದ ₹2 ರುಪಾಯಿ ಕಾಣಿಕೆ ನೀಡಲು ಮುಂದಾದರು. ತಮಗೆ ಹಣ ಬೇಕಿಲ್ಲ, ಈ ಮಗುವಿನ ಕಿವಿಯ ಓಲೆ ಬೇಕೆಂದು ಗಾಂಧೀಜಿ ತಮಾಷೆಯಾಗಿ ಕೇಳಿದ್ದರು. ಆ ಮಾತನ್ನು ತಮಾಷೆಯಾಗಿ ಪರಿಗಣಿಸದ ಮಲ್ಲಯ್ಯನವರು, ಕೂಡಲೇ ಮಗನ ಕಿವಿಯಿಂದ ಓಲೆ ತೆಗೆದು ಗಾಂಧೀಜಿಗೆ ಕೈಗಿಟ್ಟರು. ಅದನ್ನು ನೋಡಿ ಗಾಂಧೀಜಿ, ಬಾಲಕ ಎಸ್.ಎಂ.ಕೃಷ್ಣ ಅವರನ್ನು ಪ್ರೀತಿಯಿಂದ ಹರಸಿದ್ದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅವರ ಮುಂದೆ ನೂರಾರು ಸವಾಲುಗಳಿದ್ದವು. ಅದರಲ್ಲೂ ಭೀಕರ ಬರಗಾಲ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇವರೇನಿದ್ದರೂ ರಾಷ್ಟ್ರ ರಾಜಕಾರಣಕ್ಕೆ ಸರಿ, ಇಂತಹ ಸ್ಥಳೀಯ ಸಮಸ್ಯೆ ನಿಭಾಯಿಸಲು ಇವರ ಕೈಯಿಂದ ಸಾಧ್ಯವಿಲ್ಲ ಎಂಬ ಟೀಕೆಗಳು ಆಗ ಕೇಳಿ ಬಂದಿತ್ತು. ಆದರೆ ಟೀಕಾಕಾರರು ಹುಬ್ಬೇರಿಸುವಂತೆ ಕೃಷ್ಣ ಅವರು ಒಂದೊಂದೇ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ನಂತರ ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಅಪಹರಣ, ಸರ್ಕಾರಕ್ಕೆ ಮಿಂಚಿನ ಪ್ರಹಾರ ಮಾಡಿತ್ತು. ಪ್ರತಿದಿನ ಹರಿತವಾದ ಕತ್ತಿಯ ಅಲಗಿನಲ್ಲೇ ನಡೆಯಬೇಕಾದ ಪರಿಸ್ಥಿತಿ ಕೃಷ್ಣ ಅವರದಾಗಿತ್ತು. ಕೃಷ್ಣ ಅವರು ಎಲ್ಲ ಬಗೆಯ ಸಂಧಾನಗಳನ್ನು ನಡೆಸಿ ರಾಜ್ಕುಮಾರ್ ಅವರನ್ನು ಯಶಸ್ವಿಯಾಗಿ ಮರಳಿ ಕರೆತಂದರು.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಆಧುನಿಕತೆಯ ಸ್ಪರ್ಶ ನೀಡಿದವರಲ್ಲಿ ಮೊದಲಿಗರೇ ಎಸ್.ಎಂ.ಕೃಷ್ಣ. ಬೆಂಗಳೂರಿನಲ್ಲಿ ಕೈಗಾರಿಕಾ ಸ್ಥಾಪನೆಯ ಅವಕಾಶಗಳನ್ನು ಸೃಷ್ಟಿಸಿ, ಐಟಿ-ಬಿಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಯನ್ನು ತಂದ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.ಕೊನೆಯ ಭೇಟಿ