ಆಸ್ತಿ ಖಾತಾ ಮಾಡಿಕೊಡಲು ಲಂಚ ಕೇಳುತ್ತೀರಲ್ಲಾ?
ಆಸ್ತಿ ಖಾತಾ ಮಾಡಿಕೊಡಲು ಲಂಚ ಕೇಳುತ್ತೀರಲ್ಲಾ? ಆಸ್ತಿಯಲ್ಲಿ ಪಾಲು ಕೇಳುತ್ತಿರಲ್ಲಾ? ಅವರಪ್ಪಗೆ ಹುಟ್ಟಿದ್ದೀರಾ? ಸರ್ಕಾರದ ವೇತನ ಪಡೆದು ಮೊದಲು ಜನರ ಕೆಲಸ ಮಾಡುವುದನ್ನು ಕಲಿಯಿರಿ. ಸ್ವಾತಂತ್ರ್ಯಕ್ಕಾಗಿ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಎಲ್ಲರಿಗೂ ಸಮಾನತೆ ದೊರೆಯಬೇಕಿದೆ. ಇದಕ್ಕಾಗಿ ಸರ್ಕಾರಿ ಅಧಿಕಾರಿಗಳು ಜನರ ಕೆಲಸ ತ್ವರಿತವಾಗಿ ಮಾಡಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಹೇಳಿದರು.
ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು, ಕುಂದುಕೊರತೆಗಳ ದೂರು ವಿಚಾರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಲೇಟರ್ ಹೆಡ್ನಲ್ಲಿ ಹಾಕಿಕೊಳ್ಳಬಾರದು. ಅವರು ದೇಶದ ಆಸ್ತಿ, ಇಂತಹ ಕೆಲಸಕ್ಕೆ ಆಸ್ಪದ ಕೊಡಬಾರದು ಎಂದರು.ಆಡಳಿತದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಪಾಲ್ ಮಸೂದೆ ಸೇರಿದಂತೆ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ಭ್ರಷ್ಟಾಚಾರ ಸರ್ವವ್ಯಾಪಿ ಹರಡಿದೆ. ಮುಂದಿನ ದಿನಗಳಲ್ಲಿ ಜನ ದಂಗೆ ಏಳಬಹುದು ಎಂದರು.
ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಲ್ಲಿ ಸುಧಾರಣೆ ಕಾಣಬೇಕಿದೆ. ನಕಲಿ ವೈದ್ಯರ ಹಾವಳಿ ನಿಯಂತ್ರಿಸಬೇಕು. ಜನರ ಹಕ್ಕುಗಳನ್ನು ಮೊಟಕುಗೊಳಿಸದೇ, ಅವರಿಗೆ ಸವಲತ್ತು ಒದಗಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಕ್ಕಾಗಿ ವಿಳಂಬ ಮಾಡಬಾರದು ಎಂದರು.
ಸುಳ್ಳು ದೂರು ನೀಡಿದರೆ, ಕ್ರಮ:ಲೋಕಾಯುಕ್ತದಲ್ಲಿ ದಾಖಲಾದ ದೂರುಗಳಲ್ಲಿ ಶೇ.30 ರಷ್ಟು ಸುಳ್ಳು ಕೇಸ್ ನೀಡಲಾಗಿದೆ. ಆದರೆ ಲೋಕಾಯುಕ್ತ ಸೆಕ್ಷನ್ 20 ರನ್ವಯ ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲಿಗೆ ಕಳುಹಿಸಲಾಗುತ್ತದೆ. ಪ್ರಾಮಾಣಿಕ ಅಧಿಕಾರಿಗಳು ಇಂತಹ ದೂರುಗಳಿಂದ ಹೆದರುವ ಅವಶ್ಯಕತೆ ಇಲ್ಲ, ಭಯಪಡದೆ ಪ್ರಾಮಾಣಿಕವಾದ ಸೇವೆ ಮಾಡಿದವರಿಗೆ ಲೋಕಾಯುಕ್ತ ಎಂದಿಗೂ ರಕ್ಷಣೆ ನೀಡಲಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಾ ಮಾತನಾಡಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸಾಕ್ಷಿ ನುಡಿಯುವಾಗ ವ್ಯತಿರಿಕ್ತ ಸಾಕ್ಷಿ ಹೇಳುವುದರಿಂದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗುತ್ತವೆ. ಹಳ್ಳಿಯಲ್ಲಿರುವ ಸಾಮಾನ್ಯ ವ್ಯಕ್ತಿ ಸರಿಯಾದ ಸಾಕ್ಷಿ ಹೇಳುತ್ತಾರೆ, ಸರ್ಕಾರಿ ಅಧಿಕಾರಿಗಳು ಸಾಕ್ಷಿ ವೇಳೆ ತಿರುಚುತ್ತಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪರಿಶೀಲಿಸಬೇಕು ಎಂದರು.ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ. ರಾಜಶೇಖರ್, ಉಪನಿಬಂಧಕ ಪೃಥ್ವಿರಾಜ್, ಅರವಿಂದ ಎನ್.ವಿ., ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ. ಅಬ್ದುಲ್ ರೆಹಮಾನ್ ನಂದಗಡಿ, ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಹೊಸಮನಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಲೋಕಾಯುಕ್ತ ಎಸ್.ಪಿ. ಸಿದ್ದರಾಜ್ ಹಾಗೂ ವಿವಿಧ ನ್ಯಾಯಾಧೀಶರು, ಅಧಿಕಾರಿಗಳು ಮತ್ತಿತರರಿದ್ದರು.