ಕ್ರೀಡಾಕೂಟಗಳಿಂದ ಉತ್ತಮ ಬಾಂಧವ್ಯ: ಶಾಸಕ ಬಸನಗೌಡ

KannadaprabhaNewsNetwork | Published : Mar 11, 2024 1:16 AM

ಸಾರಾಂಶ

ಆಧುನಿಕ ಯುಗದಲ್ಲಿ ದಿನನಿತ್ಯದ ಕೇಲಸ ಕಾರ್ಯಗಳ ಮಧ್ಯೆಯೂ ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಮೆದಕಿನಾಳ ಗ್ರಾಮದಲ್ಲಿ ಓಪನ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದರಿಂದ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗಲಿದೆ. ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ದಿವಂಗತ ಶಿವರಾಜ ಹಿರೇಮಠ ಗುಡಿಹಾಳ ಸ್ಮರಣಾರ್ಥವಾಗಿ ಗೌರಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಓಪನ್ ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ದಿನನಿತ್ಯದ ಕೆಲಸ ಕಾರ್ಯಗಳ ಮಧ್ಯೆಯೂ ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆದ್ದರಿಂದ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಸದೃಢರಾಗಿರಲು ಸಹಕಾರಿಯಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಆದ್ದರಿಂದ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದರು.

ನಂತರ ಕೆಪಿಪಿಸಿ ಪ್ರಧಾನಕಾರ್ಯದರ್ಶಿ ಮಲ್ಲಿಕಾಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಉತ್ತಮವಾಗಿ ಆಟವಾಡಿ ಸೋಲು ಗೆಲುವು ಸಹಜ ಎರಡನ್ನು ಸಮನಾಗಿ ಸ್ವೀಕರಿಸಿ ಎಂದರು.

ಪಂದ್ಯಾವಳಿಯಲ್ಲಿ 60 ತಂಡಗಳು ಭಾಗವಹಿಸಿವೆ. 1 ತಿಂಗಳ ಕಾಲ ಪಂದ್ಯಾವಳಿ ನಡೆಯಲಿದೆ ವಿಜೇತರಾದವರಿಗೆ ಪ್ರಥಮ ಬಹುಮಾನ 51 ಸಾವಿರ ರು, ದ್ವಿತೀಯ ಬಹುಮಾನ 25 ಸಾವಿರ ರು, ತೃತೀಯ ಬಹುಮಾನ 15 ಸಾವಿರ ರು, ಉತ್ತಮ ಬ್ಯಾಟ್ಸ್ಮನ್, ಉತ್ತಮ ಬೌಲರ್. ಪಂದ್ಯ ಶ್ರೇಷ್ಟರಿಗೆ ತಲಾ 2500 ರು. ಬಹುಮಾನ ಕೊಡಲಾಗುತ್ತದೆ ಎಂದು ಕ್ರೀಡಾಕೂಟದ ಸಂಚಾಲಕ ಇಬ್ರಾಹಿಂ.ಎಚ್.ಮೆದಕಿನಾಳ ಹಾಗು ತಮ್ಮಣ್ಣ ಕಲ್ಮಂಗಿ, ವಿರೇಶ ಗುರಿಕೇರ್ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ, ನೀರುಪಾದೇಪ್ಪ, ವೆಂಕಟರೆಡ್ಡಿ, ಮಹಿಬೂಬ್ ಸಾಬ್, ಫಾರೂಕ್‌ ಸಾಬ್ ತುರ್ವಿಹಾಳ ಸೇರಿದಂತೆ ಊರಿನ ಮುಖಂಡರು ಇದ್ದರು.

Share this article