ಮಾದಕ ವಸ್ತು ವ್ಯಸನದಿಂದ ಹೊರಬರಲಿ: ಎಸ್ಪಿ ಶ್ರೀಹರಿಬಾಬು

KannadaprabhaNewsNetwork |  
Published : Mar 11, 2024, 01:22 AM IST
10ಎಚ್‌ಪಿಟಿ2- ಹಂಪಿಯಲ್ಲಿ ನಡೆದ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿಜೇತಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ ಅವರು  ಪ್ರಶಸ್ತಿ ವಿತರಿಸಿದರು. ಎಸ್ಪಿ ಬಿ.ಎಲ್. ಶ್ರೀಹರಿಬಾಬು ಇದ್ದರು. | Kannada Prabha

ಸಾರಾಂಶ

ಮಾದಕ ವಸ್ತುಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುವ ಪದಾರ್ಥವಾಗಿದ್ದು, ಇದು ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಹೊಸಪೇಟೆ: ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ರಾಷ್ಟ್ರದ ಅಭಿವೃದ್ಧಿಗೆ ಭಾರಿ ನಷ್ಟವಾಗುತ್ತಿದ್ದು, ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದರು.

ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ನಿಮಿತ್ತ ಭಾನುವಾರ ಹಂಪಿಯ ವಿಜಯ ವಿಠಲ ದೇವಾಲಯದಿಂದ ಮ್ಯಾರಥಾನ್ ಸ್ಪರ್ಧೆ ಹಾಗೂ ಡ್ರಗ್ಸ್ ಮತ್ತು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮಕ್ಕೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಪೊಲೀಸ್ ಎಂದು ನಾಮಕರಣ ಆಗಿ 50 ವರ್ಷದ ಹಿನ್ನೆಲೆ ಮ್ಯಾರಥಾನ್ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ಜನಾಂಗ ಮಾದಕ ವಸ್ತುಗಳ ಬಗ್ಗೆ ಅರಿತುಕೊಳ್ಳಬೇಕಿದೆ. ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವವರಲ್ಲಿ ಯುವ ಜನಾಂಗವೇ ಹೆಚ್ಚಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಮಾದಕ ವಸ್ತುಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುವ ಪದಾರ್ಥವಾಗಿದ್ದು, ಇದು ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಡ್ರಗ್ಸ್‌ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿರುವುದುದು ಇತ್ತೀಚೆಗೆ ಹೆಚ್ಚಾಗಿ ಕಂಡುಬಂದಿದೆ. ಮಾದಕ ವ್ಯಸನದಿಂದ ಅಪಘಾತಗಳು ಹಾಗೂ ಆತ್ಯಹತ್ಯೆ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಾದಕ ವ್ಯಸನಿಗಳು ತಮ್ಮದೇ ಆದ ಲೋಕದಲ್ಲಿ ಇರುತ್ತಾರೆ. ಇದರಿಂದ ಅವರ ಮೆದುಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಉತ್ತಮ ಬಾಂಧವ್ಯ ಮಾದಕ ವ್ಯಸನಿಗಳು ಕಳೆದುಕೊಳ್ಳುತ್ತಾರೆ. ಡ್ರಗ್ಸ್ ಸೇರಿ ಮದ್ಯಪಾನ, ತಂಬಾಕು ವಸ್ತುಗಳ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದರು.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಸಿಆರ್ ಬಿ ಕಮಾಂಡೆಂಟ್ ರಾಮಕೃಷ್ಣ, ಎಎಸ್ಪಿ ಸಲೀಂ ಪಾಷಾ, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಬಸವರಾಜ ಅಗಸರ್, ಡಿವೈಎಸ್ಪಿ ಶರಣಬಸವೇಶ್ವರ, ಪಿಐಗಳಾದ ಲಖನ್‌ ಮಸಗುಪ್ಪಿ, ಗುರುರಾಜ್ ಕಟ್ಟಿಮನಿ, ಅಶ್ವತ್ಥ್ ನಾರಾಯಣ ಯಾತನೂರು, ಶ್ರೀಕಾಂತ್, ಮಲ್ಲನಗೌಡ ನಾಯ್ಕರ್, ಪಿಎಸ್ಐಗಳಾದ ಶಿವಕುಮಾರ್ ನಾಯ್ಕ, ಹನುಮಂತಪ್ಪ ತಳವಾರ ಇತರರಿದ್ದರು. ಜಿಲ್ಲಾ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಗೃಹರಕ್ಷಕದಳ, ಎನ್ನೆಸ್ಸೆಸ್, ಎನ್‌ಸಿಸಿ ಸೇರಿದಂತೆ ಇತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರೊಂದಿಗೆ ಮ್ಯಾರಥಾನ್ ಓಟದಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಿದ್ದರು.

10 ಕಿಮೀ ಓಟದ ಸ್ಪರ್ಧೆ: 10 ಕಿಮೀ ಮ್ಯಾರಥಾನ್ಅನ್ನು ಹಂಪಿಯ ವಿಜಯ ವಿಠ್ಠಲ ದೇಗುಲದಿಂದ ಕಮಲಾಪುರ ಮಾರ್ಗವಾಗಿ ಅಕ್ಕ-ತಂಗಿಯರ ಗುಡ್ಡ, ಕೃಷ್ಣ ದೇವಾಲಯ, ಹೇಮಕೂಟ ಮೂಲಕ ಸಾಗಿ ಎದುರು ಬಸವಣ್ಣ ವೇದಿಕೆಗೆ ಮ್ಯಾರಥಾನ್ ಬಂದು ಮುಕ್ತಾಯವಾಯಿತು. ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಕಾಲೇಜಿನ ಪದವಿ ವಿದ್ಯಾರ್ಥಿ ಮಧುಮೋಹನ್ 10 ಕಿಮೀಅನ್ನು 8.45 ನಿಮಿಷ ಮೊದಲ ಸ್ಥಾನ ಪಡೆದರು. ಹೊಸಪೇಟೆಯ ಗೌಳೇರಹಟ್ಟಿಯ ವಿನಯ್ ಎರಡನೇ ಸ್ಥಾನ, ವಿಜಯನಗರ ಕಾಲೇಜಿನ ಪದವಿ ಮೊದಲ ವರ್ಷದ ವಿದ್ಯಾರ್ಥಿ, ವಿಕಲಚೇತನ ಶೇಕ್ಷಾವಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು-ಹೈದ್ರಾಬಾದ್‌ ಹೈಸ್ಪೀಡ್‌ ರೈಲಿಗೆ ಒಪ್ಪಿಗೆ?
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’