ಕನ್ನಡಪ್ರಭ ವಾರ್ತೆ ಬೆಂಗಳೂರು
ಅನಧಿಕೃತ ಸಂಪರ್ಕ, ಗುಣಮಟ್ಟವಿಲ್ಲದ ಉಪಕರಣ ಬಳಕೆಯಿಂದಾಗಿ ಆಕಸ್ಮಿಕ ವಿದ್ಯುತ್ ಅವಘಡ ಸಂಭವಿಸಿ ಪ್ರಾಣ ಹಾನಿಯಾಗುವುದನ್ನು ತಪ್ಪಿಸಲು ವಿದ್ಯುತ್ ಸುರಕ್ಷತೆ ಬಗ್ಗೆ ಹೆಚ್ಚು ಜನಜಾಗೃತಿ ಕೈಗೊಳ್ಳಬೇಕಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದರು.ಗುರುವಾರ ಇಂಧನ ಇಲಾಖೆಯ ವಿದ್ಯುತ್ ಪರಿವೀಕ್ಷಣಾಲಯ ‘ಸ್ಮಾರ್ಟ್ ಎನರ್ಜಿ-ಸ್ಮಾರ್ಟ್ ನೇಷನ್’ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೂನ್ 26 ರಿಂದ ಜು.2 ರವರೆಗೆ ನಡೆಯುವ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯುತ್ ಅಪಾಯ ಹಾಗೂ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ಬಳಕೆ ಕೂಡ ಜಾಸ್ತಿಯಾಗುತ್ತಿದೆ. ಆದರೆ, ಬಳಸುವ ವಿಧಾನ, ಸುರಕ್ಷತಾ ಕ್ರಮಗಳ ಬಗ್ಗೆ ಸರಿಯಾದ ಅರಿವಿಲ್ಲದೇ ಅವಘಡಗಳಾಗಿ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಕೆಲವೊಮ್ಮೆ ಗುಣಮಟ್ಟದ ಉಪಕರಣ ಬಳಸದೆ ಅವಘಡಗಳಾಗಿ ಮಾನವ-ವನ್ಯ ಜೀವಿಗಳ ಪ್ರಾಣಹಾನಿಯಾಗುತ್ತಿದೆ. ಹಾಗಾಗಿ ಅಧಿಕೃತ ವಿದ್ಯುತ್ ಅಳವಡಿಕೆ ಮೂಲಕ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ಕುಮಾರ್ ಪಾಂಡೆ ಮಾತನಾಡಿ, ನಗರದಲ್ಲಿ ಬಹುತೇಕ ಕೊಳಚೆ ಮಂಡಳಿ ಪ್ರದೇಶಗಳು, ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚು ಅವಘಡಗಳಾಗುತ್ತಿದೆ. ಅಪಾಯಕಾರಿ, ಒಣಗಿದ ಮರಗಳಿದ್ದಲ್ಲಿ ತೆರವುಗೊಳಿಸಲು ಸಂಬಂಧಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮಾತನಾಡಿ, ಇಲಾಖೆಗಳು ಸಮನ್ವಯದಿಂದ ಜಿಲ್ಲೆ, ತಾಲೂಕು ಮಟ್ಟದಲ್ಲಿ ಮನೆಗಳಲ್ಲಿ ಜಾಗೃತಿ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಹೆಚ್ಚುವರಿ ಪರಿವೀಕ್ಷಣಾಧಿಕಾರಿ ಎಚ್.ಎಸ್.ವೆಂಕಟೇಶ್ ಮಾತನಾಡಿ, ವಾರ್ಷಿಕ 13 ಸಾವಿರ ಮಂದಿ ವಿದ್ಯುತ್ ಅವಘಡದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜಾಗೃತಿ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ವಿದ್ಯುತ್ ಪರಿವೀಕ್ಷಕ ಟಿ.ಎನ್.ಅಪ್ಪಚ್ಚು, ಅನುಮತಿ ಪಡೆದ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್ ಸೇರಿದಂತೆ ಮತ್ತಿತರರು ಇದ್ದರು.ಕಿರುನಾಟಕ ಪ್ರದರ್ಶನ: ಇದೇ ವೇಳೆ ಕಲಾವಿದ ವಿಕ್ರಂ ಸೂರಿ ಹಾಗೂ ಪ್ರಭುರಾಜ್ ನಿರ್ದೇಶನದ ಸೂರ್ಯ ಕಲಾವಿದರ ತಂಡದಿಂದ ‘ವಿದ್ಯುತ್ ಮತ್ತು ನಮ್ಮ ಬದುಕು’ ಕಿರುನಾಟಕವನ್ನು ಪ್ರದರ್ಶಿಸಲಾಯಿತು.