ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ, ರೈತರಿಗೆ ಬೆಳೆ ಪರಿಹಾರ ಕೊಡಲು ದುಡ್ಡಿಲ್ಲ. ಹತ್ತು ರುಪಾಯಿ ಭಿಕ್ಷೆ ಹಾಕಿ. ನಿಮ್ ದುಡ್ಡು ಕಳಿಸಿ ಖಜಾನೆ ತುಂಬಿಸ್ತೇವೆ.
ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಭಿಕ್ಷೆ ಬೇಡಿದ ಪರಿ ಇದು. ಬಿ.ಡಿ ರಸ್ತೆಯಲ್ಲಿ ಬರುವ ಪ್ರತಿ ವ್ಯಾಪಾರಿ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದ ಕಾರ್ಯಕರ್ತರು ಹಸಿರು ಟವೆಲ್ ಹಾಸಿ ಭಿಕ್ಷೆ ಬೇಡುವುದರ ಮೂಲಕ ಪ್ರತಿಭಟನೆ ಸಂದೇಶ ರವಾನಿಸಿದರು. ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಪಾವತಿಯಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಕಳೆದ ವರ್ಷ ಮುಂಗಾರು-ಹಿಂಗಾರು ಮಳೆ ಬಾರದ ಕಾರಣ ರೈತರು ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದರೂ ಇದುವರೆವಿಗೂ ರೈತರಿಗೆ ಎನ್ಡಿಆರ್ಎಫ್ ಹಾಗೂ ಬೆಳೆ ವಿಮೆ ಹಣ ಖಾತೆಗಳಿಗೆ ಜಮೆ ಆಗಿರುವುದಿಲ್ಲ. ಮಧ್ಯಂತರ ಬೆಳೆ ವಿಮೆ ಕೂಡ ರೈತರ ಕೈಸೇರಿಲ್ಲ ಎಂದು ಪ್ರತಿಭಟನಾ ನಿರತ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಸಣ್ಣ ರೈತರ ಖಾತೆಗಳಿಗೆ ಪ್ರತಿ ತಿಂಗಳು 2 ಸಾವಿರ ರು.ಗಳನ್ನು ಜಮ ಮಾಡಿ ಅವಮಾನ ಮಾಡುವ ಬದಲು ಹೆಕ್ಟೇರ್ಗೆ 25 ಸಾವಿರ ರು.ಗಳನ್ನು ನೀಡಬೇಕು. ಇದಲ್ಲದೆ ಕೂಡಲೆ ಬೆಳೆ ವಿಮೆ ಪಾವತಿಸಿ ಸಂಕಷ್ಟದಲ್ಲಿರುವ ರೈತರನ್ನು ಪಾರು ಮಾಡುವಂತೆ ಒತ್ತಾಯಿಸಿದ ಪ್ರತಿಭಟನಾನಿರತ ರೈತರು ದನ-ಕರುಗಳಿಗೆ ಗೋಶಾಲೆಯನ್ನು ತೆರೆದು ಮೇವು ಮತ್ತು ನೀರು ಪೂರೈಸುವಂತೆ ಆಗ್ರಹಿಸಿದರು.ರೈತರು ಸ್ವಂತ ಖರ್ಚಿನಲ್ಲಿ ಟಿಸಿ ಮತ್ತು ಕಂಬಗಳನ್ನು ಅಳವಡಿಸಿಕೊಳ್ಳುವಂತೆ ಕಳೆದ ಸೆಪ್ಟಂಬರ್ನಲ್ಲಿ ಕಾನೂನು ಜಾರಿಗೆ ತಂದಿದ್ದನ್ನು ಸರ್ಕಾರ ಹಿಂದಕ್ಕೆ ಪಡೆದು ಮೊದಲಿನಂತೆ ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಎಲ್ಲಾ ಬ್ಯಾಂಕಿನಲ್ಲಿರುವ ಸಾಲ ಮನ್ನಾ ಮಾಡಿ ರೈತರಿ ನೆರವಿಗೆ ಧಾವಿಸುವಂತೆ ರೈತರು ಆಗ್ರಹಿಸಿದರು. ಭಿಕ್ಷಾಟನೆಯಿಂದ ಸಂಗ್ರಹವಾದ 2150 ರು. ಗಳನ್ನು ಕಂದಾಯ ಇಲಾಖೆಗೆ ಪಾವತಿಸಿ ರಸೀದಿ ಪಡೆಯಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಧನಂಜಯ, ಸಿ.ನಾಗರಾಜ ಮುದ್ದಾಪುರ, ಎಸ್.ಕೆ.ಕುಮಾರಸ್ವಾಮಿ, ಬಿ.ಕೆಂಚಪ್ಪ, ಬಿ.ಪಿ ತಿಪ್ಪೇಸ್ವಾಮಿ, ಎಂ.ಎಸ್.ಪ್ರಭು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ ಜಾನುಕೊಂಡ, ವೈ.ಎನ್.ಅಶೋಕ, ಪಾಪಯ್ಯ, ರಂಗೇಗೌಡ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.