ರಾಮನಗರ: ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಫೆ.19 ರಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ತಿಳಿಸಿದರು.
ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿವೆರೆಗೆ ವಕೀಲರು ಮೆರವಣಿಗೆ ನಡೆಸುವರು. ನಂತರ ಅಲ್ಲಿಂದಲೇ ನಮ್ಮ ಉಗ್ರ ಹೋರಾಟ ಮುಂದುವರೆಯಲಿದ್ದು, ನ್ಯಾಯವಾದಿಗಳಿಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತೇವೆ ಎಂದರು.
ನಮ್ಮ ನಡೆ ರಾಮನಗರ ಕಡೆ:ರಾಮನಗರದಲ್ಲಿ ವಕೀಲರ ಮೇಲಿನ ಸುಳ್ಳು ಪ್ರಕರಣ ದಾಖಲು ಘಟನೆ ವಿರುದ್ಧ ರಾಜ್ಯದ 193 ಬಾರ್ ಕೌನ್ಸಿಲ್ಗಳ ವಕೀಲರು ಬೆಂಬಲ ಸೂಚಿಸಿದ್ದು, ನಮ್ಮ ನಡೆ ರಾಮನಗರ ಕಡೆ ಘೋಷ ವಾಕ್ಯದೊಂದಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಸೋಮವಾರ ಆಯಾಯ ಜಿಲ್ಲೆಗಳಲ್ಲಿ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವರು. ಮಂಗಳವಾರದಿಂದ ಪ್ರತಿಭಟನೆಯಲ್ಲಿ ಪ್ರತಿ ದಿನವೂ ರಾಜ್ಯದ ಬೇರೆ ಬೇರೆ ಬಾರ್ ಕೌನ್ಸಿಲ್ಗಳ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಂದು ಮೂಲದ ಪ್ರಕಾರ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿಯೇ ಸಮಸ್ಯೆ ಬಗೆಹರಿಯಲೆಂದು ಅಧಿಕಾರಿಗಳೆಲ್ಲರು ಮೌನ ವಹಿಸಿದ್ದಾರೆಂದು ತಿಳಿದು ಬಂದಿದೆ. ಇಷ್ಟು ದಿನಗಳಾದರು ಯಾವುದೇ ಉತ್ತರ ಬಂದಿಲ್ಲ. ಸ್ಥಳೀಯ ಶಾಸಕರನ್ನು ವಕೀಲರ ಭೇಟಿ ಮಾಡಿದರು. ನನ್ನ ವಿಚಾರವಾಗಿ ತಪ್ಪು ಕಲ್ಪನೆ ಬೇಡ. ಇದರಲ್ಲಿ ನನ್ನ ಪಾತ್ರ ಇಲ್ಲವೆಂದು ಶಾಸಕರೇ ಹೇಳಿದ್ದಾರೆ. ಇನ್ನು ವಕೀಲರಲ್ಲಿ ಜಾತಿ ಧರ್ಮದ ಬೇಧಭಾವ ಇಲ್ಲ. ಹೊರಗಿನ ವ್ಯಕ್ತಿಗಳು ಜಾತಿ ಧರ್ಮವನ್ನು ಮಧ್ಯೆ ಎಳೆ ತರುತ್ತಿದ್ದಾರೆ. ಇದಕ್ಕೆಲ್ಲ ನಾವು ಅಂಜುವುದಿಲ್ಲ. ವಕೀಲರ ಹೋರಾಟದಲ್ಲಿ ಯಾವುದೇ ಸಮಸ್ಯೆಯಾದರೂ, ಅದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆಗಾರರು ಎಂದು ವಿಶಾಲ್ ರಘು ಎಚ್ಚರಿಸಿದರು.
ಕೋಟ್ ...
ವಕೀಲರ ಪ್ರತಿಭಟನೆ ನನ್ನ ಗಮನಕ್ಕೆ ಬಂದಿಲ್ಲ. ಆ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ. ನನಗೆ ಆ ವಿಷಯವೂ ತಿಳಿದಿಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ. ಈಗಷ್ಟೇ ಸ್ವಲ್ಪ ಮಾಹಿತಿ ಬಂದಿದೆ. ವಕೀಲರು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.