ಕನ್ನಡಪ್ರಭ ವಾರ್ತೆ ರಾಮನಗರ
ಸಮಾಜದ ದುರ್ಬಲ ವರ್ಗಗಳಿಗೆ ಉಚಿತವಾಗಿ ಕಾನೂನು ಸೇವೆಗಳ ನೆರವು ನೀಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ.ವಿ. ರೇಣುಕಾ ಹೇಳಿದರು.ನಗರದ ಎಂ.ಎಚ್ ಕಾನೂನು ಕಾಲೇಜಿನಲ್ಲಿ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಎಂ.ಎಚ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದ ಹಲವೆಡೆ ಉಚಿತ ಕಾನೂನು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಉದ್ದೇಶ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆಗಳ ನೆರವು ನೀಡುವುದಾಗಿದೆ. ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿ, ಪಂಗಡದವರು, ಮಕ್ಕಳು ಹಾಗೂ ನೈಸರ್ಗಿಕ ವಿಕೋಪಕ್ಕೊಳಗಾಗಿ ನೊಂದವರಿಗೆ ಕಾನೂನಿನ ನೆರವನ್ನು ನೀಡಿ, ಆ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಿ ಕಾನೂನಾತ್ಮಕ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.1995ರ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಭಾರತದ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯನ್ನು ಅಂಗೀಕರಿಸಿತು. ಭಾರತೀಯ ಸಂವಿಧಾನದ 39 ಎ ವಿಧಿಯ ಅಡಿಯಲ್ಲಿ ಭಾರತದ ಸಂಸತ್ತು, ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987 ಅನ್ನು ಅಂಗೀಕರಿಸಿ, 1995ರ ನವೆಂಬರ್ 9 ರಂದು ಜಾರಿಗೆ ತಂದಿತು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾನೂನು ಕಾಲೇಜುಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಿದ್ದೇವೆ. ನಮ್ಮ ಕರ್ನಾಟಕದಲ್ಲಿ 1995 ನವಂಬರ್ 9 ರಂದು ರಾಜ್ಯ ಕಾನೂನು ಪ್ರಾಧಿಕಾರವು ಜಾರಿಗೆ ಬಂದಿತು. ಇದರ ಉದ್ದೇಶವೇನೆಂದರೆ ಪ್ರತಿವರ್ಷ ನವೆಂಬರ್ 9 ರಂದು ಜಾರಿಗೆ ಬಂದ ಈ ಶಾಸನವನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987, ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವನ್ನು ಒದಗಿಸಿ, ಆರ್ಥಿಕ ಅಥವಾ ಅಂಗ ವೈಫಲ್ಯಗಳ ಕಾರಣದಿಂದ ಯಾವುದೇ ವ್ಯಕ್ತಿಯು ನ್ಯಾಯ ಪಡೆಯುವ ಪ್ರಕ್ರಿಯೆಯಿಂದ ಹೊರಗೆ ಉಳಿಯುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಅನುಕೂಲವಾಗುವಂತೆ ಲೋಕ ಅದಾಲತ್ಗಳನ್ನು ಸ್ಥಾಪಿಸಿ, ಅವುಗಳ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಾಗೂ ಸಮಾಜದ ಇತರೆ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡಲು ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಜನರಲ್ಲಿ ಅವರ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಜ್ಯಮಟ್ಟದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿ ಮತ್ತು ಹೈಕೋರ್ಟ್ ಮಟ್ಟದಲ್ಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಮಟ್ಟದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ರಚಿಸಿ ಅವುಗಳ ಮೂಲಕ ಕಾನೂನು ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್. ಸವಿತಾ ಮಾತನಾಡಿ, ದುರ್ಬಲ ವರ್ಗದವರಿಗೆ ಕಾನೂನಿನ ಸೇವೆಯನ್ನು ಒದಗಿಸುವುದು, ಆ ಮೂಲಕ ಸಮಾಜದಲ್ಲಿ ನ್ಯಾಯ ಪಡೆಯುವ ಹಕ್ಕನ್ನು ನ್ಯಾಯಯುತವಾಗಿ ಎಲ್ಲರಿಗೂ ಕಲ್ಪಿಸಿಕೊಡುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.
ರಾಷ್ಟ್ರೀಯ ಕಾನೂನು ಪ್ರಾಧಿಕಾರವು ಸಾರ್ವಜನಿಕರಿಗೆ ಉಚಿತ ಕಾನೂನಿನ ನೆರವು ಪಡೆಯಲು ಸಹಾಯವಾಣಿ-15100 ಯನ್ನು ತೆರೆದಿದ್ದು, ಯಾರಿಗಾದರೂ ಕಾನೂನಿನ ಸಲಹೆ ಅಗತ್ಯವಿದ್ದರೆ ಉಚಿತವಾಗಿ ಕರೆ ಮಾಡಿ ಕಾನೂನಿನ ಸಲಹೆ ಪಡೆಯಬಹುದು. ಕಾನೂನು ಪ್ರಾಧಿಕಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜಾರಿಯಾದ ಕಾನೂನಿಗೆ ಸಂಬಂಧಪಟ್ಟ ಯೋಜನೆಗಳು ಹಾಗೂ ಬಡತನ ನಿರ್ಮೂಲನಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಜನರಿಗೆ ತಿಳಿಸಿ ಅದರ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಹೇಳಿದರು.ಎಂ.ಎಚ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಚ್. ಚಂದ್ರಶೇಖರ್, ಪ್ರಾಂಶುಪಾಲ ಕೆ.ಎಂ. ಗಂಗರಾಜ , ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ವಿ. ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ ಎಸ್, ಖಜಾಂಚಿ ಮಂಜೇಶ್ ಗೌಡ ಉಪಸ್ಥಿತರಿದ್ದರು.