ನಿಮ್ಮ ಪ್ರೀತಿ, ಆಶೀರ್ವಾದ ಕೊಡಿ: ನಟ ರವಿಚಂದ್ರನ್

KannadaprabhaNewsNetwork | Published : Mar 4, 2024 1:15 AM

ಕನಕಗಿರಿ ಜನರ ಪ್ರೀತಿ ಇಲ್ಲಿಗೆ ಬಂದಾಗಲೇ ಗೊತ್ತಾಯಿತು. ಅವರು ನನ್ನನ್ನು ಆಹ್ವಾನ ಮಾಡುವ ರೀತಿಯಲ್ಲಿಯೇ ನನಗೆ ಗೊತ್ತಾಯಿತು.

ಕನಕಗಿರಿ: ನನಗೆ ದುಡ್ಡು ಮಾಡುವ ಬಯಕೆ, ಹಂಬಲ ಇಲ್ಲ. ನಾನು ಯಾವತ್ತೂ ದುಡ್ಡು ಮಾಡಲು ಸಿನೆಮಾ ಮಾಡಿಲ್ಲ. ಸಿನೆಮಾ ಮಾಡಬೇಕು ಎಂದುಕೊಂಡು ಮಾಡಿದ್ದೇನೆ. ಈಗಲೂ ಮಾಡುತ್ತೇನೆ, ಅದಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದರೆ ಸಾಕು ಎಂದು ಖ್ಯಾತ ನಟ ವಿ.ರವಿಚಂದ್ರನ್ ಹೇಳಿದರು.ಕನಕಗಿರಿಯ ಉತ್ಸವದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನಕಗಿರಿ ಜನರ ಪ್ರೀತಿ ಇಲ್ಲಿಗೆ ಬಂದಾಗಲೇ ಗೊತ್ತಾಯಿತು. ಅವರು ನನ್ನನ್ನು ಆಹ್ವಾನ ಮಾಡುವ ರೀತಿಯಲ್ಲಿಯೇ ನನಗೆ ಗೊತ್ತಾಯಿತು. 6ನೇ ಕ್ಲಾಸ್ ಫೇಲ್ ನಾನು, ಅದಾದ ಮೇಲೆ ನಾನು ಶಾಲೆ ಹೋಗಿಲ್ಲ. ಸಿನೆಮಾವೇ ನನ್ನ ಶಾಲೆ. ಪ್ರೇಮಲೋಕ ನನಗೆ ಬದುಕು ಕೊಟ್ಟಿತು. 40 ವರ್ಷದ ನಂತರವೂ ಪ್ರೇಮಲೋಕದ ಬಗ್ಗೆ ಮಾತನಾಡುತ್ತಾರೆ. ಈಗಿನ ಜನರೇಶನ್ ಗೆ ಪ್ರೇಮಲೋಕ ಗೊತ್ತಿಲ್ಲ. ಅದರ ಹವಾ ಗೊತ್ತಿಲ್ಲ. ಹೀಗಾಗಿ ಮತ್ತೆ ಪ್ರೇಮ ಲೋಕ ಮಾಡುತ್ತಿದ್ದೇನೆ. ಸಚಿವ ಶಿವರಾಜ ತಂಗಡಗಿ ಏನು ಮಾಡಿದ್ದಾರೆ ಗೊತ್ತಿಲ್ಲ, ಅವರು ಜನರಿಗೆ ನೀರು ಕೊಟ್ಟಿದ್ದಾರೆ. ಅದುವೇ ದೊಡ್ಡ ಪುಣ್ಯ ಕಾರ್ಯ ಎಂದರು.ಕನಕಗಿರಿಯಲ್ಲಿ ಒಂದು ಕಾಲದಲ್ಲಿ ಬಂಗಾರದ ಮಳೆ ಸುರಿದಿದೆ. ಈಗ ನನ್ನ ಜೀವನದಲ್ಲಿಯೂ ಬಂಗಾರ ಸುರಿಯುವ ಕಾಲ ಬರಬೇಕಾಗಿದೆ. ಬದುಕಲು ನೂರಾರು ವಿಧಾನ ಇದೆ. ಆದರೆ, ಅದಕ್ಕಿಂತ ಮಿಗಿಲಾಗಿ ನಿಧಾನ ಬದುಕು ಮುಖ್ಯ. 1986ಲ್ಲಿ ಪ್ರೇಮಲೋಕ ಸಿನೆಮಾ ಮಾಡಿದೆ. ನಂತರ ರಣಧೀರ, ಶಾಂತಿಕ್ರಾಂತಿ ಮಾಡಿದೆ. ಸೋತಿದ್ದೇನೆ. ಗೆದ್ದಿದ್ದೇನೆ, ಆದರೂ ನಮ್ಮಪ್ಪ ನನ್ನ ಮೇಲೆ ಪ್ರೀತಿಯನ್ನು ಕಡಿಮೆ ಮಾಡಲಿಲ್ಲ ಎಂದರು.ಮನುಷ್ಯನಿಗೆ ದುಡ್ಡು ಬೇಕಾಗಿಲ್ಲ. ಪ್ರೀತಿ ಬೇಕು. ಒಂದು ಗಂಟೆ ನಿಮ್ಮ ಮೊಬೈಲ್ ಬಂದ್ ಮಾಡಿ, ನಿಮ್ಮ ಮನೆಯಲ್ಲಿ ಪ್ರೇಮಲೋಕ ಹುಟ್ಟುತ್ತದೆ. ಅದು ನಿಜವಾದ ಜೀವನ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಮಧ್ಯೆಯೇ ಪ್ರೇಮಲೋಕ ಇರಲಿದೆ. ಪ್ರತಿಯೊಬ್ಬರು ಅದರಲ್ಲಿ ಭಾಗಿಯಾಗಬಹುದು. ಇದಕ್ಕಾಗಿ ನನ್ನ ಇನ್ ಸ್ಟಾ ಗ್ರಾಮ್ ನಲ್ಲಿ ನಿಮ್ಮ ಕುಟುಂಬದ ಫೋಟೋ ಹಂಚಿಕೊಳ್ಳಿ, ನಾನು ನಿಮ್ಮನ್ನು ಕರೆಯಿಸಿ, ಶೂಟಿಂಗ್ ಮಾಡಿಸುತ್ತೇನೆ. ನಿಮ್ಮನ್ನು ಸಿನೆಮಾದಲ್ಲಿ ಬಳಕೆ ಮಾಡಿಕೊಳ್ಳುತ್ತೇನೆ ಎಂದರು.