ಅರ್ಹರಿಗೆ ಆಶ್ರಯ ಮನೆ ನೀಡಿ: ಶಾಸಕ ದೇಶಪಾಂಡೆ

KannadaprabhaNewsNetwork |  
Published : Jul 03, 2024, 12:21 AM IST
ಸಭೆಯಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು. | Kannada Prabha

ಸಾರಾಂಶ

ಅಹ೯ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೊರತು, ನನ್ನಿಂದ ಪಾಪ ಮಾಡಿಸಲು ಹೋಗಬೇಡಿ. ಪುರಸಭೆಯಾಗಲಿ ಇಲ್ಲಿನ ವ್ಯವಸ್ಥೆ ಮೇಲೆ ನನಗೆ ವಿಶ್ವಾಸವಿಲ್ಲ. ನನಗೆ ಈ ಕೆಟ್ಟ ವ್ಯವಸ್ಥೆ ನೋಡಿ ಸಾಕಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಪುಣ್ಯದ ಯೋಜನೆಯಾದ ಆಶ್ರಯ ವಸತಿ ಯೋಜನೆ ವ್ಯಾಪಾರ, ವಹಿವಾಟಿನಂತಾಗಿದೆ. ಫಲಾನುಭವಿಗಳನ್ನು ಗುರುತಿಸುವಲ್ಲಿ ಅಧಿಕಾರಿಗಳು ಎಡವುತ್ತಿದ್ದಾರೆ. ಅತ್ತ ಮನೆಯಿಲ್ಲವೆಂದು ಅರ್ಜಿ ಸಲ್ಲಿಸುವ ಫಲಾನುಭವಿಗಳು ಸಹ ಸಿಕ್ಕ ಮನೆಯನ್ನು ಮಾರಾಟ ಮಾಡುವುದು, ಬಾಡಿಗೆ ನೀಡುವುದಾದರೆ ಮುಂದೆ ಯೋಜನೆ ತಂದು ಪ್ರಯೋಜನವಾದರೂ ಯಾಕೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಎಚ್ಚರಿಸಿದರು.

ಮಂಗಳವಾರ ಸಂಜೆ ಪುರಸಭೆಯ ಸಭಾಭವನದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿ-ಪ್ಲಸ್‌ ೨ ವಸತಿ ಯೋಜನೆಯಲ್ಲಿ ಆಯ್ದ ಫಲಾನುಭವಿಗಳಿಗೆ ಚೀಟಿ ಎತ್ತುವ ಮೂಲಕ ಮನೆಗಳನ್ನು ವಿತರಿಸಿ ಮಾತನಾಡಿದರು.

ಅಹ೯ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೊರತು, ನನ್ನಿಂದ ಪಾಪ ಮಾಡಿಸಲು ಹೋಗಬೇಡಿ. ಪುರಸಭೆಯಾಗಲಿ ಇಲ್ಲಿನ ವ್ಯವಸ್ಥೆ ಮೇಲೆ ನನಗೆ ವಿಶ್ವಾಸವಿಲ್ಲ. ನನಗೆ ಈ ಕೆಟ್ಟ ವ್ಯವಸ್ಥೆ ನೋಡಿ ಸಾಕಾಗಿದೆ ಎಂದರು.

ಸಕಾ೯ರ ವಸತಿ ಯೋಜನೆಯನ್ನು ಮಾಡಿದ್ದೇ ನಿರಾಶ್ರಿತರಿಗೆ ಸೂರನ್ನು ನೀಡುವ ಸದುದ್ದೇಶದಿಂದ. ಹೀಗಿರುವಾಗ ಮನೆಯಿದ್ದವರಿಗೆ ಸ್ಥಿತಿವಂತರಿಗೆ ವಸತಿ ಯೋಜನೆಯಲ್ಲಿ ಮನೆಯನ್ನು ನೀಡಿದರೆ ಹೇಗೆ ಎಂದರು. ಬಡವರಿಗೆ, ನಿರಾಶ್ರಿತರಿಗೆ ಅನ್ಯಾಯವಾಗಬಾರದು. ಇದನ್ನು ಪುರಸಭೆ ಹಾಗೂ ಸಮಿತಿಯ ಸದಸ್ಯರು ಅಥ೯ ಮಾಡಿಕೊಂಡು ಹೆಜ್ಜೆಯಿಡಬೇಕು. ನನ್ನ ಹಿಂದೆ ಏನೇನು ನಡೆಯುತ್ತಿದೆ ಎಂಬ ಎಲ್ಲ ಮಾಹಿತಿಯು ಬರುತ್ತದೆ ಎಂದರು.

ಮನೆಯನ್ನು ಖರೀದಿ ಮಾಡಿದ್ದವರ ಹೆಸರಿಗೆ ದಾಖಲು ಮಾಡಬೇಕೆಂದು ಬಂದ ಅಜಿ೯ಯನ್ನು ಪರಿಶೀಲಿಸಲು ಪ್ರಸ್ತಾಪಿಸಿದ್ದಾಗ ಕೆರಳಿ ಕೆಂಡವಾದ ದೇಶಪಾಂಡೆ, ಮನೆಯಿಲ್ಲವೆಂದೇ ಅವರಿಗೆ ಮನೆಯನ್ನು ನೀಡಲಾಗಿದೆ. ಹೀಗಿರುವಾಗ ಅವರು ಮನೆಯನ್ನು ಹೇಗೆ ಮಾರಾಟ ಮಾಡಿದರು. ಕಾಯಿದೆಯಂತೆ ಮನೆ ಮಾರಾಟ ಮಾಡಲು ಬರುವುದಿಲ್ಲ. ಅದಕ್ಕಾಗಿ ಇಂತಹ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ ಎಂದು ತಾಕೀತು ಮಾಡಿದರು.

ಆಶ್ರಯ ಯೋಜನೆ ಕೆಲವರ ಪಾಲಿಗೆ ಬಿಸಿನೆಸ್‌ ಆಗಿದೆ. ಕೊಟ್ಟ ಮನೆ ಮಾರುವುದು ಮತ್ತೆ ಮನೆಯಿಲ್ಲವೆಂದು ಅಜಿ೯ ಹಾಕುವುದು, ಈ ಪದ್ಧತಿ ಹೀಗೆಯೇ ಮುಂದುವರಿದರೆ ಲಕ್ಷ ಲಕ್ಷ ಮನೆಗಳನ್ನು ತಂದರೂ ಇಲ್ಲಿ ಸಾಲದು. ಅದಕ್ಕಾಗಿ ಆಶ್ರಯ ಯೋಜನೆಯಲ್ಲಿ ಕೈ ಬಾಯಿ ಸ್ವಚ್ಛ ಇಟ್ಕೊಂಡೇ ಸೇವೆ ಸಲ್ಲಿಸಿ ಎಂದರು.

ದುಡ್ಡು ಕೊಡಬೇಡಿ: ಆಶ್ರಯ ಯೋಜನೆಯಾಗಲಿ ಜಿ- ಪ್ಲಸ್‌ ೨ ಯೋಜನೆ ಫಲಾನುಭವಿಗಳು ಯಾರಿಗೂ ದುಡ್ಡು ಕೊಡಬಾರದು. ದುಡ್ಡು ಕೇಳಿದರೆ ನನಗೆ ಫೋನ್‌ ಮಾಡಿ ಎಂದು ದೇಶಪಾಂಡೆ ಎಚ್ಚರಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ, ಮುಖ್ಯಾಧಿಕಾರಿ ಅಶೋಕ ಸಾಳೆನ್ನನವರ, ಆಶ್ರಯ ಸಮಿತಿಯ ಸದಸ್ಯರಾದ ಉಮೇಶ ಬೊಳಶೆಟ್ಟಿ, ಅಣ್ಣಪ್ಪ ಬಂಡಿವಾಡ, ತನುಶ್ರೀ ವಿನಾಯಕ ಬಾಳೆಕುಂದ್ರಿ, ವಸತಿ ವಿಭಾಗದ ರಾಮಚಂದ್ರ ಮೋಹಿತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸ್ನೇಹಿ ಯೋಜನೆಗಳು ಅಗತ್ಯ: ಸತೀಶ್
ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಿಸಿದ ಮಲ್ಲಮ್ಮ