ಒಣ ಬೇಸಾಯದಿಂದಲೂ ಉತ್ತಮ ಇಳುವರಿ ಪಡೆಯಲು ಸಾಧ್ಯ: ಸೋಮನಾಥ ರೆಡ್ಡಿ

KannadaprabhaNewsNetwork |  
Published : Jun 03, 2025, 12:06 AM IST
ಕೊಟ್ಟೂರಿನಲ್ಲಿ ಇಕ್ರಾ ಸಂಸ್ಥೆ ಹಾಗೂ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಆಯೋಜಿಸಿದ್ದ ಬೀಜ ಮೇಳ ಕಾರ್ಯಕ್ರಮದಲ್ಲಿ ರಾಶಿ ಪೂಜೆ ನೆರವೇರಿಸಲಾಯಿತು. | Kannada Prabha

ಸಾರಾಂಶ

ಮಳೆಯನ್ನೇ ನಂಬಿ ಬೆಳೆಯುವ ಬದಲು ಒಣ ಬೇಸಾಯ ವ್ಯವಸ್ಥೆಯಿಂದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.

ಬೀಜ ಮೇಳ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿ ಪರ ರೈತ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಮಳೆಯನ್ನೇ ನಂಬಿ ಬೆಳೆಯುವ ಬದಲು ಒಣ ಬೇಸಾಯ ವ್ಯವಸ್ಥೆಯಿಂದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಈ ನಿಟ್ಟಿನತ್ತ ರೈತರು ಚಿಂತನೆ ನಡೆಸಿ ಆಗುತ್ತಿರುವ ನಷ್ಟ ತಪ್ಪಿಸಬಹುದು ಎಂದು ಪ್ರಗತಿ ಪರ ರೈತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮನಾಥ ರೆಡ್ಡಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಕ್ರಾ ಸಂಸ್ಥೆ ಮತ್ತು ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಆಯೋಜಿಸಿದ್ದ ಬೀಜ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

ರೈತರು ಭೂಮಿಯಲ್ಲಿ ಒಂದೇ ಬೆಳೆ ಬೆಳೆಯದೇ ಮಿಶ್ರ ಬೆಳೆ ಬೆಳೆಯಬೇಕು. ಕ್ರಮೇಣ ಬದಲಾದ ವಾತಾವರಣ, ಅತಿಯಾದ ಅಥವಾ ವಿರಳವಾದ ಮಳೆಯಿಂದ ಸಹಜ ಬೆಳೆಯೇ ಇಲ್ಲವಾಗಿ ಅಸಹಜ ಬೆಳೆಯೇ ಪ್ರಾಮುಖ್ಯತೆ ಪಡೆಯುತ್ತಿದೆ. ಮಳೆ ನಂಬಿ ಕೃಷಿಗಾಗಿ ರೈತರು ಹೆಚ್ಚು ವೆಚ್ಚ ಮಾಡದೇ ಒಣ ಬೇಸಾಯ ಪದ್ಧತಿಯನ್ನು ರೂಢಿ ಮಾಡಿಕೊಳ್ಳಬೇಕು. ತೊಗರಿ ಇತರೆ ಬೆಳೆಗಳು ಬೆಳೆಯುತ್ತಿರುವಾಗ ಕುಡಿ ಚಿವುಟುತ್ತಿದ್ದರೆ ಅಧಿಕ ಇಳುವರಿ ಸಿಗುತ್ತದೆ. ಸಾಮಾನ್ಯವಾಗಿ ಬೆಳೆದರೆ ಇಳುವರಿ ಕಡಿಮೆಯಾಗಿ ಲಾಭ ಇಲ್ಲವಾಗುತ್ತದೆ. ನಾನು ಇಂದಿಗೂ ಒಣ ಬೇಸಾಯ ಪದ್ಧತಿಯಲ್ಲಿ ಉತ್ತಮ ಬೆಳೆ ತೆಗೆದು ಅಧಿಕ ಲಾಭ ಪಡೆಯುತ್ತಿರುವೆ ಎಂದರು.

ಹೈಬ್ರಿಡ್ ಬೀಜಗಳ ಬಿತ್ತನೆ ಮಾಡಿದಾಗ ಅಧಿಕ ಗೊಬ್ಬರ, ಕೀಟನಾಶಕ ಬಳಸುವುದು ಅನಿವಾರ್ಯವಾಗಿ ಉತ್ಪನ್ನಗಳು ಸಹ ವಿಷಪೂರಿತವಾಗಿ ಮನುಷ್ಯ ಆರೋಗ್ಯಕ್ಕೆ ಹಾನಿಕರವಾಗುತ್ತಿವೆ. ಹಿಂದಿನ ದಿನಗಳಲ್ಲಿ ರೈತರು ಮುಂದಿನ ಬೆಳೆಗಾಗಿ ತಾವೇ ಬೀಜೋತ್ಪಾದನೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಕಂಪನಿಗಳ ಬಿತ್ತನೆ ಬೀಜವನ್ನು ಅವಲಂಬಿಸಿ ನಷ್ಟ ಮಾಡಿಕೊಳ್ಳುತ್ತಿರುವುದಲ್ಲದೇ ಭೂಮಿ ಫಲವತ್ತತೆಯನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಕ್ರಾ ಸಂಸ್ಥೆಯವಯವರು ಈ ಭಾಗದಲ್ಲಿ 10ವರ್ಷಗಳಿಂದ ಸಂಘಟನೆ ಮಾಡುವ ಮೂಲಕ ಅತ್ಯಧಿಕ ರೈತರನ್ನು ಸಾವಯವ ಕೃಷಿಯತ್ತ ಸೆಳೆದಿದ್ದಾರೆ. ಅನೇಕ ರೈತರು ಜವಾರಿ ಬೀಜೋತ್ಪಾದನೆ ಮಾಡುತ್ತಿರುವುದು ಇಲ್ಲಿನ ರೈತರ ಅದರಲ್ಲೂ ಮಹಿಳಾ ರೈತರಲ್ಲಿ ಮೂಡಿರುವ ಜವಾಬ್ದಾರಿ ತೋರಿಸಿದೆ ಎಂದರು.

ಮತ್ತೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕೆರೆಯ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಕಳೆದು ಹೋದ ಜವಾರಿ ಬೀಜೋತ್ಪಾದನೆ ಗತ ಕಾಲ ಮತ್ತೆ ಬರುವಂತಾಗುವಲ್ಲಿ ನಾರೀಶಕ್ತಿಯೇ ಕಾರಣ. ನಾಲ್ಕು ತಿಂಗಳು ಶ್ರಮ ವಹಿಸಿ ಗಿಡ ಬೆಳೆಸಿದರೆ ನೂರಾರು ವರ್ಷ ಕಾಲ ಅದು ಫಲ ನೀಡುತ್ತದೆ. ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಂಡು ಬೆಳೆಯುವ ಶಕ್ತಿ ಗಿಡ ಮರಗಳಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಲಗಳ ಬದುವಿನಲ್ಲಿ ಸುತ್ತಲೂ ಬೇಲ, ಸೀತಾಫಲ, ಮಾವು, ಬಿಲ್ವ ಸೇರಿ ಇತರೆ ಮರಗಳನ್ನು ಬೆಳೆಸಿ ವರ್ಷ ಪೂರ್ತಿ ಆದಾಯ ಕಾಣಬಹುದು ಎಂದರು.

ಇಕ್ರಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಮಾತನಾಡಿ, ಇಕ್ರಾ ಸಂಸ್ಥೆಯು ಕಳೆದ 10ವರ್ಷಗಳಲ್ಲಿ ಈ ಭಾಗದಲ್ಲಿ 8500 ಕುಟುಂಬವನ್ನು ಸಾವಯವತ್ತ ಬರುವಂತೆ ಮಾಡಿದೆ. ಮತ್ತೆ 3ಸಾವಿರ ಕುಟುಂಬಗಳು ಸಾವಯವ ಕೃಷಿಗೆ ಬರುತ್ತಿದ್ದಾರೆ. ಹೆಚ್ಚು ಇಳುವರಿ ಸಿಗುತ್ತದೆ ಎಂಬ ಕಾರಣಕ್ಕೆ ಹೈಬ್ರೀಡ್ ಬೀಜ ಮೊರೆ ಹೋಗಿರುವ ನಮ್ಮ ರೈತರು ಅದಕ್ಕಾಗಿ ತಗಲುವ ಹೆಚ್ಚು ವೆಚ್ಚದತ್ತ ಗಮನ ಹರಿಸಿಲ್ಲ. ಎಷ್ಟೇ ಭೂಮಿ ಇದ್ದರೂ ಪೂರ್ಣವಾಗಿ ಒಂದೇ ಬೆಳೆ ಬೆಳೆಯುವುದನ್ನು ರೈತರು ಬಿಟ್ಟು ಮಿಶ್ರ ಬೆಳೆ ಕೃಷಿ ಆದ್ಯತೆ ನೀಡಬೇಕು. ನಮ್ಮ ಸಂಘಟನೆ ಪ್ರಯತ್ನವಾಗಿ ನೂರಾರು ರೈತರು ಜವಾರಿ ಬೀಜೋತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದರು. ರೈತ ಚಿತ್ರದುರ್ಗದ ಮಲ್ಲಿಕಾರ್ಜುನಯ್ಯ ಮಾತನಾಡಿದರು. ರೈತರಾದ ಸಿದ್ದಲಿಂಗಪ್ಪ, ಇಕ್ರಾದ ಪ್ರಧಾನ ಕಾರ್ಯದರ್ಶಿ ಶಾರದಮ್ಮ ಇದ್ದರು.

ಇಕ್ರಾ ಸಂಸ್ಥೆ ಕೊಟ್ಟೂರು ಘಟಕದ ಕೆ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಕೊಟ್ರೇಶ ಮಾತನಾಡಿದರು. ಮೇಳದಲ್ಲಿ ತಾಲೂಕಿನ ಅನೇಕ ರೈತರು 60ಕ್ಕೂ ಹೆಚ್ಚು ಬಗೆಯ ಬಿತ್ತನೆ ಬೀಜಗಳ ಮಾರಾಟ ಹಾಗೂ ಪ್ರಾತ್ಯಕ್ಷತೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ