ಹೊಸಪೇಟೆ: ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ರಾಷ್ಟ್ರದ ಅಭಿವೃದ್ಧಿಗೆ ಭಾರಿ ನಷ್ಟವಾಗುತ್ತಿದ್ದು, ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಎಂದು ನಾಮಕರಣ ಆಗಿ 50 ವರ್ಷದ ಹಿನ್ನೆಲೆ ಮ್ಯಾರಥಾನ್ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ಜನಾಂಗ ಮಾದಕ ವಸ್ತುಗಳ ಬಗ್ಗೆ ಅರಿತುಕೊಳ್ಳಬೇಕಿದೆ. ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವವರಲ್ಲಿ ಯುವ ಜನಾಂಗವೇ ಹೆಚ್ಚಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಮಾದಕ ವಸ್ತುಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುವ ಪದಾರ್ಥವಾಗಿದ್ದು, ಇದು ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಡ್ರಗ್ಸ್ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿರುವುದುದು ಇತ್ತೀಚೆಗೆ ಹೆಚ್ಚಾಗಿ ಕಂಡುಬಂದಿದೆ. ಮಾದಕ ವ್ಯಸನದಿಂದ ಅಪಘಾತಗಳು ಹಾಗೂ ಆತ್ಯಹತ್ಯೆ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಾದಕ ವ್ಯಸನಿಗಳು ತಮ್ಮದೇ ಆದ ಲೋಕದಲ್ಲಿ ಇರುತ್ತಾರೆ. ಇದರಿಂದ ಅವರ ಮೆದುಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಉತ್ತಮ ಬಾಂಧವ್ಯ ಮಾದಕ ವ್ಯಸನಿಗಳು ಕಳೆದುಕೊಳ್ಳುತ್ತಾರೆ. ಡ್ರಗ್ಸ್ ಸೇರಿ ಮದ್ಯಪಾನ, ತಂಬಾಕು ವಸ್ತುಗಳ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದರು.ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
10 ಕಿಮೀ ಓಟದ ಸ್ಪರ್ಧೆ: 10 ಕಿಮೀ ಮ್ಯಾರಥಾನ್ಅನ್ನು ಹಂಪಿಯ ವಿಜಯ ವಿಠ್ಠಲ ದೇಗುಲದಿಂದ ಕಮಲಾಪುರ ಮಾರ್ಗವಾಗಿ ಅಕ್ಕ-ತಂಗಿಯರ ಗುಡ್ಡ, ಕೃಷ್ಣ ದೇವಾಲಯ, ಹೇಮಕೂಟ ಮೂಲಕ ಸಾಗಿ ಎದುರು ಬಸವಣ್ಣ ವೇದಿಕೆಗೆ ಮ್ಯಾರಥಾನ್ ಬಂದು ಮುಕ್ತಾಯವಾಯಿತು. ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಕಾಲೇಜಿನ ಪದವಿ ವಿದ್ಯಾರ್ಥಿ ಮಧುಮೋಹನ್ 10 ಕಿಮೀಅನ್ನು 8.45 ನಿಮಿಷ ಮೊದಲ ಸ್ಥಾನ ಪಡೆದರು. ಹೊಸಪೇಟೆಯ ಗೌಳೇರಹಟ್ಟಿಯ ವಿನಯ್ ಎರಡನೇ ಸ್ಥಾನ, ವಿಜಯನಗರ ಕಾಲೇಜಿನ ಪದವಿ ಮೊದಲ ವರ್ಷದ ವಿದ್ಯಾರ್ಥಿ, ವಿಕಲಚೇತನ ಶೇಕ್ಷಾವಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದರು.