ನಾಳೆ, ನಾಡಿದ್ದು ನೀನಾಸಂ ತಿರುಗಾಟ<bha>;</bha> ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗನಮನ

KannadaprabhaNewsNetwork | Published : Jan 6, 2024 2:00 AM

ನಾಳೆ, ನಾಡಿದ್ದು ನೀನಾಸಂ ತಿರುಗಾಟ; ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗನಮನ. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾಹಿತಿ

- ಅಭಿನಯ ಗೌರವ

- ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾಹಿತಿ ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ಜ.7 ಮತ್ತು 8ರಂದು ನೀನಾಸಂ ತಿರುಗಾಟ ನಾಟಕಗಳು ಹಾಗೂ ರೈತ ನೇತಾರ ದಿ. ಕೆ.ಎಸ್. ಪುಟ್ಟಣ್ಣ ಯ್ಯ ಅವರಿಗೆ ರಂಗನಮನವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿ. 7ರಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅಧ್ಯಕ್ಷತೆಯಲ್ಲಿ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಉದ್ಘಾಟಿಸುವರು ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡರು ದಿ. ಪುಟ್ಟಣ್ಣಯ್ಯನವರ ಒಡನಾಡಿ ಕುರಿತು ಮಾತನಾಡುವರು. ಪುಣ್ಣಯ್ಯನವರ ಪತ್ನಿ ಸುನೀತಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್, ಸಾಮಾಜಿಕ ಕಾರ್ಯಕರ್ತ ಸಿ.ಎಂ. ದ್ಯಾವಪ್ಪ ಭಾಗವಹಿಸುವರು ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಚಂದ್ರಶೇಖರ ಕಂಬಾರ ಅವರು ರಚಿಸಿರುವ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ಹುಲಿಯ ನೆರಳು ನಾಟಕವನ್ನು ನೀನಾಸಂ ಕಲಾವಿದರು ಸಾದರ ಪಡಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ ಎಂದು ಹೇಳಿದರು.

ಜ. 8ರಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ. ಗೋವಿಂದೇಗೌಡರು ಪುಟ್ಟಣ್ಣಯ್ಯನವರ ಒಡನಾಡಿ ಕುರಿತು ಮಾತನಾಡುವರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯ್‌ಕುಮಾರ್ ಅವರು ಕಲಾವಿದರಿಗೆ ನೆನಪಿನ ಕಾಣಿಕೆ ವಿತರಿಸುವರು ಎಂದರು.

ಈ ವೇಳೆ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಸಿ. ತ್ಯಾಗರಾಜು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಂತರ ಲೂಯಿ ನಕೋಸಿ ರಚನೆಯ ನಟರಾಜ ಹೊನ್ನವಳ್ಳಿ ಕನ್ನಡಕ್ಕೆ ರಚಿಸಿರುವ ಆ ಲಯ ಈ ಲಯ ನಾಟಕವನ್ನು ಎಚ್.ಕೆ. ಶ್ವೇತಾರಾಣಿ ನಿರ್ದೇಶನದಲ್ಲಿ ನೀನಾಸಂ ಕಲಾವಿದರು ಸಾದರಪಡಿಸುವರು ಎಂದು ಹೇಳಿದರು.

ರೈತರಿಗೆ ಅನ್ಯಾಯವಾದಾಗ ಪ್ರತಿಭಟಿಸಿ ಧ್ವನಿ ಎತ್ತಿ ನ್ಯಾಯ ಕೊಡಿಸುವ, ಘನತೆ ಕಲ್ಪಿಸುವ ನಿಟ್ಟಿನಲ್ಲಿ ನಡೆಸಿದ ಅವಿರತ ಹೋರಾಟ, ಸದನದಲ್ಲಿ ರೈತರ ಬಗ್ಗೆ ದಿಟ್ಟ ಮಾತುಗಳನ್ನು ಆಡಿ ಇತಿಹಾಸ ಪುಟಗಳನ್ನು ಶಾಶ್ವತವಾಗಿರಿಸುವಂತೆ ಮಾಡಿದ ರೈತ ನಾಯಕ ದಿ.ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ರಂಗನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ವತಿಯಿಂದ 2018ರಲ್ಲಿ ಆಂದೋಲನ ಪತ್ರಿಕೆ ಸಂಪಾದಕ ದಿ. ರಾಜಶೇಖರ ಕೋಟಿ ಅವರಿಗೆ ಮೊದಲ ಬಾರಿಗೆ ರಂಗನಮನ ಸಲ್ಲಿಸಲಾಯಿತು. 2019-20 ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ರಂಗನಮನ ಕಾರ್‍ಯಕ್ರಮ ಏರ್ಪಡಿಸಲಾಗಿತ್ತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಲಿಂಗಪ್ಪ ಚನ್ನನಕೆರೆ, ಕಾರ್‍ಯದರ್ಶಿ ಬಿ.ನಂಜುಂಡಸ್ವಾಮಿ, ಖಜಾಂಚಿ ಎಂ.ಎನ್. ರಾಜೇಶ್, ಪ್ರಧಾನ ಸಂಚಾಲಕ ಬಸವರಾಜ ಸಂತೆಕಸಲಗೆರೆ ಇದ್ದರು.

- - -

5ಕೆಎಂಎನ್ ಡಿ11,12,13

11 - ಸುದ್ದಿಗೋಷ್ಠಿಯಲ್ಲಿ ಮಂಗಲ ಎಂ.ಯೋಗೀಶ್

12, 13- ಹುಲಿಯ ನೆರಳು, ಆ ಲಯ ಈ ಲಯ