ಹಾನಗಲ್ಲ: ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆ ವಿಮಾ ಫಲಾನುಭವಿ ರೈತರಿರುವ ಹಾನಗಲ್ಲ ತಾಲೂಕಿನಲ್ಲಿ ಬೆಳೆ ವಿಮೆ ಬಗೆಗೆ ಹೆಚ್ಚು ಜಾಗೃತಿ ಇದೆ. ಎಲ್ಲೂ ಯಾವುದೇ ರೀತಿಯ ಲೋಪ ವಿಳಂಬಕ್ಕೆ ಅವಕಾಶವಿಲ್ಲದಂತೆ ಬೆಳೆ ಕಟಾವು ಪ್ರಯೋಗಗಳಿಗೆ ಸಿದ್ಧರಾಗಿ ಎಂದು ಗ್ರೇಡ್-೨ ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.
ಮಂಗಳವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ಸಾಂಖಿಕ ಇಲಾಖೆ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬೆಳೆ ಕಟಾವು ಸಿಬ್ಬಂದಿಗೆ ಬೆಳೆ ಕಟಾವು ಹಾಗೂ ಮಾಹಿತಿ ಸಂಗ್ರಹಿಸುವ ವಿಧಾನಗಳನ್ನು ಪರಿಚಯಿಸುವ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳೆವಿಮೆ ಕಂತು ತುಂಬುವುದು ಹಾಗೂ ಬೆಳೆವಿಮೆ ಪಡೆಯುವಲ್ಲಿ ಅತ್ಯಂತ ಜಾಗೃತ ಹಾಗೂ ಸರಿಯಾದ ಜ್ಞಾನವಿರುವ ರೈತರ ಸಮುದಾಯ ಇಲ್ಲಿದೆ. ಮುಂಗಾರಿನ ಬೆಳೆ ಕಟಾವು ಮಾಡುವ ಸಿಬ್ಬಂದಿಗೆ ಈಗ ನಡೆದಿರುವ ತರಬೇತಿ ಅತ್ಯಂತ ಜವಾಬ್ದಾರಿಯುತವಾದುದು. ಯಾವುದೇ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುವುದು ಸಲ್ಲದು. ಬೆಳೆ ಕಟಾವು ಪ್ರಯೋಗವನ್ನಾಧರಿಸಿಯೇ ಬೆಳೆ ವಿಮೆ ಪ್ರಮಾಣ ನಿರ್ಧಾರವಾಗುವುದರಿಂದ ರೈತರ ಸಮಕ್ಷಮದಲ್ಲಿಯೇ ಕಟಾವು ಪ್ರಯೋಗ ನಡೆಸಿ ವರದಿ ಸಲ್ಲಿಸುವುದು ಅತ್ಯಂತ ಅವಶ್ಯಕ. ನಿಷ್ಕಾಳಜಿಗೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಎಂದು ಸಲಹೆ ಮಾಡಿದರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಜಿ.ಆರ್.ಪಾಟೀಲ ತರಬೇತಿ ನೀಡಿ ಮಾತನಾಡಿ, ಬೆಳೆವಿಮೆ ವಿತರಣೆ ಸಂದರ್ಭದಲ್ಲಿ ಹಲವು ಲೋಪ ದೋಷಗಳ ಬಗೆಗೆ ರೈತರಿಂದ ದೂರುಗಳು ಬರುತ್ತವೆ. ಅವು ಆಗದಿರಲು ಬೆಳೆ ಕಟಾವು ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದು ಅತ್ಯಂತ ಮುಖ್ಯ. ರೈತರು ಕೂಡ ಎಲ್ಲ ಬಲ್ಲವರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರ ಸಮ್ಮುಖದಲ್ಲಿ ವಾಸ್ತವ ವರದಿಯನ್ನು ನೀಡಬೇಕು. ಮಾಹಿತಿಯ ಕೊರತೆ ಇದ್ದರೆ ಯಾವುದೇ ಮುಜುಗುರವಿಲ್ಲದೆ ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಸರಿಯಾದ ಬೆಳೆ ಕಟಾವು ವರದಿ ನೀಡಬೇಕು. ಪ್ರಾತ್ಯಕ್ಷಿಕೆಗಳು ಮನೆಯಲ್ಲಿಯೇ ಕುಳಿತು ಅಂದಾಜು ಮಾಡುವ ಕಾಲ ಇದಲ್ಲ. ಪ್ರಾತ್ಯಕ್ಷಿಕೆ ನಡೆಸಬೇಕಾದ ಜಮೀನಿನಲ್ಲಿ ಅಗತ್ಯ ದಾಖಲೆಗಳೊಂದಿಗೆ ಮೊಬೈಲ್ ಆ್ಯಪ್ನ್ನು ಸಹ ಬಳಸಿ ಸರಿಯಾದ ರೀತಿಯಲ್ಲಿ, ಸರಿಯಾದ ಅಳತೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಬೇಕು. ನಿಖರ ಸಕಾಲಿಕ ಮಾಹಿತಿ ನೀಡಬೇಕು. ತಪ್ಪ ಮಾಹಿತಿ ನೀಡಿದರೆ ನೀವೇ ಜವಾಬ್ದಾರರಾಗುವಿರಿ ಎಂದು ಸಲಹೆ ನೀಡಿ ಎಚ್ಚರಿಸಿದರು.ಸಾಂಖಿಕ ಇಲಾಖೆ ಅಧಿಕಾರಿ ಪ್ರಮೋದ ಪಂಡಿತ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಕೆ. ಮೋಹನ್ಕುಮಾರ, ಕೃಷಿ ಇಲಾಖೆ ಅಧಿಕಾರಿ ಸಂಗಮೇಶ, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ ಈ ಸಂದರ್ಭದಲ್ಲಿದ್ದರು.